ಮನ ಸೂರೆಗೊಂಡ ಕರ್ನಾಟಕ ದರ್ಶನ

ದಾವಣಗೆರೆ:

        ಭಾರತ್ ಸ್ಕೌಟ್ಸ್ & ಗೈಡ್ಸ್ ಸಂಸ್ಥೆ ಹಾಗೂ ಸಿದ್ಧಗಂಗಾ ಸ್ಕೌಟ್ಸ್ ಗ್ರೂಪ್ ಸಹಯೋಗದಲ್ಲಿ ಭಾನುವಾರ ನಗರದ ಸಿದ್ಧಗಂಗಾ ಶಾಲೆ ಆವರಣದಲ್ಲಿ ನಡೆದ ಕರ್ನಾಟಕ ದರ್ಶನ ಕಾರ್ಯಕ್ರಮವು ಸಾರ್ವಜನಿಕರ ಮನಸೂರೆಗೊಂಡಿತು.

        ಭಾನುವಾರ ನಗರದ ಸಿದ್ಧಗಂಗಾ ಶಾಲೆಯ ಮುಖ್ಯೋಪಾಧ್ಯಾಯಿನಿ ಜಸ್ಟೀನ್ ಡಿಸೋಜಾ ಅವರಿಂದ ಚಾಲನೆ ಪಡೆದ ಕರ್ನಾಟಕ ದರ್ಶನ ವಸ್ತು ಪ್ರದರ್ಶನದಲ್ಲಿ ತುಮಕೂರಿನ ಸಿದ್ಧಗಂಗಾ ಮಠ, ಮೈಸೂರು ಅರಮನೆ, ವಿಜಯಪುರದ ಗೋಲ್‍ಗುಂಬಜ್ ಸ್ತಬ್ಧ ಚಿತ್ರಗಳು ನಾಡಿನ ಪಂಪರೆಯನ್ನು ಸಾರುತ್ತಿದ್ದವು. ಅಲ್ಲದೆ, ವಚನಕಾರರು, ಕವಿಗಳು, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿದ್ದ ಮಕ್ಕಳು ಕರ್ನಾಟಕದ ಸಾಹಿತ್ಯ, ಹೋರಾಟದ ನೆನಪುಗಳನ್ನು ಕಟ್ಟಿಕೊಡುತ್ತಿದ್ದರು.

       ದಾವಣಗೆರೆಯ ಇತಿಹಾಸ ಪ್ರಸಿದ್ಧ ಆನೆಕೊಂಡ ಬಸವೇಶ್ವರ ದೇವಸ್ಥಾನ, ನಗರ ದೇವತೆ ಶ್ರೀದುರ್ಗಾಂಭಿಕಾ ದೇವಸ್ಥಾನದ ಪ್ರಾತ್ಯಕ್ಷಿಕೆಗಳು ವಿಶೇಷ ಗಮನ ಸೆಳೆದರೆ, ದೇವನಗರಿಯ ಸುತ್ತಮುತ್ತ ಇರುವ ಐತಿಹಾಸಿಕ ಸ್ಥಳಗಳ ಚಿತ್ರಣವೂ ಅಲ್ಲಿ ಕಾಣಸಿಗುತಿತ್ತು. ಇನ್ನೂ ವಿದ್ಯಾರ್ಥಿನಿ ಬಿ.ಎನ್. ನಂದಿನಿ ನೇತೃತ್ವದ ತಂಡ ತಯಾರಿಸಿದ್ದ ದಾವಣಗೆರೆ ಖ್ಯಾತಿಯ ಬೆಣ್ಣೆದೋಸೆ ಹಾಗೂ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಪ್ರಿಯವಾಗಿರುವ ಗೋಬಿ ಮಂಚೂರಿ ನೆರೆದಿದ್ದವರ ಬಾಯಲ್ಲಿ ನೀರೂರಿಸುತ್ತಿದ್ದವು. ಮಂಡ್ಯದ ಆದರ್ಶ ತಂಡ ಹಾಸ್ಯ ನಟ ಮಂಡ್ಯ ರಮೇಶ್, ಕಲಿಯುಗ ಕರ್ಣ ರೆಬಲ್‍ಸ್ಟಾರ್ ಅಂಬರೀಶ್ ಅವರ ಪ್ರಾತ್ಯಕ್ಷಿಕೆ ವಿಶೇಷ ಗಮನ ಸೆಳೆಯುತ್ತಿತ್ತು.

       ಚಿತ್ರದುರ್ಗದ ಚೇತನ ಓಪನ್ ಬುಲ್‍ಬುಲ್ ಪ್ಲಕ್ ತಂಡ ಚಿತ್ರದುರ್ಗದ ಕೋಟೆಯ ಪ್ರಾತ್ಯಕ್ಷಿಕೆ ಆಕರ್ಷಕವಾಗಿತ್ತು. ಇನ್ನೂ ವನಕೆ ಓಬವ್ವ ಸೇರಿದಂತೆ ಕೋಟೆ ನಾಡಿನ ಹೋರಾಟಗಾರರು, ಕವಿ ತರಾಸು ಸೇರಿದಂತೆ ಅಲ್ಲಿಯ ಕವಿಗಳ ಮತ್ತು 12ನೇ ಶತಮಾನದ ವಚನಕಾರರ ವೇಷಭೂಷಣವನ್ನು ಧರಿಸಿದ್ದರು. ಜೆ.ಎಸ್. ಚಿನ್ಮಯ್ ತಂಡದಿಂದ ಚಾಮುಂಡಿ ಬೆಟ್ಟ, ಲಲಿತಮಹಲ್, ಮೈಸೂರು ಅರಮನೆ, ಮೈಸೂರು ಜೂ, ಕೆ.ಆರ್.ಎಸ್‍ನ ಡ್ಯಾಮ್, ಬೀಟೀಷರ ಕಾಲದ ಯುದ್ಧ ಫಿರಂಗಿಗಳು ಗಮನ ಸೆಳೆಯುತ್ತಿದ್ದರೆ,

        ಪಿ.ಆರ್. ಭರತ್ ತಂಡ ಬೀದರ್ ಜಿಲ್ಲೆ ಆಯ್ದುಕೊಂಡು ಬೀದರ್ ಕೋಟೆ, ಗುಂಬಜ್ ದರ್ವಾಜಾ, ಬರೀದ್ ಶಾಯಿ ಪಾರ್ಕ್ ಪ್ರಾತಕ್ಷಿಕೆ ಹಾಗೂ ಕಾರ್ತಿಕ್ ತಂಡ ರಾಮನಗರ ಜಿಲ್ಲೆಯ ಸ್ಪೆಷಲ್ ತಟ್ಟೆ ಇಡ್ಲಿ, ಸಾವನದುರ್ಗ ಬೆಟ್ಟ, ಅರ್ಕಾವತಿ, ಕಾವೇರಿ, ವೃಷಭಾವತಿ ನದಿಗಳ ಸಂಗಮದ ಮಹತ್ವ ಪರಿಚಯಸಿದರು.

       ಹಾಸನದ ಎನ್.ಜೆ. ಸಾಯಿ ಗೊಮ್ಮಟೇಶ್ವರ ಟೆಂಪಲ್, ಬೇಲೂರು-ಹಳೇಬೀಡುಗಳ ಇತಿಹಾಸ, ವಿಜಾಪುರದ ಎ.ಎಂ. ಆದರ್ಶ ಗೋಲ್‍ಗುಂಬಜ್, ಬಸವಣ್ಣನ ನೆಲೆಯ ಪರಿಚಯ, ಸ್ಪೆಷಲ್ ಚುರುಮುರಿ ಹಾಗೂ ಹಾವೇರಿಯ ವಿಕಾಸ್ ತಂಡ ಹುಕ್ಕೇರಿ ಮಠ, ಶ್ರೀ ಕ್ಷೇತ್ರ ಐರಣಿ ಹೊಳೆಮಠದ ಚಿತ್ರಣವು ಆಕರ್ಷಕವಾಗಿತ್ತು.ಕರ್ನಾಟಕ ದರ್ಶನದ ವಸ್ತು ಪ್ರದರ್ಶನದಲ್ಲಿ ಸುಮಾರು 300 ಶಾಲಾ ಮಕ್ಕಳು ಭಾಗವಹಿಸಿದ್ದರು. ಶಾಲೆಯ ಸಂಸ್ಥಾಪಕ ಎಂ.ಎಸ್. ಶಿವಣ್ಣ, ನಿರ್ದೇಶಕ ಜಯಂತ್, ನೇತಾಜಿ ಸ್ಕೌಟ್ ಮತ್ತು ಗೈಡ್ಸ್ ಲೀಡರ್ ವಿಜಯ್, ಸ್ಕೌಟ್ಸ್ ಪೋಷಕರ ಸಮಿತಿ ಅಧ್ಯಕ್ಷ ಪಾಟೀಲ್ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap