ಬೆಂಗಳೂರು
ಸಿಗರೇಟ್ ಕೊಡದಿದ್ದಕ್ಕೆ ಆಕ್ರೋಶಗೊಂಡು ಇಬ್ಬರು ದುಷ್ಕರ್ಮಿಗಳು ರಸ್ತೆ ಬದಿ ಟೀ ಮಾರುತ್ತಿದ್ದ ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಅನಂತನಗರ ಗೇಟ್ನಲ್ಲಿ ಚಾಕು ಇರಿತಕ್ಕೊಳಗಾಗಿ ಗಾಯಗೊಂಡಿರುವ ಟೀ ಮಾಡುತ್ತಿದ್ದ ಯುವಕ ಶಿವಕುಮಾರ್(25)ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ,ಕೃತ್ಯವೆಸಗಿದ ದುಷ್ಕರ್ಮಿಗಳನ್ನು ಪ್ರಜ್ವಲ್ ಅಲಿಯಾಸ್ ಕೊತ್ವಾಲ್ ಹಾಗೂ ಮನೋಜ್ ಗೌಡ ಅಲಿಯಾಸ್ ಬಾಂಡ್ಲಿ ಎಂದು ಗುರುತಿಸಲಾಗಿದೆ.
ತುಮಕೂರಿನಿಂದ ಬಂದು ರಸ್ತೆ ಬದಿ ರಾತ್ರಿ ವೇಳೆ ಟೀ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಶಿವಕುಮಾರ್ ಬಳಿ ಡಿ.28 ರ ತಡರಾತ್ರಿ ಬಂದ ಪ್ರಜ್ವಲ್ ಹಾಗೂ ಮನೋಜ್ ಹಣ ನೀಡದೆ ಸಿಗರೇಟ್ ನೀಡುವಂತೆ ಕೇಳಿದ್ದಾರೆ.ಸಿಗರೇಟ್ ಕೊಡಲು ನಿರಾಕರಿಸಿದ್ದರಿಂದ ಕೋಪಕೊಂಡು ಚಾಕುವಿನಿಂದ ಭುಜಕ್ಕೆ ಚುಚ್ಚಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಗಾಯಗೊಂಡಿದ್ದ ಶಿವಕುಮಾರ್ ನನ್ನು ಸ್ಥಳದಲ್ಲಿದ್ದವರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹಲ್ಲೆ ನಡೆಸಿ ಚಾಕು ಇರಿದಿರುವ ದೃಶ್ಯ ಹತ್ತಿರದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗೆದೆ.
ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿ ಕ್ಯಾಮಾರದಲ್ಲಿನ ದೃಶ್ಯಗಳನ್ನು ಪರಿಶೀಲಿಸಿ ದುಷ್ಕರ್ಮಿಗಳ ಪತ್ತೆಗೆ ಶೋಧ ನಡೆಸಲಾಗಿದೆ.
ಕ್ಲಬ್ ಮೇಲೆ ದಾಳಿ
ಇಸ್ಪೀಟ್ ದಂಧೆ ನಡೆಸುತ್ತಿದ್ದ ಜಯಮಹಲ್ ಮುಖ್ಯರಸ್ತೆಯ ಕೆಸಿ ಪ್ಯಾಲೇಸ್ ಕ್ಲಬ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, 15 ಮಂದಿಯನ್ನು ಬಂಧಿಸಿದ್ದಾರೆ.
ನಂದ ಕುಮಾರ್, ಚೇತನ್, ಉದಯ್ ಕುಮಾರ್, ಅರ್ಜುನ್, ರಾಮರೆಡ್ಡಿ, ಆದಿನಾರಾಯಣ, ಖಾದರ್, ಸತ್ಯನಾರಾಯಣ ಪ್ರಸಾದ್, ಅಂಜಿನಪ್ಪ, ಉಮೇಶ್, ಹಂಪಣ್ಣ, ಶಶಿಧರ್, ಮೋಹನ್ ರಾವ್, ಶ್ರೀರಾಂರೆಡ್ಡಿ, ಅಹಿನುಲ್ಲಾ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ 2 ಲಕ್ಷ 24 ಸಾವಿರ ನಗದು, ಇಸ್ಪೀಟ್ ಕಾರ್ಡ್ಗಳು, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಕೆಸಿ ಪ್ಯಾಲೇಸ್ ಕ್ಲಬ್ನಲ್ಲಿ ಹಲವು ದಿನಗಳಿಂದ ಇಸ್ಪೀಟ್ ದಂಧೆ ನಡೆಸುತ್ತಿರುವುದು ದಾಳಿಯಲ್ಲಿ ಪತ್ತೆಯಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ