ಹಂಪಿ
ವಿಶ್ವವಿದ್ಯಾಲಯಗಳು ಕೇವಲ ಪಠ್ಯಪುಸ್ತಕದಲ್ಲಿರುವ ಅಂಶಗಳನ್ನು ಬೋಧಿಸುವುದಕ್ಕೆ ಮಾತ್ರ ಸೀಮಿತವಾಗದೇ ಉದ್ಯೋಗ ಆಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲಿಸುವುದಕ್ಕೆ ಮುಂದಾಗಬೇಕು. ಈ ಮೂಲಕ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗುವ ಕೆಲಸ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ಹಂಪಿ ಸಮೀಪದ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು, ರೂಸಾ ಮತ್ತು ಕನ್ನಡ ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉದ್ಯೋಗ ಪಡೆಯುವುದಕ್ಕೆ ಬೇಕಾದ ಶಕ್ತಿಯನ್ನು ತುಂಬುವ ಕೆಲಸ ಮಾಡಬೇಕು ಮತ್ತು ಯಾವ ಮೂಲ ಉದ್ದೇಶಗಳನ್ನಟ್ಟಿಕೊಂಡು ವಿವಿಗಳು ಆರಂಭವಾಗಿವೆಯೋ ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದು ಹೇಳಿದ ಸಚಿವ ಜಿಟಿಡಿ ಅವರು ರೂಸಾ ಅಡಿ ನೀಡಲಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಿ ಎಂದರು.
ಸರಕಾರಿ ಶಾಲಾ ಕಾಲೇಜುಗಳು ಸಮರ್ಪಕವಾಗಿದ್ದರೇ
ತಮ್ಮ ಮಕ್ಕಳನ್ನು ಖಾಸಗಿ ಶಾಲಾ-ಕಾಲೇಜುಗಳಿಗೆ ದಾಖಲಿಸುತ್ತಿರಲಿಲ್ಲ ಎಂಬುದನ್ನು ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದ ಸಚಿವರು ಸರಕಾರಿ ಶಾಲಾ- ಕಾಲೇಜುಗಳಿಗೆ ಸರಕಾರ ಇಷ್ಟೆಲ್ಲಾ ಸೌಕರ್ಯ ಮತ್ತು ಬೋಧಕರಿಗೆ ಆಕರ್ಷಕ ಸಂಬಳ ನೀಡುತ್ತಿದ್ದರೂ ಬೋಧನೆ ಎಂಬುದು ಅಷ್ಟಕಷ್ಟೆ ಎಂಬಂತಾಗಿದೆ. ಶಿಕ್ಷಣ ಪಡೆದ ಮಕ್ಕಳಲ್ಲಿ ಶೇ.80ರಷ್ಟು ನಿರುದ್ಯೋಗಿಗಳಾಗುತ್ತಿದ್ದಾರೆ. ಗುರು ಎಂಬ ಪುಣ್ಯಸ್ಥಾನದಲ್ಲಿರುವ ಬೋಧಕರು ತಮ್ಮ ಹುದ್ದೆಗೆ ಸಮರ್ಪಕವಾಗಿ ನ್ಯಾಯ ಕಲ್ಪಿಸುತ್ತಿದ್ದೀರಾ ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
700ಕೋಟಿ ರೂ.ವೆಚ್ಚದಲ್ಲಿ 220ಕಾಲೇಜುಗಳಿಗೆ ಮೂಲ ಸೌಕರ್ಯ ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದ ಸಚಿವ ಜಿಟಿಡಿ ಅವರು 3ವರ್ಷದಲ್ಲಿ ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದಕುಮಾರ್ ಮಾತನಾಡಿ,ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ದೂರದೃಷ್ಟಿಯಿಟ್ಟುಕೊಳ್ಳಿ; ಅದನ್ನು ಸಾಧಿಸಲು ಪ್ರಯತ್ನಿಸಿ ಎಂದರು. ದೂರದೃಷ್ಟಿ ಬೋಧಕರಿಗೂ ಅಗತ್ಯ ಎಂದರು.
ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಜತೆಗೆ ಚಾರಿತ್ರ್ಯವಂತರಾಗಬೇಕು ಮತ್ತು ಸಮಾಜದ ಮೇಲೆ ಕಕ್ಕುಲಾತಿ ಹಾಗೂ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಇಡೀ ವಿಶ್ವಕ್ಕೆ ಪ್ರಾಚೀನ ಕಾಲದಲ್ಲಿ ಹೆಸರಾಗಿದ್ದ ನಳಂದ ಮತ್ತು ತಕ್ಷಶಿಲ ವಿಶ್ವವಿದ್ಯಾಲಯದಂತೆ ಹಂಪಿ ಕನ್ನಡ ವಿವಿಯೂ ಬೆಳೆಯಲಿ ಎಂದು ಆಶಿಸಿದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ಎ.ಕೋರಿ ಮಾತನಾಡಿ,ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆಯು ವಿವಿ ಗಳಿಗೆ ನೀಡುವ ಗುಣಮಟ್ಟ ಮತ್ತು ಇನ್ನೀತರ ವಿಷಯಗಳನ್ನಿಟ್ಟುಕೊಂಡು ನೀಡುವ ರ್ಯಾಕಿಂಗ್ ಪದ್ದತಿ ಅತ್ಯುತ್ತಮವಾಗಿದ್ದು, ಇದನ್ನೇ ನಾಲ್ಕೈದು ರಾಜ್ಯಗಳು ಅನುಸರಿಸಲು ಮುಂದಾಗಿವೆ ಎಂದರು. ರೂಸಾ ಅಡಿ ನೀಡಲಾಗುತ್ತಿರುವ ಅನುದಾನವನ್ನು ನಮ್ಮ ರಾಜ್ಯದಲ್ಲಿ ಅತ್ಯುತ್ತಮವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು.
ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಅನಿಲಕುಮಾರ್ ಅವರು ಮಾತನಾಡಿ, ಉನ್ನತ ಶಿಕ್ಷಣದಲ್ಲಿ ನಮ್ಮ ರಾಜ್ಯ ದೇಶದಲ್ಲಿ 17ನೇ ಸ್ಥಾನದಲ್ಲಿದ್ದು,ಅದನ್ನು 1ನೇ ಸ್ಥಾನಕ್ಕೇರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದರು.
ಹಂಪಿ ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾ ಘಂಟಿ ಅವರು ಪ್ರಾಸ್ತಾವಿಕ ಮಾತನಾಡಿದರು.ಈ ಸಂದರ್ಭದಲ್ಲಿ ಗುಲ್ಬರ್ಗ ವಿವಿ,ಅಕ್ಕಮಹಾದೇವಿ ಮಹಿಳಾ ವಿವಿ, ವಿಎಸ್ಕೆ ವಿವಿಯ ಕುಲಪತಿಗಳು,ವಿವಿ ಕುಲಸಚಿವ ಮಂಜುನಾಥ ಬೇವಿನಕಟ್ಟಿ ಮತ್ತಿತರರು ಇದ್ದರು.ಡಾ.ಶಿವಾನಂದ ವೀರಕ್ತಮಠ ಅವರು ನಿರೂಪಿಸಿದರು. ರೂಸಾ ಸಂಯೋಜನಾಧಿಕಾರಿ ಡಾ.ರಮೇಶ್ ನಾಯಕ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
