ಫೆ.18 ರಂದು ಬ್ಯಾಡಗಿ ಬಂದ್ ಕರೆ

ಬ್ಯಾಡಗಿ:

      ರಾಜ್ಯ ರೈತ ಸಂಘವು (ಪುಟ್ಟಣ್ಣಯ್ಯ ಬಣ) ಜಿಲ್ಲಾ ಘಟಕವು ಅಸುಂಡಿ ಜಲಾನಯನದಡಿ ಆಣೂರು ಕೆರೆಯ ಮೂಲಕ ಬ್ಯಾಡಗಿ ತಾಲೂಕಿನ 36 ಕೆರೆಗಳನ್ನು ತುಂಬಿಸುವ ಯೋಜನೆಗೆ ಆಗ್ರಹಿಸಿ ಫೆ.18 ರಂದು ಬ್ಯಾಡಗಿ ಬಂದ್ ಕರೆಗೆ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಬೆಂಬಲ ವ್ಯಕ್ತಪಡಿಸಿದ್ದಲ್ಲದೇ ಫೆ.18 ರಂದು ಬ್ಯಾಡಗಿ ಮಾರುಕಟ್ಟೆಯ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲು ಸಭಾಭವನದಲ್ಲಿ ಜರುಗಿದ ತುರ್ತುಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡಿತು.

       ಕೋಲಾರ ಮೀರಿಸುತ್ತಿದೆ: ವಿಷಯದ ಕುರಿತು ಅಧ್ಯಕ್ಷ ಕೆ.ಎಸ್.ನಾಯ್ಕರ್ ಮಾತನಾಡಿ, ಅಸಮರ್ಪಕ ಮಳೆಯಿಂದಾಗಿ ತಾಲೂಕಿನಲ್ಲಿ ಜೀವಜಲ ಖಾಲಿಯಾಗುತ್ತಿದೆ ಸಾವಿರ ಅಡಿಗಳಷ್ಟು ಆಳಕ್ಕೆ ಕೊರೆಸಿದರೂ ಕುಡಿಯಲು ನೀರು ಸಿಗುತ್ತಿಲ್ಲ, ಬೇಸಿಗೆಗೂ ಮುನ್ನವೇ ಬರಗಾಲ ಪರಿಸ್ಥಿತಿ ಎದುರಾಗಿದೆ, ಬಹುತೇಕ ಗ್ರಾಮಗಳಿಗೆ ಈಗಾಗಲೇ ಟ್ಯಾಂಕರ್‍ಗಳ ಮೂಲಕ ನೀರುವ ಪೂರೈಕೆ ಮಾಡಲಾಗುತ್ತಿದ್ದು ಜನಜಾನುವಾರುಗಳನ್ನು ಬದುಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಸದ್ಯದ ನೀರಿನ ಪರಿಸ್ಥಿತಿಯನ್ನು ನೋಡಿದರೇ ಕೋಲಾರವನ್ನೂ ಸಹ ಮೀರಿಸುವಂತಿದೆ ಎಂದರು.

      ನ್ಯಾಯಸಮ್ಮತ ಹೋರಾಟಕ್ಕೆ ಬೆಂಬಲ ಕೊಡೋಣ: ನಿರ್ದೇಶಕ ವಿಜಯಕುಮಾರ ಮಾಳಗಿ ಮಾತನಾಡಿ, ತುಂಗಭದ್ರಾ ನದಿಯಿಂದ ನೀರು ತರುವ ಮೂಲಕ, ಆಣೂರು ಯೋಜನೆಯಡಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿದರೇ ಎಲ್ಲರೂ ಬದುಕಿಕೊಳ್ಳಲು ಸಾಧ್ಯವಾಗುತ್ತದೆ, ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ನ್ಯಾಯಸಮ್ಮತವಾದ ಹೋರಾಟಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿ ಬೆಂಬಲ ಅಗತ್ಯವಿದ್ದು ಸರ್ವಾನುಮತದ ನಿರ್ಣಯ ಕೈಗೊಳ್ಳುವ ಮೂಲಕ ಸರ್ಕಾರಕ್ಕೆ ಪತ್ರ ಬರೆಯುವುದು ಸೂಕ್ತವೆಂದರು.

    ಬಂದ್‍ಗೆ ಜೈ ಎಂದ ವರ್ತಕರ ಸಂಘ: ವರ್ತಕರ ಪ್ರತಿನಿಧಿ ಸಿ.ಆರ್.ಪಾಟೀಲ (ಬಾಬಣ್ಣ) ಮಾತನಾಡಿ, ರಾಜ್ಯ ರೈತ ಸಂಘ ಕಳೆದ ಹಲವಾರು ವರ್ಷಗಳಿಂದ ವಿಷಯಾಧಾರಿತ ಹೋರಾಟಗಳನ್ನು ನಡೆಸುತ್ತಾ ಬಂದಿದ್ದು ಸಾಕಷ್ಟು ಯಶಸ್ವಿ ಕಂಡಿದೆ, ಸದ್ಯ ಕೈಗೊಂಡಿರುವ ಹೋರಾಟವೂ ದಹ ಇದಕ್ಕೆ ಹೊರತಾಗಿಲ್ಲ ಸದರಿ ವಿಷಯವು ತಾಲೂಕಿನ ಜನರ ಅಳುವು ಉಳಿವಿನ ಪ್ರಶ್ನೆಯಾಗಿದೆ, ಮೊನ್ನೆ ನಡೆದ ವರ್ತಕರ ಸಂಘದ ಸಭೆಯಲ್ಲೂ ಇದಕ್ಕೆ ಹೋರಾಟಕ್ಕೆ ಬೆಂಬಲ ನೀಡಬೇಕೆನ್ನುವ ವಿಷಯಕ್ಕೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದ್ದು ಫೆ.18 ರಂದು ಬ್ಯಾಡಗಿ ಮಾರುಕಟ್ಟೆಯ ಯಾವುದೇ ವರ್ತಕರು ವ್ಯಾಪಾರ ವಹಿವಾಟು ನಡೆಸದಿರಲು ನಿರ್ಧರಿಸಿದ್ದಾಗಿ ತಿಳಿಸಿದ ಅವರು, ಈ ಕುರಿತು ಸಂಘದ ಪತ್ರವು ಸಹ ಸರ್ಕಾರ ಮತ್ತು ಎಪಿಎಂಸಿ ಕಾರ್ಯಾಲಯಕ್ಕೆ ತಲುಪಿದೆ ಎಂದರು.

     ನಮ್ಮ ಜೊತೆ ಕೈ ಜೋಡಿಸಿ: ಸಭೆಯಲ್ಲಿ ಹಾಜರಿದ್ದ ಮಹದೇವಪ್ಪ ಶಿಡೇನೂರ ಮಾತನಾಡಿ, ತಾಲೂಕಿನಲ್ಲಿ ಯಾವುದೇ ಪ್ರಮುಖ ನದಿಗಳು ಹರಿದಿಲ್ಲವಾದ್ದರಿಂದ ಮತ್ತು ಇತ್ತೀಚಿನ ವರ್ಷಗಳಲ್ಲಿ ಮಳೆ ಕೈಕೊಡುತ್ತಿರುವುದರಿಂದ ಕೃಷಿ ಸರಣಿ ವೈಫಲ್ಯ ಕಾಣುತ್ತಿದೆ, ವರ್ಷಕ್ಕೆ ಎರಡು ಬೆಳೆಗಳನ್ನು ನೀಡುತ್ತಿದ್ದ ಭೂಮಿಗಳು ಕೇವಲ ಮಳೆಗಾಲದಲ್ಲಿ ಒಂದು ಬೆಳೆಯನ್ನು ಕೊಡಲು ಸಾಧ್ಯವಾಗುತ್ತಿಲ್ಲ ವ್ಯಾಪಾರಸ್ಥರು, ರೈತರು ಕೂಲಿಕಾರ್ಮಿಕರು ಸೇರಿದಂತೆ ಎಲ್ಲರಿಗೂ ನೀರು ಅತ್ಯಗತ್ಯ ಈ ಹಿನ್ನೆಲೆಯಲ್ಲಿ ನಮ್ಮಗಳ ಜೊತೆ ಕೈಜೋಡಿಸುವಂತೆ ಮನವಿ ಮಾಡಿದರು.

      ಮುಂದಿನ 10 ವರ್ಷಕ್ಕೆ ಇನ್ನೂ ಭೀಕರ: ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, 2119 ಕ್ಕೆ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವ ದಿನಗಳಲ್ಲಿ ಇನ್ನೂ 10 ವರ್ಷದ ಬಳಿಕ ನಮ್ಮಗಳ ಸ್ಥಿತಿಯನ್ನೊಮ್ಮೆ ಅವಲೋಕಿಸಿ ನೋಡಬೇಕಾಗಿದೆ, ಮುಂದಿನ ಪೀಳಿಗೆಯು ನೀರಿಲ್ಲದೇ ಊರನ್ನೇ ಬಿಟ್ಟು ಬೇರೆಡೆಗೆ ಗುಳೆ ಹೋಗಬೇಕಾಗಬಹುದು, ಇಂತಹ ದುಷ್ಪಪರಿಣಾಮಕ್ಕೆ ನಮ್ಮ ಕಣ್ಣೆದುರಿಗೆ ನಮ್ಮ ಮಕ್ಕಳೆದುರು ನಡಯವ ಮೊದಲೇ, ಒಂದಿಷ್ಟು ನೀರಿಗಾಗಿ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ ಅದಕ್ಕಾಗಿಯೇ ಸರ್ಕಾರ ಮತ್ತು ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಕೆಲಸಕ್ಕೆ ಮುಂದಾಗಿರುವ ರೈತ ಸಂಘಕ್ಕೆ ತಮ್ಮೆಲ್ಲರ ಸಹಕಾರವನ್ನು ಕೋರಿದರು.

      ಮೆಣಸಿನಕಾಯಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ: ಕಾರ್ಯದರ್ಶಿ ಎಸ್.ಬಿ.ನ್ಯಾಮಗೌಡ ಮಾತನಾಡಿ, ರೈತರ ಹೋರಾಟಕ್ಕೆ ಸಮಿತಿ ಬೆಂಬಲ ನೀಡಿ ಸೋಮವಾರ ರಜೆ ಘೋಷಣೆ ಮಾಡಿದೆ, ಆದರೆ ಮಂಗಳವಾರ ಮಾರುಕಟ್ಟೆ ವಹಿವಾಟು ಎಂದಿನಂತೆ ಪುನಃ ಪ್ರಾರಂಭವಾಗಲಿದೆ, ಇವುಗಳ ನಡುವೆ ಕರ್ನಾಟಕ ಸೇರಿದಂತೆ ದೂರದ ಆಂಧ್ರಪ್ರದೇಶದಿಂದ ಮೆಣಸಿನಕಾಯಿ ಮಾರಾಟಕ್ಕೆ ರೈತರು ಲಾರಿಗಳಲ್ಲಿ ಮೆಣಸಿನಕಾಯಿ ಮಾರಾಟಕ್ಕೆ ಬರುತ್ತಿದ್ದು ಸೋಮವಾರ ಮದ್ಯಾಹ್ನದಿಂದಲೇ ಇಂತಹ ಪ್ರಕ್ರಿಯೆ ಪ್ರಾರಂಭವಾಗುತ್ತದೆ, ಕಾರಣ ರೈತ ಹೋರಾಟಗಾರರು ಸದರಿ ಲಾರಿಗಳಿಗೆ ಯಾವುದೇ ತೊಂದರೆ ನೀಡದಂತೆ ಮನವಿ ಮಾಡಿದರು.

        ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಿ: ಪಿಎಸ್‍ಐ ಮಹಾಂತೇಶ್ ಮಾತನಾಡಿ, ಹೋರಾಟಗಾರರಿಗೆ ಗೌರವ ಕೊಡುವ ಕೆಲಸ ಇಲಾಖೆಯಿಂದಾಗುತ್ತದೆ, ಹಾಗಂತ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಅನಿವಾರ್ಯ, ಶಾಂತಿಯುತ ಪ್ರತಿಭಟನೆಗೆ ರಕ್ಷಣೆ ಕೊಡುತ್ತೇವೆ, ಅದನ್ನೇ ನಮ್ಮ ದೌರ್ಬಲ್ಯವೆಂದು ಭಾವಿಸಬಾರದು ರೈತರ ಲಾರಿಗಳನ್ನು ಬೇರೆ ದಾರಿಯಲ್ಲಿ ಪರಿವರ್ತನೆ ಮಾಡಲಾಗುವುದು ಎಂದರು.

       ಸಭೆಯಲ್ಲಿ ಉಪಾಧ್ಯಕ್ಷ ಉಳಿವೆಪ್ಪ ಕುರುವತ್ತಿ, ಸದಸ್ಯರಾದ ಡಿ.ಎನ್.ತೋಟದ, ಮಾರುತಿ ಕೆಂಪಗೊಂಡರ, ಮಾಲತೇಶ ಹೊಸಳ್ಳಿ, ಕುಮಾರಪ್ಪ ಚೂರಿ, ಶಕುಂತಲ ದಾನಮ್ಮನವರ, ವನಿತ ಗುತ್ತಲ, ರೈತ ಮುಖಂಡರಾದ ಮೌನೇಶ ಬಡಿಗೇರ, ಚಿಕ್ಕಪ್ಪ ಛತ್ರದ, ಡಾ.ಕೆ.ವಿ.ದೊಡ್ಡಗೌಡ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link