ದಾವಣಗೆರೆ:
ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಸಮರ್ಥ ವ್ಯಕ್ತಿತ್ವ ಹೊಂದಿರುವ ನರೇಂದ್ರ ಮೋದಿ ಅಂತಹವರ ನಾಯಕತ್ವ ಅವಶ್ಯವಾಗಿದ್ದು, ಹೀಗಾಗಿ ಮತ್ತೊಮ್ಮೆ ಮೋದಿ, ಮಗದೊಮ್ಮೆ ಜಿ.ಎಂ.ಸಿದ್ದೇಶ್ವರ ಎಂಬ ಘೋಷಣೆಯೊಂದಿಗೆ ಮುಂದಿನ ಹತ್ತು ದಿನಗಳ ಕಾಲ ನಿರಂತರ ಪಕ್ಷದ ಕಾರ್ಯ ನಿರ್ವಹಿಸಲು ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠ ತೀರ್ಮಾನಿಸಿದೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕೋಷ್ಠದ ಕಾಕನೂರು ವೈ.ಮಂಜಪ್ಪ, ಕೇಂದ್ರದಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂಬ ಉದ್ದೇಶದಿಂದ ಮುಂದಿನ ಹತ್ತು ದಿನಗಳ ಕಾಲ ಬೆಳಿಗ್ಗೆ 7 ಗಂಟೆಯಿಂದ 9.30ರ ವರೆಗೆ ಹಾಗೂ ಸಂಜೆ 5.30ರ ನಂತರ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರ ಪರವಾಗಿ ಉದ್ಯಾನವನಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಮತಯಾಚಿಸಲಾಗುವುದು ಎಂದು ತಿಳಿಸಿದರು.
ದೇಶದ ಭದ್ರತೆಗಾಗಿ ಹಾಗೂ ರೈತರ ಹಿತಕ್ಕಾಗಿ, ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡುವಲ್ಲಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವಕೀಲರು ನಮ್ಮ ಕಾನೂನು ಪ್ರಕೋಷ್ಠ ವತಿಯಿಂದ ಮೋದಿ ಅವರ ಜನಪರ ಕಾರ್ಯಕ್ರಮಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡುವ ಮೂಲಕ ಬಿಜೆಪಿ ಬೆಂಬಲಿಸಲು ಮನವಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಿಸಲಿಕ್ಕಾಗಿಯೇ ಅಧಿಕಾರಕ್ಕೆ ಬಂದಿದ್ದೇವೆ ಎಂಬುದಾಗಿ ಹೇಳಿಕೆ ನೀಡಿದ್ದರ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪ್ರಕೋಷ್ಠದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಿ.ಪಿ.ಬಸವರಾಜ್, ಅನಂತಕುಮಾರ್ ಹೆಗಡೆ ಸಂವಿಧಾನ ಬದಲಿಸಲು ನಾವು ಅಧಿಕಾರಕ್ಕೆ ಬಂದಿರುವುದು ಎಂದಿರುವುದು ಹಲವು ತಿದ್ದುಪಡಿ ಕಂಡಿರುವ ಸಂವಿಧಾನವನ್ನು ಬದಲಿಸುವ ಬಗ್ಗೆ ಹೇಳಿದ್ದಾರೆ. ಆದರೆ, ಅವರು ಅಂಬೇಡ್ಕರ್ ಅವರು ಮೂಲದಲ್ಲಿ ರಚಿಸಿದ ಸಂವಿಧಾನ ಬೇಕೆಂಬುದಾಗಿ ಪ್ರತಿಪಾದಿಸಿದ್ದಾರೆಂದು ಸಮರ್ಥಿಸಿಕೊಂಡರು.ಸುದ್ದಿಗೋಷ್ಠಿಯಲ್ಲಿ ಪ್ರಕೋಷ್ಠದ ಕೆ.ಹೆಚ್.ಧನಂಜಯ, ಹೆಚ್.ದಿವಾಕರ್, ಬಿ.ಪಿ.ರಾಮಪ್ಪ, ಎ.ಸಿ.ರಾಘವೇಂದ್ರ, ವಿನಯ್ ಸಾಹುಕಾರ್, ಎ.ಎಸ್.ಮಂಜುನಾಥ್, ಆರ್.ಯೋಗೀಶ್, ಕೆ.ಎಂ.ನೀಲಕಂಠಯ್ಯ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
