ಬೆಂಗಳೂರು
ಮದುವೆ ಆಸೆ ತೋರಿಸಿ ಅಮೆರಿಕಾದ ಸಾಫ್ಟ್ವೇರ್ ಇಂಜಿನಿಯರ್ರೊಬ್ಬರಿಂದ 18 ಲಕ್ಷ ಹಣ ಪಡೆದು ವಂಚನೆ ನಡೆಸಿರುವ ಐನಾತಿ ಯುವತಿ ಹಾಗೂ ಆಕೆಯ ತಂದೆಯ ಪತ್ತೆಗೆ ಪರಪ್ಪನ ಅಗ್ರಹಾರ ಪೊಲೀಸರು ಶೋಧ ನಡೆಸಿದ್ದಾರೆ.ಅಮೆರಿಕಾದ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ರಾಗಿದ್ದ ಜ್ಯೋತಿಕೃಷ್ಣನ್ ಅವರಿಗೆ ಕಳೆದ 2013ರಲ್ಲಿ ಭಾರತ್ ಮ್ಯಾಟ್ರಿಮೋನಿ .ಕಾಮ್ ಮೂಲಕ ಯುವತಿ ರಮ್ಯ ನಾಯರ್ ತಂದೆ ಕುಟಿರಾಮ್ನ ಪರಿಚಯವಾಗಿತ್ತು.
ಈ ವೇಳೆ ರಮ್ಯ ತಂದೆ ನನ್ನ ಮಗಳು ಐಎಎಸ್ ಮಾಡುತ್ತಿದ್ದು, 2 ವರ್ಷಗಳ ಬಳಿಕ ಮದುವೆ ಮಾಡಿಕೊಡುವುದಾಗಿ ಮಾತುಕತೆ ನಡೆಸಿದ್ದರು.ತಂದೆ-ಮಗಳು ಹಣದ ಸಮಸ್ಯೆ ಎಂದು ಟೆಕ್ಕಿ ಜ್ಯೋತಿಕೃಷ್ಣನ್ನಿಂದ ಹಣ ಪಡೆಯಲು ಶುರು ಮಾಡಿದ್ದರು. ಅಂತಾರಾಷ್ಟ್ರೀಯ ಹಣ ವರ್ಗಾವಣೆ ಸೇರಿ ರಮ್ಯ ಮೂರು ಕಂತುಗಳಲ್ಲಿ 8 ಲಕ್ಷ ರೂ. ಪಡೆದಿದ್ದಳು. ಬಳಿಕ 2017ರಲ್ಲಿ ಮದುವೆ ಹಾಗೂ ತುರ್ತು ವೈದ್ಯಕಿಯ ಖರ್ಚಿನ ಹೆಸರಿನಲ್ಲಿ 10 ಲಕ್ಷ ರೂ. ಪಡೆದಿದ್ದಳು.
2017ರಲ್ಲಿ ಜ್ಯೋತಿಕೃಷ್ಣನ್ ವಿದೇಶದಿಂದ ಬೆಂಗಳೂರಿಗೆ ಬಂದು ತಂದೆ- ಮಗಳ ಜೊತೆ ಮಾತನಾಡಿದ್ದನು. ಈ ವೇಳೆ ಕುಟಿರಾಮ್ 2018ರಲ್ಲಿ ಮದುವೆ ಮಾಡಿಕೊಡ್ತಿವಿ ಎಂದು ಜ್ಯೋತಿಕೃಷ್ಣನ್ಗೆ ಹೇಳಿದ್ದಾನೆ. ತಂದೆ-ಮಗಳ ಮಾತು ನಂಬಿ ಜ್ಯೋತಿಕೃಷ್ಣನ್ ಮತ್ತೆ ವಿದೇಶಕ್ಕೆ ತೆರಳಿದ್ದರು.
ಜ್ಯೋತಿಕೃಷ್ಣನ್ 2019ರಲ್ಲಿ ಮತ್ತೆ ವಿದೇಶದಿಂದ ಬೆಂಗಳೂರಿಗೆ ಬಂದಾಗ ರಮ್ಯ ಹಾಗೂ ಕುಟಿರಾಮ್ ಮನೆ ಖಾಲಿ ಮಾಡಿಕೊಂಡು ನಾಪತ್ತೆಯಾಗಿದ್ದರು. ಇಬ್ಬರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಒಟ್ಟು 18 ಲಕ್ಷ ವಂಚಿಸಿರುವ ಆರೋಪ ಈಗ ಕೇಳಿಬರುತ್ತಿದೆ.ಮದುವೆಯಾಗುವುದಾಗಿ ನಂಬಿಸಿ 18 ಲಕ್ಷ ವಂಚಿಸಿರುವ ರಮ್ಯ ಹಾಗೂ ತಂದೆ ಕುಟಿರಾಮ್ ವಿರುದ್ಧ ಜ್ಯೋತಿಕೃಷ್ಣನ್ ಪರಪ್ಪನ ಅಗ್ರಹಾರ ಠಾಣೆಯಲ್ಲಿದೂರು ನೀಡಿದ್ದು ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








