ಇಂದಿನಿಂದ ಧಾರವಾಡದಲ್ಲಿ 4 ದಿನ ಕೃಷಿ ಮೇಳ

ಧಾರವಾಡ

    “ಹವಾಮಾನ ವೈಪರೀತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು” ಈ ಬಾರಿಯ ಕೃಷಿ ಮೇಳದ ಘೋಷವಾಕ್ಯವಾಗಿದೆ. ಹವಾಮಾನ ವೈಪರೀತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ಹೆಸರಿನ ಘೋಷವಾಕ್ಯದಲ್ಲಿ ರೈತರ ಜಾತ್ರೆ ಎನಿಸಿರುವ ಧಾರವಾಡ ಕೃಷಿ ಮೇಳ  ಇಂದಿನಿಂದ (ಸೆ.21 ರಿಂದ 24)ರವರೆಗೆ ನಾಲ್ಕು ದಿನ ಧಾರವಾಡದ ಕೃಷಿ ವಿಶ್ವವಿದ್ಯಾಲಯ ದ ಆವರಣದಲ್ಲಿ ನಡೆಯಲಿದೆ. ಕಳೆದ ಎರಡು ತಿಂಗಳಿಂದ ಈ ಮೇಳಕ್ಕಾಗಿ ಸಿದ್ಧತೆ ನಡೆದಿದೆ.

    ನಾಲ್ಕು ದಿನಗಳ ಕಾಲ ಆಯೋಜಿಸಿರುವ ಕೃಷಿ ಮೇಳದ ಮೂಲಕ ಅಲ್ಪ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ರೈತರಿಗೆ ಕೃಷಿ ತಂತ್ರಜ್ಞಾನಗಳನ್ನು ತಲುಪಿಸುವುದು ಮೇಳದ ಮುಖ್ಯ ಉದ್ದೇಶವಾಗಿದೆ. ಮೇಳದಲ್ಲಿ 15 ಲಕ್ಷಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆಯಿದೆ. ಮೊದಲ ಬಾರಿಗೆ ಕ್ಯೂಆರ್‌ ಕೋಡ್ ಮೂಲಕ ಮೂಲಕ ನೋಂದಣಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

    ಮೇಳದ ಪ್ರಮುಖ ಆಕರ್ಷಣೆ ಕೃಷಿ ವಸ್ತು ಪ್ರದರ್ಶನ. ಇದರಲ್ಲಿ 150 ಹೈಟೆಕ್ ಮಳಿಗೆ, 241 ಸಾಮಾನ್ಯ ಮಳಿಗೆ, 110 ಯಂತ್ರೋಪಕರಣ ಮಳಿಗೆ, 27 ಟ್ರ್ಯಾಕ್ಟರ್, ಭಾರಿ ಯಂತ್ರೋಪಕರಣಗಳ ಮಳಿಗೆ ಹಾಗೂ 28 ಆಹಾರ ಮಳಿಗೆಗಳು ಇರಲಿವೆ. ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಬೆಳೆ ಪದ್ಧತಿ ಹಾಗೂ ಕೃಷಿ ತಾಂತ್ರಿಕತೆಗಳು ಸಮಗ್ರ ಬೆಳೆ ನಿರ್ವಹಣೆ, ಜೈವಿಕ ಗೊಬ್ಬರ ಹಾಗೂ ಪೀಡೆನಾಶಕಗಳು, ಎಣ್ಣೆಕಾಳು, ದ್ವಿದಳ ಧಾನ್ಯಗಳು ಮತ್ತು ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ನೈಸರ್ಗಿಕ ಕೃಷಿ, ಸಾವಯವ ಕೃಷಿ ಮತ್ತು ಮಣ್ಣಿನ ಫಲವತ್ತತೆ ಸಂರಕ್ಷಣೆ, ಹೈಟೆಕ್ ತೋಟಗಾರಿಕೆ, ಫಲ-ಪುಷ್ಪ ಪ್ರದರ್ಶನ ಇರುತ್ತದೆ.

    ಇಷ್ಟೇ ಅಲ್ಲದೇ, ಕೀಟ ಪ್ರಪಂಚ, ಸುಧಾರಿತ ಕೃಷಿ ಯಂತ್ರೋಪಕರಣ ಹಾಗೂ ಕಿಸಾನ್ ಡ್ರೋನ್​ ಪ್ರದರ್ಶನ, ಕೃಷಿ ತಜ್ಞರೊಂದಿಗೆ ಸಮಾಲೋಚನೆ, ರೈತರ ಆವಿಷ್ಕಾರಗಳು, ವಿಶೇಷ ಸಾಧನೆಗೈದ ರೈತರೊಂದಿಗೆ ಸಂವಾದ ಸೇರಿದಂತೆ ಕೃಷಿ ತಂತ್ರಜ್ಞಾನವನ್ನು ರೈತರಿಗೆ ತೋರಿಸಲಾಗುತ್ತದೆ. ಜಾನುವಾರುಗಳ ಪ್ರದರ್ಶನ ರೈತರ ಗಮನ ಸೆಳೆಯಲಿದೆ. ಇದೇ ವೇಳೆ ಹಿಂಗಾರು ಬಿತ್ತನೆಗಾಗಿ ಬೀಜ ಮೇಳವೂ ಇರಲಿದೆ.

    ರಾಜ್ಯ ಹಾಗೂ ಹೊರ ರಾಜ್ಯಗಳ ರೈತರ ಅನುಕೂಲಕ್ಕಾಗಿ ಮೇಳದಲ್ಲಿ ಹಲವು ಸೌಲಭ್ಯ ಕಲ್ಪಿಸಲಾಗಿದೆ. ರೈತರಿಗೆ ಕ್ಷೇತ್ರ ಪ್ರಾತ್ಯಕ್ಷಿಕೆಗಳಿಗೆ ಭೇಟಿ, ಉಚಿತ ವೈದ್ಯಕೀಯ ಸಲಹಾ ಕೇಂದ್ರ, ಸಾರಿಗೆ ನಿರ್ವಹಣಾ ವ್ಯವಸ್ಥೆ ಮತ್ತು ಪೊಲೀಸ್ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ಮೇಳದ ಮೊದಲ ದಿನ ಶನಿವಾರ ಕೃಷಿಮೇಳ ವೇದಿಕೆಯಲ್ಲಿ ಬೀಜ ಮೇಳ ಉದ್ಘಾಟನೆ ಹಾಗೂ ವಿಚಾರಗೋಷ್ಠಿ ನಡೆಯಲಿದೆ. 2ನೇ ದಿನ ಭಾನುವಾರ ಮೇಳದ ಉದ್ಘಾಟನೆ ಹಾಗೂ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಲಿದ್ದಾರೆ. 3ನೇ ದಿನ ಸೋಮವಾರ ರೈತರಿಂದ ರೈತರಿಗಾಗಿ ಕಾರ್ಯಕ್ರಮ, ಪ್ರಗತಿಪರ ರೈತರ ಅನಿಸಿಕೆಗಳ ಕಾರ್ಯಕ್ರಮ ಇರಲಿದೆ. ಇನ್ನು ಕೊನೆ ದಿನ ಮಂಗಳವಾರ ಚರ್ಚಾಗೋಷ್ಠಿ ಹಾಗೂ ಸಮಾರೋಪ ನಡೆಯಲಿದೆ.

   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ (ಸೆ.22) ಬೆಳಿಗ್ಗೆ 10.30ಕ್ಕೆ ಕೃಷಿ ಮೇಳವನ್ನು ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್.ಲಾಡ್, ಪಾಲ್ಗೊಳ್ಳುವರು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸುವರು. ಮಧ್ಯಾಹ್ನ 2.30ಕ್ಕೆ ‘ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಸಾವಯವ ಮತ್ತು ನೈಸರ್ಗಿಕ ಕೃಷಿಯ ಪಾತ್ರ’ ಗೋಷ್ಠಿ ನಡೆಯಲಿದೆ.

   ಮೇಳದಲ್ಲಿ ಮೊದಲ ಬಾರಿಗೆ ‘ಸ್ಟಾರ್ಟ್ ಅಪ್ ಪೆವಿಲಿಯನ್’ ವ್ಯವಸ್ಥೆ ಮಾಡಲಾಗಿದೆ. ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ. ಆಹಾರ, ಯಾಂತ್ರಿಕತೆ, ಐಒಟಿ ಹಾಗೂ ಹರ್ಬಲ್ ಮೆಡಿಸಿನ್‌ಗೆ ಸಂಬಂಧಿಸಿದ ಮಳಿಗೆಗಳು ಈ ಪೆವಿಯಲಿಯನ್‌ನಲ್ಲಿ ಇರಲಿವೆ. ಕರ್ನಾಟಕ, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳ 22 ಮಳಿಗೆಗಳು ಸ್ಟಾರ್ಟ್ ಅಪ್‌ಗಳು ಪಾಲ್ಗೊಳ್ಳಲಿವೆ. ಕೇಂದ್ರ ಸರ್ಕಾರದ ಆರ್‌ಕೆವಿವೈ ಇನ್ನೋವೇಷನ್ ಹಾಗೂ ಅಗ್ರಿಪ್ರಿನಿಯರ್‌ಷಿಪ್ ಕಾರ್ಯಕ್ರಮದಡಿ ಪ್ರೋತ್ಸಾಹ ನೀಡಿರುವ ಸ್ಟಾರ್ಟ್ ಅಪ್‌ಗಳು ಇವಾಗಿವೆ.

   ಸ್ಟಾರ್ಟ್ ಅಪ್ ಸ್ಥಾಪನೆಗೆ ಮೊದಲ ಹಂತದಲ್ಲಿ ₹5 ಲಕ್ಷ ನೀಡಲಾಗುವುದು. ಅನ್ವೇಷಣೆ ಯೋಜನೆ ಅನುಷ್ಠಾನ ಹಂತ ಇದು. ಸ್ಪಾರ್ಟ್ ಅಪ್ ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸಿದರೆ ಎರಡನೇ ಹಂತದಲ್ಲಿ ರೂ. 25 ಲಕ್ಷ ನೀಡಲಾಗುವುದು. ಕಬ್ಬು ಕಟಾವು ಯಂತ್ರ, ಕಡಲೆ ಗಿಡದ ತುದಿ ಚಿವುಟುವ ಸೌರಚಾಲಿತ ಯಂತ್ರ ಮೊದಲಾದ ಸ್ಟಾರ್ಟ್ ಅಪ್ ಮಳಿಗೆಗಳು ಮೇಳದಲ್ಲಿ ಇರಲಿವೆ.

 

Recent Articles

spot_img

Related Stories

Share via
Copy link