ಬೆಂಗಳೂರು:

ಬೆಂಗಳೂರು, ಮಾ.21- ಕೋವಿಡ್ ನಾಲ್ಕನೆ ಅಲೆ ಆಗಸ್ಟ್ ವೇಳೆಗೆ ಕಾಣಿಸಿಕೊಳ್ಳುವ ಮುನ್ಸೂಚನೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ನ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಶಶೀಲ್ ನಮೋಶಿ ಅವರ ಪ್ರಸ್ತಾಪಕ್ಕೆ ಉತ್ತರ ನೀಡಿದ ಸಚಿವರು, ಕೊರೊನಾದ ರೂಪಾಂತರ ಉಪತಳಿ ಬಿ.ಎ.2 ಮೊದಲು ಫಿಲಿಫೈನ್ಸ್ನಲ್ಲಿ ಕಾಣಿಸಿಕೊಂಡಿತ್ತು.
ನಂತರ 40 ದೇಶಗಳಲ್ಲಿ ಕಾಣಿಸಿಕೊಂಡಿದೆ. ಈ ಮೊದಲು ಮೂರನೆ ಅಲೆ ಕಾಣಿಸಿಕೊಳ್ಳುವ ಮುನ್ಸೂಚನೆ ನೀಡಿದ ಸಂಸ್ಥೆಯೇ ನಾಲ್ಕನೆ ಅಲೆಯ ಮುನ್ಸೂಚನೆಯನ್ನು ನೀಡಿದೆ. ಬಹುತೇಕ ಆಗಸ್ಟ್ ನಲ್ಲಿ ಕೋವಿಡ್ ನಾಲ್ಕನೆ ಅಲೆ ಬರುವ ಮುನ್ಸೂಚನೆ ನೀಡಿದೆ ಎಂದು ಹೇಳಿದರು.
ನಮ್ಮಲ್ಲಿ ಲಸಿಕಾ ಅಭಿಯಾನ ಉತ್ತಮವಾಗಿದೆ. ಹಾಗಾಗಿ ನಾಲ್ಕನೆ ಅಲೆ ಎದುರಾದರೂ ಸಾರ್ವಜನಿಕರು ಹೆದರುವ ಅಗತ್ಯ ಇಲ್ಲ. ರಾಜ್ಯದಲ್ಲಿ 1.25 ಕೋಟಿ ಡೋಸ್ ಲಸಿಕೆ ನೀಡಿದೆ. ಬೂಸ್ಟರ್ ಲಸಿಕೆಯನ್ನು ನೀಡಲಾಗುತ್ತಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಕೊಡಿಸಲು ಮಕ್ಕಳ ಪೋಷಕರ ಮನವೋಲಿಸಲಾಗುವುದು ಎಂದು ಹೇಳಿದರು.
ಲಸಿಕಾಕರಣ ಕೋವಿಡ್ಅನ್ನು ತಡೆಯುತ್ತದೆ. ಆದರೂ ಕೋವಿಡ್ ತಡೆಯುವ ಮುನ್ನೆಚರಿಕೆ ಕ್ರಮಗಳನ್ನು ಅನುಸರಿಸುವುದು ಅಗತ್ಯ ಇದೆ. ಒಳಾಂಗಣದಲ್ಲಿ ಮಾಸ್ಕ ಕಡ್ಡಾಯ ಮಾಡುವ ಚಿಂತನೆಯನ್ನು ಸರ್ಕಾರ ನಡೆಸಿದೆ. ಶೀಘ್ರವೇ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ಈ ಬಗ್ಗೆ ನಡೆಸಿ ನಿರ್ಧರಿಸಲಾಗುವುದು ಎಂದು ಹೇಳಿದರು.
ನಾವು ಈಗಾಗಲೇ ಮೂಲ ಸೌಲಭ್ಯಗಳನ್ನು ಹೆಚ್ಚಿಸಲು ಆದ್ಯತೆ ನೀಡಲಾಗಿದೆ. ರಾಜ್ಯದಲ್ಲಿ 55,256 ಆಮ್ಲಜನಕ ಬೆಡ್ಗಳನ್ನು ಸ್ಥಾಪಿಸಲಾಗಿದೆ. 300 ಮೆಟ್ರಿಕ್ ಟನ್ ಆಮ್ಲಜನಕದ ಸಾಮಥ್ರ್ಯವನ್ನು, 1270 ಮೆಟ್ರಿಕ್ ಟನ್ ಗಳಿಗೆ ಹೆಚ್ಚಿಸಲಾಗಿದೆ. ನಮ್ಮಲ್ಲಿ ಆಮ್ಲಜನಕ ಉತ್ಪಾದನೆ ಮತ್ತು ಸಂಗ್ರಹ ಸಾಮಥ್ರ್ಯ ಬೇಡಿಕೆಗೆ ಅನುಗುಣವಾಗಿದೆ ಎಂದರು.
265 ಪ್ರಯೋಗಾಲಯಗಳನ್ನು ಸ್ಥಾಪನೆ ಮಾಡಲಾಗಿದ್ದು, ದಿನಕ್ಕೆ 2.5 ಲಕ್ಷ ಪರೀಕ್ಷೆ ಮಾಡುವ ಸಾಮಥ್ರ್ಯ ವೃದ್ಧಿಸಿಕೊಂಡಿದ್ದೇವೆ. ಈ ಮೊದಲ ಮೂರು ಅಲೆಗಳ ಅನುಭವದಿಂದ ಚಿಕಿತ್ಸೆ ನೀಡುವುದನ್ನು ವೈದ್ಯರು ಅಭ್ಯಾಸ ಮಾಡಿಕೊಂಡಿದ್ದಾರೆ. ಹಾಗಾಗಿ ನಾಲ್ಕನೆ ಅಲೆ ಬಂದರೂ ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








