ಹರಪನಹಳ್ಳಿ:
ನಮ್ಮೊಳಗಿನ ಆತ್ಮಶುದ್ಧಿಗಾಗಿ ಧರ್ಮ ಜನ್ಮ ತಾಳಿತು. ಅದೇ ಧರ್ಮವೀಗ ಜಾತಿಗೆ ತಿರುಗಿ ಜಾತಿ ಜಾತಿಗಳ ಮಧ್ಯೆ ಸಂಘರ್ಷಕ್ಕೆ ಕಾರಣ ಆಗುತ್ತಿರುವುದು ಬೇಸರದ ಸಂಗತಿ ಎಂದು ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹಗರಿ ಶೀರನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ನೂತನ ಕಟ್ಟಡ ಮತ್ತು ಕಳಸಾರೋಹಣ, ಶ್ರೀ ಮಾಯಮ್ಮದೇವಿ ದೇವಸ್ಥಾನದ ನೂತನ ಕಟ್ಟಡ ಹಾಗೂ ಮೂರ್ತಿ ಪ್ರತಿಷ್ಠಾಪನೆ, ಶ್ರೀ ಈಶ್ವರ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡಿದರು.
ಯಾವುದೇ ಧರ್ಮವಿರಲಿ ಅದು ಹಿಂಸಾಚಾರ ಮಾಡಿ ಎಂದು ಎಲ್ಲಿಯೂ ಹೇಳಿಲ್ಲ. ಧರ್ಮದ ಮೇಲಿನ ವ್ಯಾಮೋಹಕ್ಕೆ ಒಳಗಾಗಿ ರಕ್ತಪಾತಕ್ಕೆ ಅವಕಾಶ ನೀಡಬಾರದು. ಜಾತಿ ಹೆಸರಲ್ಲಿ ಸಂಘರ್ಷಕ್ಕೆ ಎಡೆ ಮಾಡಿಕೊಡದೇ ಶಾಂತಿ, ಪ್ರೀತಿ, ಸಹೋದರತ್ವ ಬದುಕಿಗೆ ನಾವು ಅಣಿಯಾಗಬೇಕು’ ಎಂದು ಸಲಹೆ ನೀಡಿದರು.
ಶೀತಲಗೊಂಡ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಒಗ್ಗೂಡಿ ಶ್ರಮಿಸುವ ಹಾಗೆಯೇ ನಮ್ಮಲ್ಲಿನ ಕೆಟ್ಟ ವಿಚಾರಗಳ ದೂರ ಮಾಡಲು ಮನಸ್ಸು ಮಾಡಬೇಕು. ನಮ್ಮನ್ನು ನಾವು ಸುಧಾರಿಸಿಕೊಳ್ಳುವುದು ಪರಿಪಾಠವಾಗಬೇಕು. ಸುಖ ಮತ್ತು ಕಷ್ಟ ಜೀವನದಲ್ಲಿ ಸಹಜ. ಕಷ್ಟವನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಕಷ್ಟಪಟ್ಟು ಬದುಕು ಕಟ್ಟಿಕೊಂಡ ನಂತರ ಬರುವ ಸುಖ ಶಾಶ್ವತವಾದದ್ದು’ ಎಂದರು.
ಮಠದ ವಿಚಾರದಲ್ಲಿ ಎಲ್ಲ ರಾಜಕಾರಣಿಗಳು ಪಕ್ಷಬೇಧ ಮರೆತು ಸಹಕಾರ ನೀಡಿದ್ದಾರೆ. ಜನರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಗೆ ರಾಜಕಾರಣಿಗಳು ಸ್ಪಂದಿಸಿದ್ದಾರೆ. ನಾವೇನೇ ಮಾಡಿದರೂ ಅದಕ್ಕೆ ಬೆಂಬಲ ನೀಡುತ್ತಾ ಬಂದಿದ್ದಾರೆಯೇ ಹೊರತು ರಾಜಕೀಯ ಪಕ್ಷದ ದೃಷ್ಟಿಯಿಂದ ಯಾರೂ ನೋಡಿಲ್ಲ. ಜನಹಿತ ಮುಖ್ಯವೆಂದು ಅರಿತು ಜನಪ್ರತಿನಿಧಿಗಳಿಗೆ ರಾಜಕಾರಣ ಮಾಡಬೇಕು’ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ವಿದ್ಯಾವಂತರ ಸಂಖ್ಯೆ ಕಡಿಮೆ ಇದ್ದಾಗ ಹೆಬ್ಬಟ್ಟು ಒತ್ತುವವರೇ ಹೆಚ್ಚಿದ್ದರು. ಈಗ ಶಿಕ್ಷಣವಂತರ ಅಧಿಕವಿದ್ದರೂ ಹೆಬ್ಬಟ್ಟು ಒತ್ತಿ ಹಾಜರಿ ಪಡೆಯುವ ಸಂಸ್ಕೃತಿ ಬೆಳೆಯುತ್ತಿದೆ. ಇದನ್ನು ಅವಲೋಕಿಸಿದಾಗ ಪರಸ್ಪರರ ನಡುವೆ ವಿಶ್ವಾಸ ಕಡಿಮೆ ಆಗಿ ಅನುಮಾನದಿಂದ ನೋಡುವ ಪ್ರವೃತ್ತಿ ಬೆಳೆಯುತ್ತಿದೆ’ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ರೈತರ ಬಗ್ಗೆ ಸದಾ ಸ್ಪಂದಿಸುವ, ಚಿಂತಿಸುವ ಸಿರಿಗೆರೆ ಶ್ರೀಗಳು ಆಧುನಿಕ ಬಸವಣ್ಣ ಎನಿಸಿಕೊಂಡಿದ್ದಾರೆ. ಕೆರೆಗಳ ತುಂಬಿಸುವ ಕೆಲಸದಲ್ಲಿ ಯಶಕಂಡಿರುವ ಶ್ರೀಗಳು `ಕೆರೆಕಟ್ಟೆ ಸ್ವಾಮಿಗಳು’ ಆಗಿದ್ದಾರೆ. ಸರ್ಕಾರಕ್ಕೆ ಮೂಗುದಾರ ಹಾಕಿ ಬಗ್ಗಿಸುವ ಶಕ್ತಿ ಸ್ವಾಮೀಜಿಗಳಿಗಿದೆ. ಬರೀ ದೇವಾಲಯ ಕಟ್ಟಿದರೆ ಸಾಲದು ಅಲ್ಲಿ ನಿತ್ಯ ಪೂಜಾವಿಧಿವಿಧಾನಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದರು.
ಸಾಧು-ವೀರಶೈವ ಸಮಾಜದ ಅಧ್ಯಕ್ಷ ಗುಂಡಗತ್ತಿ ಮಂಜಣ್ಣ ಮಾತನಾಡಿ, ಪ್ರತಿ ಹಳ್ಳಿಯಲ್ಲೂ ಲಿಂಗ ದೀಕ್ಷೆ ಕಾರ್ಯಕ್ರಮ ಆಯೋಜಿಸಬೇಕು. ಇದರಿಂದ ಯುವಕರು ದುಶ್ಚಟದಿಂದ ದೂರವಿರಲು ಸಾಧ್ಯ. ತಾಲ್ಲೂಕಿನ 9 ಗ್ರಾಮಗಳಲ್ಲಿ ಲಿಂಗ ದೀಕ್ಷೆ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ, ಜಿಲ್ಲಾ ಪಂಚಾಯಿತಿ ಡಾ.ಮಂಜುನಾಥ ಉತ್ತಂಗಿ, ಮುಖಂಡರಾದ ಮಹಾಬಳೇಶ್ವರಗೌಡ, ಜಿ.ನಂಜನಗೌಡ, ರಾಜೇಂದ್ರ ಪ್ರಸಾದ, ಮತ್ತಿಹಳ್ಳಿ ಅಜ್ಜಣ್ಣ, ಆರ್.ಕೊಟ್ರಗೌಡ, ಆಲದಹಳ್ಳಿ ಷಣ್ಮುಖಪ್ಪ, ವೈ.ಅಣ್ಣಪ್ಪ, ಡಿ.ರೇವಣ್ಣ, ಹುಣ್ಸಿಹಳ್ಳಿ ಪ್ರಕಾಶ, ಮೈದೂರು ರಾಮಣ್ಣ, ಜನತಾಗೌಡ್ರ, ನಳಿನಿ ರಾಮನಗೌಡ, ಸುಭಾಷ ನಾಗರಕೊಂಡ, ಕಿತ್ತೂರು ಓಬಣ್ಣ ಇವರೂ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
