ಬೆಂಗಳೂರು
ದೇಶದಲ್ಲಿ ಕೌಶಲ್ಯಾಭಿವೃದ್ಧಿಗೆ ವಿಶೇಷ ಮನ್ನಣೆ ದೊರೆಯುತ್ತಿರುವುದನ್ನು ಮನಗಂಡು ಮುಂದಿನ ವರ್ಷದಿಂದ ದೊಡ್ಡ ಮಟ್ಟದಲ್ಲಿ `ಬೆಂಗಳೂರು ಸ್ಕಿಲ್’ ಶೃಂಗಸಭೆ ಆಯೋಜಿಸಲಾಗುವುದು ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ನಗರದಲ್ಲಿಂದು ಆರಂಭಗೊಂಡ`ಬೆಂಗಳೂರು ಟೆಕ್” ಸಮಾವೇಶದಲ್ಲಿ ಮಾತನಾಡಿದ ಅವರು, `ಬೆಂಗಳೂರು ಸ್ಕಿಲ್’ ಹೆಸರಿನಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. “ಸದ್ಯಕ್ಕೆ ನಮ್ಮಲ್ಲಿ ಬೆಳವಣಿಗೆಯ ದರ ಕ್ಷಿಪ್ರಗತಿಯಲ್ಲಿದೆ. ಆದರೆ, ಉದ್ಯೋಗ ಸೃಷ್ಟಿಯು ಇದೇ ವೇಗದಲ್ಲಿ ನಡೆಯುತ್ತಿಲ್ಲ. ಹೀಗಾಗಿ, ಸರಕಾರ ಮತ್ತು ಉದ್ದಿಮೆಗಳು ಉದ್ಯೋಗ ಸೃಷ್ಟಿಗೆ ಒತ್ತು ನೀಡಲೇಬೇಕಾಗಿದೆ. `ಉದ್ಯೋಗದೊಂದಿಗೆ ಬೆಳವಣಿಗೆ’ ಎನ್ನುವುದು ನಮ್ಮ ಮೂಲ ಮಂತ್ರವಾಗಬೇಕಾಗಿದೆ ಎಂದರು.
ಉದ್ಯೋಗ ಸೃಷ್ಟಿಗೆ ಕೌಶಲ್ಯಾಭಿವೃದ್ಧಿ ನಿರ್ಣಾಯಕ ಪಾತ್ರವಹಿಸಲಿದೆ.
`ರಾಜ್ಯದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 2025ರ ಹೊತ್ತಿಗೆ ಉದ್ಯೋಗಿಗಳ ಸಂಖ್ಯೆ 30 ಲಕ್ಷಕ್ಕೆ ಏರುವ ನಿರೀಕ್ಷೆಯಿದೆ. ಹಾಗೆಯೇ, ನವೋದ್ಯಮಗಳ ಸಂಖ್ಯೆಯು 25 ಸಾವಿರವನ್ನು ಮುಟ್ಟಬೇಕೆಂಬ ಗುರಿ ಇಟ್ಟುಕೊಳ್ಳಲಾಗಿದೆ. ಇದರ ಜತೆಗೆ, ದೇಶದ ಐಟಿ ಉತ್ಪನ್ನ, ಸೇವೆಗಳ ಮೂಲಕ ಈಗ ಹರಿದುಬರುತ್ತಿರುವ ಶೇ.17ರಷ್ಟು ಆದಾಯವನ್ನು ಶೇ.25ಕ್ಕೆ ಹೆಚ್ಚಿಸಬೇಕೆಂಬ ಆಶಯವಿದೆ,” ಎಂದು ಅವರು ಹೇಳಿದರು.
“ತಂತ್ರಜ್ಞಾನವನ್ನು ಜನರ ಉಪಯೋಗಕ್ಕೆ ಬಳಸಿಕೊಳ್ಳುವಲ್ಲಿ ಕರ್ನಾಟಕ ರಾಜ್ಯ ಸದಾಮುಂಚೂಣಿಯಲ್ಲಿದೆ. ಮಾಹಿತಿ ತಂತ್ರಜ್ಞಾನ ಇನ್ನೂ ಅಷ್ಟಾಗಿ ಬೆಳೆಯದಿದ್ದ 20 ವರ್ಷಗಳ ಹಿಂದೆಯೇ ನಗರದಲ್ಲಿ `ಬೆಂಗಳೂರು ಐಟಿ’ ಎನ್ನುವ ಶೃಂಗಸಭೆ ಆರಂಭಿಸಲಾಯಿತು.
“ನಂತರದಲ್ಲಿ ರಾಜ್ಯವು`ಬೆಂಗಳೂರು ಬಯೋ’ ಎನ್ನುವ ಹೆಸರಿನಲ್ಲಿ ಜೈವಿಕ ತಂತ್ರಜ್ಞಾನಕ್ಕೆ ಒತ್ತು ನೀಡಿತು. ಇದನ್ನು ನಂತರ ಇತರೆ ರಾಜ್ಯಗಳು ಅನುಕರಿಸಿದವು. ನ್ಯಾನೊ ತಂತ್ರಜ್ಞಾನದಲ್ಲಿ ಕೂಡ ರಾಜ್ಯ `ಬೆಂಗಳೂರು ನ್ಯಾನೊ’ ಬ್ರ್ಯಾಂಡ್ ಅನ್ನು ಪರಿಚಿಯಿಸಿತು. ಹೀಗೆ, ಹಲವು ವಿಕ್ರಮಗಳು ರಾಜ್ಯದ ಬತ್ತಳಿಕೆಯಲ್ಲಿವೆ,” ಎಂದು ಸಚಿವ ದೇಶಪಾಂಡೆ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
