ಬೆಂಗಳೂರು
ಕುದುರೆ ವ್ಯಾಪಾರವನ್ನೇ ಕಲೆಯಾಗಿಸಿಕೊಂಡಿರುವ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯುವುದಿರಲಿ, ದೇಶದಲ್ಲೇ ಅಧಿಕಾರ ಕಳೆದುಕೊಳ್ಳಲಿದೆ. 2019 ರಬಳಿಕ ದೇಶಕ್ಕೆ ,ಜನರಿಗೆ ಅಚ್ಚೇದಿನ( ಒಳ್ಳೆಯದಿನ) ಬರಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಘೋಷಿಸಿದ್ದಾರೆ.
ಅರಮನೆಯ ಅವರಣದಲ್ಲಿ ಇಂದು ನಡೆದ ಎಚ್.ಕೆ. ಪಾಟೀಲ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷಗಳು 28 ಕ್ಷೇತ್ರಗಳಲ್ಲೂ ಗೆಲ್ಲುವ ಮೂಲಕ ದಿಲ್ಲಿಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಸ್ಥಾಪನೆ ಮಾಡಲಿದೆ ಎಂದು ಹೇಳಿದರು.
ಕುದುರೆ ವ್ಯಾಪಾರ ಬಿಜೆಪಿಗೆ ಕಲೆಯಾಗಿ ಪರಿವರ್ತನೆಯಾಗಿದೆ. ಬಿಜೆಪಿ ಶಾಸಕರು ಬೇರೆ ರಾಜ್ಯದಲ್ಲಿದ್ದರೂ, ಏನೆಲ್ಲ ತಂತ್ರ ಮಾಡಿದರೂ ರಾಜ್ಯದ ಸಮ್ಮಿಶ್ರ ಸರಕಾರವನ್ನು ಬೀಳಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.
ಲೋಕಸಭೆ ಚುನಾವಣೆ 50-60 ದಿನದಲ್ಲಿ ಬರಲಿದೆ. ಮಾರ್ಚ್ ನಲ್ಲಿ ಅಧಿಕೃತ ಘೋಷಣೆ ಆಗಲಿದೆ. ದೇಶಕ್ಕೆ ಅಚ್ಚೇದಿನ ಬರುತ್ತದೆ ಎಂದು ಹೇಳಿ ಅಧಿಕಾರ ಮಾಡಿದ ಬಿಜೆಪಿ ನಾಯಕರು ದೇಶವನ್ನು ನಿರುದ್ಯೋಗಿಗಳ ಕೊಂಪೆಯನ್ನಾಗಿ ಮಾಡಿದ್ದಾರೆ. ಅಚ್ಚೇದಿನ್ ಎಂಬುದು ಕೆಲವೇ ಬಿಜೆಪಿ ನಾಯಕರಿಗೆ, ಮೋದಿ ಅವರ ಆಪ್ತ ಕೈಗಾರಿಕೋದ್ಯಮಿಗಳಿಗೆ ಮಾತ್ರ ಬಂದಿದೆ. ಆದರೆ ಜನರಿಗಿನ್ನೂ ಬಂದಿಲ್ಲ, ಎಂದರು.
2019ರ ಚುನಾವಣೆಯ ಬಳಿಕ ಶಾಪ ವಿಮೋಚನೆಯಾಗಿ ಒಳ್ಳೆಯ ದಿನಗಳು (ಅಚ್ಚೆದಿನಗಳು ) ಬರಲಿವೆ. ರಫೇಲ್ ವಿಚಾರದಲ್ಲಿ ಸರ್ಕಾರ ಪ್ರತಿಪಕ್ಷದ ಆರೋಪಗಳಿಗೆ ಉತ್ತರ ಕೊಟ್ಟಿಲ್ಲ , ಕಡಿಮೆ ಬೆಲೆಗೆ ಸಿಗುವ ಯುದ್ಧ ವಿಮಾನಗಳ ಬೆಲೆ ಹೆಚ್ಚಳ ಮಾಡಿ ಕೆಲವೇ ಉದ್ಯಮಿಗಳನ್ನು ಉದ್ದಾರ ಮಾಡಿದೆ ಎಂದು ವಾಗ್ದಾಳಿ ಮಾಡಿದರು.
ಡಿಕೆಶಿಯಿಂದ ಅಧಿಕಾರ ಹಸ್ತಾಂತರ
ಬೆಂಗಳೂರಿನ ಅರಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ ಅಧಿಕಾರ ಸ್ವೀಕಾರ ಕಾರ್ಯಕ್ರದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕವಾದ ಹೆಚ್ ಕೆ ಪಾಟೀಲರಿಗೆ ಸಚಿವ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಧ್ವಜ ನೀಡಿ ಅಧಿಕಾರ ಹಸ್ತಾಂತರ ಮಾಡಿದರು.
ಬಳಿಕ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸ, ಶಕ್ತಿ ಇದೆ. ನಿಷ್ಠೆ, ಪ್ರಾಮಾಣಿಕತೆ ಇದ್ದರೆ ಯಾರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ . ಮಹಿಳಾ ಸಮಾನತೆ, ಯುವಕರ ಉದ್ಯೋಗಕ್ಕೆ ಕಾಂಗ್ರೆಸ್ ಒತ್ತು ನೀಡಿದೆ. ಕಾರ್ಯಕರ್ತರೇ ಪಕ್ಷದ ಆಸ್ತಿ. ಪ್ರಚಾರ ಸಮಿತಿ ಅಧ್ಯಕ್ಷನಾಗಿ ಪಕ್ಷಕ್ಕೆ ಶಕ್ತಿ ಕೊಡುವ ಕೆಲಸ ಮಾಡಿದ್ದು ಸಮಾಧಾನ ತಂದಿದೆ. ಸೂಕ್ತ ವ್ಯಕ್ತಿಗೆ ಜವಾಬ್ದಾರಿ ನೀಡಿದ್ದು, ರಾಹುಲ್ ಅವರನ್ನು ಪ್ರಧಾನಿ ಮಾಡಲು ಕಾಲ ಪಕ್ವವಾಗುತ್ತಿದೆ ಎಂದು ಶಿವಕುಮಾರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
