ಕುಣಿಗಲ್ :
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಸರಿಯಾಗಿ ಜಾಬ್ ಕಾರ್ಡುಗಳನ್ನು ವಿತರಿಸದೆ ಬರೀ ಸಬೂಬು ಹೇಳುತ್ತಿರುವ ಅಧಿಕಾರಿಗಳ ಮೇಲೆ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದರು.
ನಗರದ ತಾಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಸಭೆಗೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಗೆ ಬರದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ತರಾಟೆ ತೆಗೆದುಕೊಂಡರು. ಗ್ರಾಪಂ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ವರ್ಗದವರಿಗೆ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಜಾಬ್ಕಾರ್ಡ್ ವಿತರಿಸುವಲ್ಲಿ ಅಧಿಕಾರಿಗಳು ವಿಫಲಗೊಂಡಿದ್ದಾರೆ. ಇನ್ನೂ 7 ಸಾವಿರ ಪರಿಶಿಷ್ಟ ಜಾತಿ, ವರ್ಗದವರಿಗೆ ಜಾಬ್ಕಾರ್ಡ್ ವಿತರಿಸಬೇಕಾಗಿದ್ದು ಕೇವಲ 2,500 ಕುಟುಂಬಗಳಿಗೆ ಜಾಬ್ಕಾರ್ಡ್ ನೀಡಿ 5 ಸಾವಿರ ಎಸ್ಸಿ, ಎಸ್ಟಿ ಜನಾಂಗದವರಿಗೆ ಜಾಬ್ಕಾರ್ಡ್ ನೀಡದೆ ಕೂಲಿಯಿಂದ ವಂಚಿಸಲಾಗಿದೆ. ಈ ಬಗ್ಗೆ ಕೂಡಲೆ ಕ್ರಮ ತೆಗೆದುಕೊಂಡು ಪಂಚಾಯಿತಿ ಮಟ್ಟದಲ್ಲಿ ಪ್ರತಿ ಮನೆಯ ಸರ್ವೆ ಕಾರ್ಯ ನಡೆಸಿ ಇನ್ನು 15 ದಿನಗಳಲ್ಲಿ ಜಾಬ್ಕಾರ್ಡ್ ನೀಡಬೇಕೆಂದು ಸೂಚಿಸಿದರು.
ತೋಟಗಾರಿಕೆ, ರೇಷ್ಮೆ, ಗ್ರಾಮ ಪಂಚಾಯಿತಿ, ಪಶುಸಂಗೋಪನೆ, ಕೃಷಿ ಇಲಾಖೆ ಸೇರಿದಂತೆ ವೈಯಕ್ತಿಕ ಕಾಮಗಾರಿಗಳ ಅನುಷ್ಟಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಮಹತ್ತರ ಕಾರ್ಯ ಯಶಸ್ವಿಯಾಗಿ ಅನುಷ್ಠಾನ ಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಯಾವುದೇ ಗ್ರಾಪಂ ಅಧ್ಯಕ್ಷ, ಸದಸ್ಯರು ರಾಜಕೀಯ ವ್ಯಕ್ತಿಗಳಿಗೆ ಅಧಿಕಾರಿಗಳು ಮಣೆ ಹಾಕದೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಉದ್ಯೋಗವನ್ನು ಸೃಷ್ಟಿ ಮಾಡಿ ಆರ್ಥಿಕವಾಗಿ ದುರ್ಬಲಗೊಂಡಿರುವ ರೈತರು, ಪರಿಶಿಷ್ಟ ಜಾತಿ ವರ್ಗದ ವಿಧವೆಯರು, ಅಂಗವಿಕಲರಿಗೆ ವೈಯಕ್ತಿಕವಾಗಿ ಆರ್ಥಿಕ ಶಕ್ತಿಯನ್ನು ತುಂಬಬೇಕಾಗಿದೆ. ಕೇವಲ ಗ್ರಾಮ ಪಂಚಾಯಿತಿ ಸದಸ್ಯರು ರಾಜಕಾರಣಿಗಳ ಒತ್ತಡದಿಂದ ಕೆಲಸ ನಿರ್ವಹಿಸಿದಾಗ ನಿಜವಾದ ಕೂಲಿಕಾರರು ಉದ್ಯೋಗದಿಂದ ವಂಚಿತರಾಗುತ್ತಾರೆ. ತೋಟಗಾರಿಕೆ, ಕೃಷಿ, ಅರಣ್ಯ, ಪಶುಪಾಲನಾ ಇಲಾಖೆಗಳು ಯೋಜನೆಯನ್ನು ಅನುಷ್ಠಾನಕ್ಕೆ ತಂದು 100 ಮಾನವ ದಿನಗಳ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡಬೇಕಾಗಿದೆ. ಉದ್ಯೋಗವಿಲ್ಲದೆ ಯಾವುದೇ ವ್ಯಕ್ತಿ ವಂಚಿತ ಆಗಬಾರದು ಎಂದು ತಿಳಿಸಿದರು. 32 ಸಾವಿರ ಜಾಬ್ಕಾರ್ಡ್ ನೀಡಬೇಕಾದ ಜಾಗದಲ್ಲಿ ಕೇವಲ 12 ಸಾವಿರ ಜಾಬ್ಕಾರ್ಡ್ ನೀಡಿ ಉಳಿಕೆಯವರಿಗೆ ಉದ್ಯೋಗವನ್ನು ನೀಡುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಕಾರ್ಯದರ್ಶಿ, ಉಪಕಾರ್ಯದರ್ಶಿ, ಇಓ ಪ್ರತಿದಿನ ಗ್ರಾಪಂಗೆ ಭೇಟಿ ನೀಡಿ, ಕಾಮಗಾರಿಗಳ ಪರಿಶೀಲನೆ ಮಾಡಬೇಕೆಂದು ಸೂಚಿಸಿದರು. ಮುಂದಿನ ದಿನಗಳಲ್ಲಿ ಕೆರೆಗಳು, ಶಾಲಾ ಮೈದಾನಗಳು, ಸ್ಮಶಾನ, ನಾಲೆ, ಹಳ್ಳ ಇವುಗಳ ಅಭಿವೃದ್ಧಿಗೆ ಕೆಲಸ ಮಾಡಬೇಕೆಂದು ಸ್ರೀ ಶಕ್ತಿ ಗುಂಪುಗಳಿಗೆ ಆದ್ಯತೆ ನೀಡುವ ಮೂಲಕ ಹೆಚ್ಚಿನ ಕೆಲಸ ನೀಡಬೇಕೆಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಓ ವಿದ್ಯಾಕುಮಾರಿ ಮಾತನಾಡುತ್ತಾ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅನೇಕ ಅವ್ಯವಹಾರ ದೂರುಗಳು ಬರುತ್ತಿವೆ. ಅಧಿಕಾರಿಗಳು ಬಿಪಿಎಲ್ ಕುಟುಂಬಸ್ಥರಿಗೆ ಜಾಬ್ ಕಾರ್ಡ್ ನೀಡುವ ಮೂಲಕ ಉದ್ಯೋಗ ಸೃಷ್ಟಿ ಮಾಡಬೇಕು. ಕೃಷಿಹೊಂಡ, ದನದ ಕೊಟ್ಟಿಗೆ. ಹಿಂಗು ಗುಂಡಿ ಮುಂತಾದ ಕೆಲಸಗಳಿಗೆ ಆದ್ಯತೆ ನೀಡುವ ಮೂಲಕ ಸಾಮಾನ್ಯರಿಗೆ ತಲುಪಿಸುವಂತಹ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ ಎಂದರು. ಅರಣ್ಯ, ತೋಟಗಾರಿಕೆ, ಪಶುಪಾಲನೆ, ನೀರಾವರಿ ಇಲಾಖೆ, ಗ್ರಾಪಂ, ರೇಷ್ಮೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಡಾ.ಎಚ್.ಡಿ.ರಂಗನಾಥ್, ಜಿಪಂ ಉಪಕಾರ್ಯದರ್ಶಿ, ತಹಶೀಲ್ದಾರ್ ಮಹಾಬಲೇಶ್ವರ, ಇಓ ಜೋಸೆಫ್, ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಮುಖ್ಯಸ್ಥರು, ಪಿಡಿಓಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
