ಪಾವಗಡ
ಮನೆಯ ಮೇಲೆ ವಿದ್ಯುತ್ ತಂತಿ ಹಾದು ಹೋಗಿದ್ದು, ತೆರವು ಗೊಳಿಸಲು ಬೆಸ್ಕಾಂ ಇಲಾಖೆಗೆ ಮನವಿ ಮಾಡಿದರೂ, ತೆರವು ಗೊಳಿಸಿಲ್ಲ. ಹಾಗಾಗಿ ಪಾವಗಡ ಯುವಸೇನೆ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ ಘಟನೆ ಪಟ್ಟಣದ ಬಳೆಗಾರರ ಬೀದಿಯಲ್ಲಿ ಜರುಗಿದೆ.
ಪಾವಗಡ ಪಟ್ಟಣದ ಬಳೆಗಾರರ ಬೀದಿಯಲ್ಲಿ ವಾಸ ಇರುವ ಬಸ್ ಏಜೆಂಟ್ ಮೃತ್ಯುಂಜಯ ಎನ್ನುವರ ಮನೆಯ ಮೇಲೆ ವಿದ್ಯುತ್ ಲೈನ್ ಹಾಕಲಾಗಿದೆ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಕಳೆದ 4 ತಿಂಗಳಿಂದ ಮನೆಯಲ್ಲಿ ಜೀವ ಭಯದಿಂದ ವಾಸಿಸುತ್ತಿದ್ದು, ಲೈನ್ ತೆರವು ಗೊಳಿಸಿ ಎಂದು ಬಾಧಿತ ಕುಟುಂಬ ಅಲವತ್ತುಕೊಂಡಿದೆ.
ಮನೆಯ ಮಾಲೀಕನ ಪುತ್ರ ಯುವ ಸೇನೆಯ ನಿರ್ದೇಶಕ ಅನಿಲ್ ಮಾತನಾಡಿ, ಬೆಸ್ಕಾಂ ಇಲಾಖೆಯು ನಮ್ಮ ಗಮನಕ್ಕೆ ತರದೆ ವಿದ್ಯುತ್ ಲೇನ್ ಹಾಕಿದೆ. ಇದರಿಂದ ತೊಂದರೆಯಾಗುತ್ತಿದೆ. ಇದನ್ನು ತೆರವು ಗೊಳಿಸಲು ಬೆಸ್ಕಾಂ ಗೆ ದೂರು ಕೊಡಲು ಹೋದರೆ ದೂರನ್ನು ಸ್ವೀಕರಿಸಲಿಲ್ಲ. ಕೊನೆಗೆ ಪಾವಗಡ ಯುವಸೇನೆಯಿಂದ ದೂರು ಕೊಟ್ಟರೆ ದೂರನ್ನು ಸ್ವೀಕರಿಸಿದ್ದು, ಇಲ್ಲಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಲೈನ್ನ್ನು ತೆರವುಗೊಳಿಸದಿದ್ದರೆ ಪಾವಗಡ ಯುವ ಸೇನೆಯಿಂದ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.
ಮನೆಯ ಮಾಲೀಕರಾದ ರತ್ನಮ್ಮ ಮಾತನಾಡಿ, ನಮ್ಮ ಅನುಮತಿ ಇಲ್ಲದೇ ಮನೆಯ ಮೇಲೆ ವಿದ್ಯುತ್ ಲೇನ್ ಎಳೆದಿದ್ದು, ಚಿಕ್ಕಹುಡುಗರು, ಹೆಂಗಸರು ಮನೆ ಮೇಲೆ ಹೋಗಲು ಭಯಪಡುತ್ತಿದ್ದಾರೆ. ನಾವು ಬಡವರಾಗಿದ್ದು, ಬೆಸ್ಕಾಂ ಇಲಾಖೆ ನಮ್ಮ ನೆರವಿಗೆ ಬರಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ನೆರೆಯ ಮನೆಯ ನವೀನ್ ಮಾತನಾಡಿ, ಮನೆಯ ಮೇಲೆ ವಿದ್ಯುತ್ ಲೈನ್ ಹಾಕಿರುವುದರಿಂದ ನಮ್ಮ ಹುಡುಗರು ಮನೆಯ ಮೇಲೆ ಹತ್ತದಂತೆ ಕಾವಲು ಕಾಯುವಂತಾಗಿದೆ. ಇದರಿಂದ ಪ್ರಾಣಭಯ ಇದ್ದು, ಈ ಕೂಡಲೆ ಲೈನ್ನ್ನು ತೆರವು ಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ತಾಲ್ಲೂಕಿನಲ್ಲಿ ವಿದ್ಯುತ್ ಲೈನ್ ಹಾಕುವ ಕಾಮಗಾರಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದ್ದು, ಕೂಡಲೆ ಉನ್ನತಾಧಿಕಾರಿಗಳು ತನಿಖೆ ಮಾಡಬೇಕೆಂದು ರಾಮಾಂಜಿನಪ್ಪ, ಪ್ರೇಮಕ್ಕ, ಜಯಂತ್, ಶಶಾಂಕ್, ಮಂಜುಳಾ,ಪಲ್ಲವಿ,ಮತ್ತಿತರರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
