ಹಂಪಿ
ಕನ್ನಡ ವಿಶ್ವವಿದ್ಯಾಲಯದ ಅನುದಾನ, ಆಡಳಿತಾತ್ಮಕ ವಿಷಯ ಸೇರಿದಂತೆ ಸಕಲ ರೀತಿಯಿಂದಲೂ ಶಕ್ತಿ ತುಂಬುವ ಕೆಲಸವನ್ನು ರಾಜ್ಯ ಸರಕಾರ ಮಾಡಲಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ಹಂಪಿ ಸಮೀಪದ ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಕೆಪ್ಯಾಸಿಟಿ ಬಿಲ್ಡಿಂಗ್ ವರ್ಕಶಾಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು ಸಚಿವರಾದ ನಂತರ ಈ ವಿವಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದು, ನಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ನಾನು ವಿವಿ ಉಪಕುಲಪತಿ ಮಲ್ಲಿಕಾ ಘಂಟಿ ಅವರೊಂದಿಗೆ ಚರ್ಚಿಸಿ ಅಗತ್ಯ ಸಹಕಾರ ಮತ್ತು ವಿವಿಗೆ ಶಕ್ತಿ ತುಂಬಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಕುರಿತು ಚಂದ್ರಶೇಖರ ಕಂಬಾರ್ ಸೇರಿದಂತೆ ನಾಡಿನ ಅನೇಕ ಸಾಹಿತಿಗಳು ಈ ಕುರಿತು ಪ್ರಸ್ತಾಪಿಸಿದ್ದಾರೆ ಎಂದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ನೇಮಕಾತಿ ಗೊಂದಲಕ್ಕೆ ಸಂಬಂಧಿಸಿದ ಪ್ರಶ್ನೆಗ ಉತ್ತರಿಸಿದ ಅವರು ಯುಜಿಸಿ ನಿಯಮಾನುಸಾರ ಮಾಡಬೇಕೇ ಅಥವಾ ನಮ್ಮ ಸರಕಾರದ ರೂಪಿಸಿದ ಕುಟ್ಹಿನೋ ವರದಿ ಅನುಸಾರ ಮಾಡಬೇಕೇ ಎಂಬುದನ್ನು ಚರ್ಚಿಸಲಾಗುತ್ತಿದ್ದು, ಅತ್ಯಂತ ಶೀಘ್ರವಾಗಿ ಮತ್ತು ಪಾರದರ್ಶಕವಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಅನುದಾನಕ್ಕೊಳಪಟ್ಟ ಪದವಿ ಕಾಲೇಜುಗಳ 843 ಬೋಧಕ ಹುದ್ದೆಗಳನ್ನು ಅತ್ಯಂತ ಶೀಘ್ರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
*ಸರಕಾರ ಸುಭದ್ರ: ರಾಜ್ಯ ಸರಕಾರ ಸುಭದ್ರವಾಗಿದ್ದು ಐದು ವರ್ಷಗಳ ಅವಧಿ ಪೂರೈಸಲಿದೆ. ಸಚಿವ ಸ್ಥಾನ ತಪ್ಪಿದ ಕಾರಣ ರಮೇಶ ಜಾರಕಿಹೋಳಿ ಅವರು ಸ್ವಲ್ಪ ಅಸಮಾಧಾನಗೊಂಡಿದ್ದಾರಷ್ಟೇ ; ಕೋಪ ಸಹಜ ಎಂದರು.ಈ ಸಂದರ್ಭದಲ್ಲಿ ವಿವಿ ಉಪಕುಲಪತಿ ಮಲ್ಲಿಕಾ ಘಂಟಿ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
