ಬೆಂಗಳೂರು
ಬಿಜೆಪಿಯವರ ಪ್ರಚೋದನೆಯಿಂದಲೇ ದೆಹಲಿಯ ಗಲಭೆ ನಡೆದಿದ್ದು ಗಲಭೆಯ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.
ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು.
ಬಿಜೆಪಿಯವರ ಪ್ರಚೋದನೆಯಿಂದಲೇ ಗಲಭೆ ನಡೆದಿದೆ. ಮತಗಳ ಧೃವೀಕರಣಕ್ಕಾಗಿ ಬಿಜೆಪಿ ಕೋಮು ಗಲಭೆ ಸೃಷ್ಟಿಸುತ್ತಿದೆ. ದೆಹಲಿಯ ಕಾನೂನು ಸುವ್ಯವಸ್ಥೆಯ ಹೊಣೆ ಕೇಂದ್ರ ಗೃಹ ಸಚಿವರದ್ದು, ಹಾಗಾಗಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು, ಇಲ್ಲವೇ ರಾಷ್ಟ್ರಪತಿಗಳು ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ದೆಹಲಿಯ ಗಲಭೆ ದೇಶದ ಜನರಿಗೆ ಆಘಾತವುಂಟು ಮಾಡಿದೆ ಕೇಂದ್ರ ಸರ್ಕಾರ ಕೋಮು ಭಾವನೆಯನ್ನು ಸೃಷ್ಟಿಸುವ ಪ್ರಯತ್ನ ನಡೆಸಿದೆ. ಜನರ ಸಮಾಧಿಯ ಮೇಲೆ ಅಧಿಕಾರ ನಡೆಸಲು ಬಯಸಿದೆ ಎಂದು ಹರಿಹಾಯ್ದರು.
ಪ್ರಚೋದನಾಕಾರಿ ಹೇಳಿಕೆ ಕೊಟ್ಟವರ ಮೇಲೆ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದ ನ್ಯಾಯಮೂರ್ತಿ ಮುರಳೀಧರ ರಾವ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ನ್ಯಾಯಮೂರ್ತಿಗಳು ದೇಶ ಅಪಾಯದಲ್ಲಿದೆ, ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆ ಎಂದಿದ್ದರು. ಈಗಲೂ ಅದು ಮುಂದುವರೆಯುತ್ತಿದೆ ಎಂದು ದೂರಿದರು.
ಕ್ಷಮೆಗೆ ಆಗ್ರಹ
ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಕೆಟ್ಟದ್ದಾಗಿ ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ವಿಧಾನಸಭೆ ಅಧಿವೇಶನ ನಡೆಯೋಕೆ ಬಿಡಲ್ಲ ಎಂದು ಗುಡುಗಿದರು.ಬಾಯಿಗೆ ಬಂದಹಾಗೆ ಮಾತನಾಡುತ್ತಿರುವ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದರು. ಪಡಿತರ ಅಕ್ಕಿ ಕಡಿತ ಮಾಡಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಪಡಿತರವನ್ನು ಬದಲಾಯಿಸದೆ ಮೊದಲಿನಂತೆ 7 ಕೆಜಿ ಅಕ್ಕಿ ನೀಡಬೇಕು ಎಂದು ಒತ್ತಾಯಿಸಿದರು.
ಸಾರಿಗೆ ದರ, ಹಾಲಿನ ದರ ಏರಿಕೆ ಮಾಡಿದ್ದು ಸರಿಯಲ್ಲ, ಹೆಚ್ಚಳ ಮಾಡಲಾಗಿರುವ ವೈದ್ಯಕೀಯ ಶಿಕ್ಷಣ ಶುಲ್ಕವನ್ನು ವಾಪಸ್ ಪಡೆಯುವಂತೆ ಈಶ್ವರ ಖಂಡ್ರೆ ಒತ್ತಾಯಿಸಿದರು.ರಾಜ್ಯಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಸರ್ಕಾರಿ ನೌಕರರಿಗೆ ವೇತನ ನೀಡಲೂ ಹಣವಿಲ್ಲ ಎಂದು ಟೀಕಿಸಿದ ಅವರು, ತೊಗರಿ ಖರೀದಿ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿ 20 ದಿನಗಳಾದರೂ ಇನ್ನೂ ತೊಗರಿ ಖರೀದಿ ಆರಂಭವಾಗಿಲ್ಲ, ರಾಜ್ಯದ ಬಿಜೆಪಿ ಸರ್ಕಾರ ರೈತ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
