ತುಮಕೂರು
ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿರುವ ಮರಳೂರಿನ ರಿಂಗ್ರಸ್ತೆ ಜಂಕ್ಷನ್ ಬಳಿ ದೊಡ್ಡ ಪ್ರಮಾಣದ ಗಣಪತಿ ಮೂರ್ತಿಗಳ ವಿಸರ್ಜನೆಗಾಗಿ ತುಮಕೂರು ಮಹಾನಗರ ಪಾಲಿಕೆಯು ತಾತ್ಕಾಲಿಕವಾಗಿ ಕೃತಕ ಕೊಳವನ್ನು ನಿರ್ಮಿಸಿದ್ದು, ಸೆಪ್ಟೆಂಬರ್ 2 ರ ಗಣಪತಿ ಹಬ್ಬದಂದು ಒಂದೇ ದಿನ ಸುಮಾರು 80 ಗಣಪತಿ ಮೂರ್ತಿಗಳನ್ನು ಸಾರ್ವಜನಿಕರು ವಿಸರ್ಜಿಸಿದ್ದಾರೆ.
ಗಣಪತಿ ಹಬ್ಬದ ದಿನ ಸಂಜೆ 4 ರಿಂದ ರಾತ್ರಿ 10 ಗಂಟೆಯವರೆಗೆ ನಗರದ ವಿವಿಧೆಡೆಗಳಿಂದ ಮೆರವಣಿಗೆಯಲ್ಲಿ ಬಂದ ಸಾರ್ವಜನಿಕರು 3 ರಿಂದ 5 ಅಡಿ ಎತ್ತರದ ಗಣಪತಿ ಮೂರ್ತಿಗಳನ್ನು ಇಲ್ಲಿ ವಿಸರ್ಜನೆ ಮಾಡಿದ್ದಾರೆ.
ಸೆ.13 ರವರೆಗೆ ವ್ಯವಸ್ಥೆ
ಸೆ.2 ರಿಂದ ಒಟ್ಟು 11 ದಿನಗಳ ಕಾಲ ಅಂದರೆ ಸೆ.13 ರವರೆಗೆ ಇಲ್ಲಿ ಈ ಕೃತಕ ಕೊಳದ ತಾತ್ಕಾಲಿಕ ವ್ಯವಸ್ಥೆ ಇರುತ್ತದೆ. ಆತನಕ ಸಾರ್ವಜನಿಕರು ಗಣಪತಿಗಳನ್ನು ಇಲ್ಲಿ ವಿಸರ್ಜನೆ ಮಾಡಬಹುದಾಗಿದೆ.
6 ಅಡಿಗಳಷ್ಟು ನೀರಿದೆ
“ಮರಳೂರು ಜಂಕ್ಷನ್ನ ಸೂಕ್ತ ಸ್ಥಳದಲ್ಲಿ 60 ಅಡಿ ಅಗಲ ಮತ್ತು 60 ಅಡಿ ಉದ್ದದಷ್ಟು ಮಣ್ಣನ್ನು ಅಗೆಯಲಾಗಿದೆ. 7 ಅಡಿಗಳಷ್ಟು ಆಳಪಡಿಸಲಾಗಿದೆ. ಈ ಕೃತಕ ಕೊಳದ ತುಂಬ ನೀರು ನಿಲ್ಲಲು ಪ್ಲಾಸ್ಟಿಕ್ ಶೀಟ್ ಹರಡಲಾಗಿದೆ. ಪಕ್ಕದಲ್ಲೇ ಲಭ್ಯವಿರುವ ಖಾಸಗಿಯವರ 2 ಕೊಳವೆ ಬಾವಿಗಳನ್ನು ಬಳಸಿಕೊಂಡು ಇದಕ್ಕೆ 6 ಅಡಿಗಳಷ್ಟು ನೀರನ್ನು ಭರ್ತಿ ಮಾಡಲಾಗಿದೆ. ಸುತ್ತಲೂ ಅಗತ್ಯ ವಿದ್ಯುತ್ದೀಪಗಳ ವ್ಯವಸ್ಥೆ ಮಾಡಲಾಗಿದೆ.
ವಾಹನಗಳ ಪಾರ್ಕಿಂಗ್ಗೆ ಅವಕಾಶವಿದೆ. ಜನರು ನಿಂತು ನೋಡಲು ಸಹ ಅವಕಾಶವಿದೆ. ಸುರಕ್ಷತೆಗಾಗಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರು, ವಾಲ್ವ್ಮನ್ಗಳು, ಎಲೆಕ್ಟ್ರೀಷಿಯನ್ಗಳನ್ನು ಈ ಸ್ಥಳಕ್ಕೆ ನಿಯೋಜಿಸಲಾಗಿದೆ. ಜೊತೆಗೆ ಭದ್ರತೆ ದೃಷ್ಟಿಯಿಂದ ಪೊಲೀಸ್ ಸಿಬ್ಬಂದಿಯೂ ಇಲ್ಲಿರುತ್ತಾರೆ” ಎಂದು ಮಹಾನಗರ ಪಾಲಿಕೆಯ ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್ ವಸಂತ್ “ಪ್ರಜಾಪ್ರಗತಿ”ಗೆ ಮಾಹಿತಿ ನೀಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ