ಅನಂತಕುಮಾರ್ ಬಿಜೆಪಿಯ ಮೇರು ವ್ಯಕ್ತಿತ್ವದ ನಾಯಕ

ಚಿತ್ರದುರ್ಗ:

       ಧೀಮಂತ ನಾಯಕ ಅನಂತಕುಮಾರ್‍ರವರ ನಿಧನದಿಂದ ಭಾರತೀಯ ಜನತಾಪಾರ್ಟಿಗೆ ಅತೀವ ನೋವುಂಟಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಭಾವುಕರಾಗಿ ನುಡಿದರು.

         ಸೋಮವಾರ ಬೆಳಗಿನ ಜಾವ ನಿಧನರಾದ ಅನಂತಕುಮಾರ್‍ವರಿಗೆ ಬಿಜೆಪಿ.ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

          35 ವರ್ಷಗಳ ಹಿಂದೆ ಎ.ಬಿ.ವಿ.ಪಿ.ಯಲ್ಲಿ ತೊಡಗಿ ಸಂಘಟನೆ ಮಾಡಿಕೊಂಡು ಬಂದ ಅನಂತಕುಮಾರ್‍ರವರು ಬಿಜೆಪಿ. ಕಷ್ಟಕಾಲದಲ್ಲಿದ್ದಾಗ ನಿಸ್ವಾರ್ಥದಿಂದ ಪಕ್ಷಕ್ಕಾಗಿ ದುಡಿದರು. ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಬೆಂಗಳೂರಿನಿಂದ ಪಾರ್ಲಿಮೆಂಟ್‍ಗೆ ಆಯ್ಕೆಯಾದ ಅನಂತಕುಮಾರ್ ಸತತವಾಗಿ ಆರು ಬಾರಿ ಜಯಶಾಲಿಯಾಗಿ ಈಗಿನ ಪ್ರಧಾನಿ ನರೇಂದ್ರಮೋದಿರವರ ಸರ್ಕಾರದಲ್ಲಿ ರಸಗೊಬ್ಬರ ಮತ್ತು ರಾಸಾಯನಿಕ ಖಾತೆಯನ್ನು ಹೊಂದಿ ರೈತರಿಗೆ ಗೊಬ್ಬರದ ಅಭಾವವನ್ನು ನೀಗಿಸಿದ ಚತುರ ರಾಜಕಾರಣಿ ಎಂದು ಗುಣಗಾನ ಮಾಡಿದರು.

         ಕೊಳಗೇರಿಗಳಿಗೆ, ಗುಡಿಸಲುಗಳಲ್ಲಿರುವ ಬಡವರಿಗೆ ವಾಂಬೆ ಯೋಜನೆಯಡಿ ಮನೆಗಳು ಸಿಕ್ಕಿದೆಯೆಂದರೆ ಅದಕ್ಕೆ ಅನಂತಕುಮಾರ್‍ರವರಲ್ಲಿದ್ದ ಬಡವರ ಪರ ಕಾಳಜಿಯೇ ಕಾರಣ. ಗೊಬ್ಬರಕ್ಕಾಗಿ ಲಾಠಿಚಾರ್ಜ್, ಗೋಲಿಬಾರ್‍ಗಳಾಗಿದೆ. ಆದರೆ ಅನಂತಕುಮಾರ್ ಗೊಬ್ಬರ ಖಾತೆ ಸಚಿವರಾದ ಮೇಲೆ ಗೊಬ್ಬರದ ಕೊರತೆಯನ್ನು ನೀಗಿಸಿ ರೈತರಿಗೆ ನೆರವಿಗೆ ಬಂದರು. ಬಡವರು ಹೃದಯಾಘಾತಕ್ಕೆ ತುತ್ತಾದಾಗ ಅತ್ಯಂತ ಕಡಿಮೆ ದರದಲ್ಲಿ ಸ್ಟಂಟ್ ಅಳವಡಿಸಿಕೊಳ್ಳುವ ಯೋಜನೆಯನ್ನು ಜಾರಿಗೆ ತಂದ ಮೇರು ವ್ಯಕ್ತಿತ್ವದ ನಾಯಕ ಅನಂತಕುಮಾರ್‍ರನ್ನು ಕಳೆದುಕೊಂಡು ಪಕ್ಷ ಈಗ ಬಡವಾಗಿದೆ ಎಂದು ನೊಂದು ನುಡಿದರು.

         ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಜನರಿಕ್ ಔಷಧಿ ಮಳಿಗೆಗಳು ತೆರೆದಿರುವುದಕ್ಕೆ ಅನಂತಕುಮಾರ್‍ರವರ ಶ್ರಮವಿದೆ. ಪ್ರಧಾನಿ ಮೋದಿರವರ ಕೀರ್ತಿಯನ್ನು ಎತ್ತಿ ಹಿಡಿದ ಅನಂತಕುಮಾರ್ ಎ.ಬಿ.ವಿ.ಪಿ.ಮೂಲಕ ವಿವಿಧ ಸಂಘಟನೆಗಳಲ್ಲಿ ಹಂತ ಹಂತವಾಗಿ ಬೆಳೆದು ಕೊನೆಗೆ ಕೇಂದ್ರದ ಮಂತ್ರಿಯಾಗಿ ಸಾಕಷ್ಟು ನಾಯಕರುಗಳನ್ನು ಬೆಳೆಸಿದ್ದಾರೆ ಎಂದು ಸ್ಮರಿಸಿಕೊಂಡರು.

           ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್ ಮಾತನಾಡುತ್ತ 1982 ರಿಂದಲೂ ಅನಂತಕುಮಾರ್‍ರವರ ಜೊತೆ ಒಡನಾಟವಿಟ್ಟುಕೊಂಡಿದ್ದೆ. ಎಂದು ಹಿಂದಿನ ಕೆಲವು ಘಟನೆಗಳನ್ನು ನೆನಪಿಸಿಕೊಂಡರು.

           ಕಾವೇರಿ ಸಮಸ್ಯೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ಜಾರಿಗೆ ತರುವ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ ಪ್ರಾಮಾಣಿಕವಾಗಿ ಹೋರಾಟ ನಡೆಸಿದರು. ರಾಜ್ಯದಲ್ಲಿ ಅನೇಕ ನಾಯಕರುಗಳನ್ನು ಬೆಳೆಸಿದ ಕೀರ್ತಿ ಅನಂತಕುಮಾರ್‍ಗೆ ಸಲ್ಲಬೇಕು. ಅವರ ಆತ್ಮಕ್ಕೆ ಶಾಂತಿ ನೀಡಿ ದುಃಖತಪ್ತ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

           ಬಿಜೆಪಿ.ಜಿಲ್ಲಾ ಮಾಜಿ ಅಧ್ಯಕ್ಷ ಸಿದ್ದೇಶ್‍ಯಾದವ್ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ಜಾತಿ ಸಮೀಕರಣ ನಡೆಸಿ ತಂತ್ರಗಾರಿಕೆಯನ್ನು ರೂಪಿಸುವಲ್ಲಿ ಅತಿ ನಿಪುಣರಾಗಿದ್ದ ಅನಂತಕುಮಾರ್‍ರವರು ಇಲ್ಲಿಯವರೆಗೂ ನಡೆದ ಎಲ್ಲಾ ಚುನಾವಣೆಯಲ್ಲಿಯೂ ಮುಂದಾಲೋಚನೆ ಇಟ್ಟುಕೊಂಡು ಕೆಲಸ ಮಾಡಿದ್ದರಿಂದ ಕೇಂದ್ರದಲ್ಲಿ ಬಿಜೆಪಿ.ಅಧಿಕಾರಕ್ಕೆ ಬರಲು ಕಾರಣವಾಯಿತು ಎಂದು ಅವರಲ್ಲಿದ್ದ ಚಾಣಾಕ್ಷತನವನ್ನು ಕೊಂಡಾಡಿದರು.

            ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಲಕ್ಷಣಗಳು ಅನಂತಕುಮಾರ್‍ರವರಿಗಿದ್ದರೂ ರಾಜಕೀಯ ಮೇಲಾಟದಿಂದ ಅವರು ಸಿ.ಎಂ.ಆಗಲಿಲ್ಲ. ಕಾರ್ಯಕರ್ತರಿಗೆ ಸದಾ ಆತ್ಮಸ್ಥೈರ್ಯ ತುಂಬುವ ದೊಡ್ಡತನ ಅವರಲ್ಲಿತ್ತು ಎಂದರು.

            ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳಿ, ರತ್ನಮ್ಮ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ನಗರಾಧ್ಯಕ್ಷ ತಿಪ್ಪೇಸ್ವಾಮಿ, ವಕ್ತಾರ ನಾಗರಾಜ್‍ಬೇದ್ರೆ, ಶಿವಣ್ಣಾಚಾರ್, ಗ್ರಾಮಾಂತರ ಅಧ್ಯಕ್ಷ ಸುರೇಶ್‍ಸಿದ್ದಾಪುರ, ರಂಗಸ್ವಾಮಿ, ಗೌಡ, ಚಂದ್ರಿಕ, ಲೋಕನಾಥ್, ನಗರಸಭಾ ಸದಸ್ಯ ಹರೀಶ್ ಇನ್ನು ಮುಂತಾದವರು ಶ್ರದ್ದಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link