ಬಳ್ಳಾರಿ
ಭಾರತ ಸರಕಾರದ ನಾಗರಿಕ ಹುದ್ದೆಗಳು ಮತ್ತು ಸೇವೆಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಆರ್ಥಿಕ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿ/ವಿದ್ಯಾರ್ಥಿಗಳಿಗೆ ಆದಾಯ ಮತ್ತು ಸ್ವತ್ತು ಪ್ರಮಾಣಪತ್ರಗಳನ್ನು ನಾಡಕಚೇರಿಯ ತಂತ್ರಾಂಶದ ಮೂಲಕ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.
ಭಾರತ ಸರಕಾರದ ನಾಗರಿಕ ಹುದ್ದೆಗಳು, ಸೇವೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರು ಮೀಸಲಾತಿ ಸೌಲಭ್ಯವನ್ನು ಪಡೆಯಲು ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ(ಕೇಂದ್ರ ಸರಕಾರದ ಜಾತಿ ಪಟ್ಟಿಯಲ್ಲಿರುವಂತೆ) ಜಾತಿಯವರನ್ನು ಹೊರತುಪಡಿಸಿ,ಯಾವುದೇ ಕುಟುಂಬದ ವಾರ್ಷಿಕ ಆದಾಯ 8ಲಕ್ಷ ರೂ.ಗಳಿಗಿಂತ ಕಡಿಮೆ ಇರುವಂತ ವ್ಯಕ್ತಿಗಳು ಅರ್ಹರಾಗಿರುತ್ತಾರೆ.
5 ಎಕರೆ ಕೃಷಿ ಭೂಮಿ ಮತ್ತು ಅದಕ್ಕಿಂತಲೂ ಹೆಚ್ಚು, 1ಸಾವಿರ ಚದರ ಅಡಿ ವಸತಿ ನಿವೇಶನ ಹಾಗೂ ಇನ್ನೀತರ ನಿಯಮಗಳನ್ನು ವಿಧಿಸಲಾಗಿದ್ದು, ಅವುಗಳು ಹೊಂದಿದ್ದರೇ ಈ ಮೀಸಲಾತಿ ಪಡೆಯಲು ಅರ್ಹರಿರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಪ್ರಮಾಣಪತ್ರವನ್ನು ವಿತರಿಸುವುದಕ್ಕೆ ಸಂಬಂಧಿಸಿದಂತೆ ನಾಡಕಚೇರಿಯ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಆದ ಕಾರಣ ಇನ್ಮುಂದೆ ಆದಾಯ ಮತ್ತು ಸ್ವತ್ತು ಪ್ರಮಾಣಪತ್ರಕ್ಕಾಗಿ ಅರ್ಜಿಯನ್ನು ಸಲ್ಲಿಸುವ ಅರ್ಜಿದಾರರಿಂದ ರೂ.25 ಅರ್ಜಿ ಶುಲ್ಕದೊಂದಿಗೆ ಅರ್ಜಿಯನ್ನು ನಾಡಕಚೇರಿ ತಂತ್ರಾಂಶದ ಮೂಲಕ ರಾಜ್ಯದ ಎಲ್ಲ ನಾಡಕಚೇರಿಗಳಲ್ಲಿ ಸ್ವೀಕರಿಸಿ.
ಸದರಿ ಅರ್ಜಿಯನ್ನು ನಿಯಮಾನುಸಾರ ಹಾಗೂ ಸರಕಾರದ ಆದೇಶನುಸಾರ ಕ್ಷೇತ್ರ ಪರಿಶೀಲನೆಗೊಳಪಡಿಸಿ, ಸಕ್ಷಮ ಪ್ರಾಧಿಕಾರಿಯಾದ ತಹಸೀಲ್ದಾರರು ಪ್ರಮಾಣಪತ್ರವನ್ನು ವಿತರಿಸಲು ಜಿಲ್ಲೆಯ ಎಲ್ಲ ನಾಡಕಚೇರಿಗಳ ಉಪತಹಸೀಲ್ದಾರರು ಹಾಗೂ ಸಿಬ್ಬಂದಿಗೆಳಿಗೆ ಅಗತ್ಯ ಸೂಚನೆ ನೀಡಲಾಗಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಉಪತಹಸೀಲ್ದಾರರಿಗೆ ಹಾಗೂ ಸಿಬ್ಬಂದಿಗೆ ತರಬೇತಿ ನೀಡಲು ಕ್ರಮವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ನಾಡಕಚೇರಿಗಳಲ್ಲಿ ಸಂಪರ್ಕಿಸುವಂತೆ ಅವರು ಸೂಚಿಸಿದ್ದಾರೆ.