ಹೂವಿನಹಡಗಲಿ :
ಸುಕ್ಷೇತ್ರ ಮೈಲಾರಲಿಂಗ ದೇವರ ಆಶೀರ್ವಾದ ನಮ್ಮ ಮೇಲೆ ಸದಾ ಇದ್ದು, ಪ್ರತಿಬಾರಿಯೂ ಕೂಡಾ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹೂವಿನಹಡಗಲಿ ಕ್ಷೇತ್ರದ ಮತದಾರರು ನಮ್ಮನ್ನು ಬೆಂಬಲಿಸುತ್ತಾ ಬಂದಿದ್ದಾರೆ ಎಂದು ಶಾಸಕ ಶ್ರೀರಾಮುಲು ಹೇಳಿದರು.
ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ದೇವರ ದರ್ಶನ ಪಡೆದ ನಂತರ ಮೈಲಾರ ಗ್ರಾಮದ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಹಿಂದಿನ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದಲ್ಲಿ ಸಾಕಷ್ಟು ತಪ್ಪುಗಳನ್ನು ನಡೆದರೂ, ಅದಕ್ಕೆ ಹೆಚ್ಚು ಮಾನ್ಯತೆ ನೀಡದೇ ಅವುಗಳನ್ನು ಹೊಟ್ಟೆಯಲ್ಲಿ ಹಾಕಿಕೊಂಡು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೆ.ಶಾಂತರನ್ನು ಬೆಂಬಲಿಸಿ ಹೆಚ್ಚಿಮ ಮತ ನೀಡಿ ಗೆಲ್ಲಿಸಬೇಕೆಂದು ಕರೆ ನೀಡಿದರು.
ಹೂವಿನಹಡಗಲಿ ಕ್ಷೇತ್ರದಲ್ಲಿ ತಾವು ಸಂಸದರಾಗಿದ್ದಾಗ ಸಂಸದರ ನಿಧಿಯ ಅನುದಾನವನ್ನು ಹೆಚ್ಚು ಬಳಕೆ ಮಾಡಿಕೊಂಡಿದ್ದೀರೆ, ಈ ಹಿಂದೆ ಸಂಸದರಾಗಿದ್ದ ಜೆ.ಶಾಂತ ಹಾಗೂ ತಾವು ಸಾಧ್ಯವಾದಷ್ಟು ಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡಿದ್ದೇವೆಂದು ಹೇಳಿದರು.
ವಿಶ್ವದ 3ನೇ ಸ್ಥಾನದಲ್ಲಿರುವ ಭಾರತವನ್ನು ನಂಬರ್ ಒನ್ ಸ್ಥಾನಕ್ಕೆ ಬರಲು ಬಿಜೆಪಿಯನ್ನು ಬೆಂಬಲಿಸಿ ಮತ್ತೆ ಪ್ರಧಾನಿಯನ್ನು ನರೇಂದ್ರ ಮೋದಿಯನ್ನೇ ಮಾಡಬೇಕಿದೆ. ರೈತರಿಗೆ ರಸಗೊಬ್ಬರ ಪೂರೈಕೆ ಸೇರಿದಂತೆ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಜತೆಗೆ ಈ ದೇಶದ 30 ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಎಂಬ ಯೋಜನೆಯಡಿ 5 ಲಕ್ಷ ರುಗಳ ಆರೋಗ್ಯ ವೆಚ್ಚಕ್ಕಾಗಿ ಹಣ ನೀಡುವುದು ಸೇರಿದಂತೆ ದೇಶ ಕಟ್ಟುವ ಕೆಲಸ ಮಾಡಿದವರಿಗೆ ಮತದಾನ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಮಾಜಿ ಶಾಸಕ ಬಿ.ಚಂದ್ರನಾಯ್ಕ ಮಾತನಾಡಿದರು. ಪ್ರಚಾರ ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಬಿಜೆಪಿ ಜಿಲ್ಲಾಧ್ಯಕ್ಷ ಪಾಟೀಲ್ ಚನ್ನಬಸವನಗೌಡ, ತಾಲೂಕ ಅಧ್ಯಕ್ಷ ಎಂ.ಬಿ.ಬಸವರಾಜ, ಟಿಪ್ಪು ಸುಲ್ತಾನ್, ಜಿಪಂ ಸದಸ್ಯ ಸಿ.ಕೊಟ್ರೇಶ, ತಾಪಂ ಸದಸ್ಯ ಈಟಿ ಲಿಂಗರಾಜ, ಎನ್.ಬಸವರಾಜ, ಡಾ.ರಮೇಶ, ಆರುಂಡಿ ನಾಗರಾಜ ಸೇರಿದಂತೆ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
