ರಸ್ತೆ ಅಗಲೀಕರಣ : ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ: ತಿಪ್ಪಾರೆಡ್ಡಿ

ಚಿತ್ರದುರ್ಗ:

   ರಸ್ತೆ ಅಗಲೀಕರಣಕ್ಕೆ ಅಗತ್ಯವಾಗಿರುವ ಹೆಚ್ಚುವರಿ 7.50 ಕೋಟಿ ರೂಪಾಯಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಕೂಡಲೇ ಒತ್ತುವರಿಯನ್ನು ತುರ್ತಾಗಿ ತೆರವುಗೊಳಿಸಬೇಕು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೂಚನೆ ನೀಡಿದರು.

   ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರಸಭೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಳ್ಳಕೆರೆ ಗೇಟ್‍ನಿಂದ ಪ್ರವಾಸಿಮಂದಿರದವರೆಗೆ ರಸ್ತೆ ಅಗಲೀಕರಣಕ್ಕೆ 19. ಕೋಟಿ ಮೀಸಲಿಡಲಾಗಿದೆ. ಪರಿಷ್ಕøತ ಕ್ರಿಯಾ ಯೋಜನೆ ಪ್ರಕಾರ 7.50 ಕೋಟಿ ಬೇಕಾಗಿದೆ. ಪ್ರಸ್ತಾವನೆ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಈ ರಸ್ತೆ ಅಕ್ಕ ಪಕ್ಕ ಸರ್ಕಾರಿ ಕಟ್ಟಡ, ಗೋಡೆಗಳನ್ನು ತೆರವುಗೊಳಿಸ ಬೇಕಾಗಿದೆ. ಒತ್ತುವರಿಯಾಗಿದ್ದರೆ ಕೂಡಲೇ ಹೊಡೆದು ಹಾಕಬೇಕು. ಇದರಿಂದ ಖಾಸಗಿಯವರು ಒತ್ತುವರಿ ತೆರವುಗೊಳಿಸಲು ಪ್ರೇರಣೆ ನೀಡಿದಂತಾಗುತ್ತದೆ ಎಂದರು.

  ಶಾಂತಿಸಾಗರಕ್ಕೆ ಹೊಸ ಮೋಟಾರ್: ಐದು ದಿನ ನೀರಿಲ್ಲ: ಶಾಂತಿಸಾಗರಕ್ಕೆ ಹೊಸ ಮೋಟಾರ್ ಅಳವಡಿಸುವ ಬಗ್ಗೆ ಗುತ್ತಿಗೆದರರು ಮತ್ತು ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳ ನಡುವೆ ಸಾಮರಸ್ಯ ಕೊರತೆ ಇರುವುದು ಸಭೆಯಲ್ಲಿ ಬಹಿರಂಗವಾಯಿತು. ಆಗ ಜಿಲ್ಲಾಧಿಕಾರಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೀರು ನಿಲ್ಲಿಸಿದರೆ ಮೋಟಾರ್ ಅಳವಡಿಸುವ ಕಾರ್ಯ ಸುಗಮವಾಗಲಿದೆ. ಮೌಖಿಕವಾಗಿ ಹೇಳುತ್ತಿರಾ ಲಿಖಿತವಾಗಿ ಪತ್ರ ವ್ಯವಹಾರ ಮಾಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

   ಮಧ್ಯ ಪ್ರವೇಶಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಒಬ್ಬರ ಮೇಲೆ ಒಬ್ಬರು ಹೇಳುವುದನ್ನು ಬಿಡಿ. ಮೊದಲು ಕೆಲಸ ಮಾಡಿ ಜನರಿಗೆ ಅನುಕೂಲ ಮಾಡಿಕೊಡಿ. ಯಾವ್ಯಾವ ದಿನ ನೀರು ನಿಲ್ಲಿಸಲಾಗುತ್ತದೆ ಎಂಬುದನ್ನು ಮೊದಲೇ ತಿಳಿಸಿ ಎಂದರು. ಆಗ ಅಧಿಕಾರಿಗಳು ಸೆಪ್ಟೆಂಬರ್ 15ರಿಂದ 19 ಅಥವಾ 20 ರವರೆಗೆ ನೀರು ನಿಲ್ಲಿಸಿ ಮೋಟಾರ್ ಅಳವಡಿಸುವುದಾಗಿ ಒಪ್ಪಿಕೊಂಡರು. ಜಿಲ್ಲಾಧಿಕಾರಿ ಜನರಿಗೆ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

   ಯೂನಿಯನ್ ಪಾರ್ಕ್ ದನದಕೊಟ್ಟಿಗೆ ನೆಲಸಮ: ಯೂನಿಯನ್‍ಪಾರ್ಕ್ ಅನ್ನು ಮಾದರಿ ಉದ್ಯಾನವನ್ನಾಗಿ ಮಾಡಲು ಉದ್ದೇಶಿಸಲಾಗಿದೆ. ಆದರೆ ಇಲ್ಲಿ ಬಿಡಾಡಿ ದನಗಳನ್ನು ಕೂಡಿ ಹಾಕುವ ಕೊಟ್ಟಿಗೆ ಮಾಡಲಾಗಿದೆ. ಇದರಿಂದಲೇ ಯೂನಿಯನ್ ಪಾರ್ಕ್ ಸೌಂದರ್ಯ ಹಾಳಾಗಿದೆ. ಕೂಡಲೇ ಕೊಟ್ಟಿಗೆ ನೆಲಸ ಮಾಡುವಂತೆ ತಿಪ್ಪಾರೆಡ್ಡಿ ಹೇಳಿದಾಗ ಅದಕ್ಕೆ ಜಿಲ್ಲಾಧಿಕಾರಿಗಳು ಸಮ್ಮತಿಸಿದರು.

   ಇಂದಿರಾಕ್ಯಾಂಟಿನ್ ಸ್ಥಳಾಂತರ: ಇಂದಿರಾಕ್ಯಾಂಟಿನ್ ಇರುವುದರಿಂದ ಯೂನಿಯನ್ ಪಾರ್ಕ್ ಅಭಿವೃದ್ದಿ ಕಾಮಗಾರಿಗಳು ಮಾಡಲು ಅಡ್ಡಿಯಾಗುತ್ತಿದೆ. ಕೂಡಲೇ ಅದನ್ನು ಸ್ಥಳಾಂತರ ಮಾಡುವಂತೆ ತಿಪ್ಪಾರೆಡ್ಡಿ ಹೇಳಿದರು. ಪೌರಾಯುಕ್ತ ಚಂದ್ರಪ್ಪ, ನ್ಯಾಯಾಲಯದಲ್ಲಿ ಇರುವುದರಿಂದ ಏನು ಮಾಡಲು ಸಾಧ್ಯವಿಲ್ಲ ಎಂದಾಗ ಕ್ಯಾಂಟಿನ್ ಗಲೀಜು ನೀರು ಮತ್ತು ಶೌಚಾಲಯ ನೀರನ್ನು ಉದ್ಯಾನಕ್ಕೆ ಬಿಟ್ಟು ಪರಿಸರ ಮಾಲಿನ್ಯ ಮಾಡಲಾಗುತ್ತಿದೆ. ಅಂತವರ ಮೇಲೆ ಮೊಕದ್ದಮೆ ಹೂಡಿ ಎಂದು ಆಗ್ರಹಿಸಿದರು. ಅಂತಿಮವಾಗಿ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬೀಗ ಹಾಕುವಂತಿಲ್ಲ:

   ಪ್ಲಾಸ್ಟಿಕ್ ಬಳಕೆ ಮಾಡಿದರೆ ದಂಡ ಹಾಕಲು ಅವಕಾಶ ಇದೆ ಹೊರತು ಅಂಗಡಿಗಳಿಗೆ ಬೀಗ ಹಾಕುವಂತಿಲ್ಲ ಎಂದು ಶಾಸಕರು ಹೇಳಿದಾಗ ಪೌರಾಯುಕ್ತ ಚಂದ್ರಪ್ಪ ನಿಯಮದ ಪ್ರಕಾರ ಅಂಗಡಿಗೆ ಬೀಗ ಹಾಕಿಸಬಹುದು ಎಂದರು. ಸಿಟ್ಟಿಗೆದ್ದ ಶಾಸಕರು, ಜಿಲ್ಲಾಧಿಕಾರಿಯೇ ಇಲ್ಲವೆಂದ ಮೇಲೆ ನಿಮ್ಮದೆನ್ರಿ ಎಂದು ರೇಗಿದರು.

   ಅನೇಕ ವರ್ಷಗಳಿಂದ ಅಂಗಡಿ ನಡೆಸಲಾಗುತ್ತಿದೆ. ಟ್ರೇಡ್ ಲೈಸೆನ್ಸ್ ತೆಗೆದುಕೊಂಡಿಲ್ಲ. ಈಗ ಏಕಾಏಕಿ 10 ರಿಂದ 20 ಸಾವಿರ ಕಟ್ಟುವಂತೆ ಅಂಗಡಿ ಮುಂದೆ ಅಧಿಕಾರಿಗಳು ಗಲಾಟೆ ಮಾಡುತ್ತಾರೆ. ಕೆಲವರು ಹಣ ತೆಗೆದುಕೊಂಡು ರಶೀದಿಯನ್ನೇ ಕೊಟ್ಟಿಲ್ಲ ಎಂದು ವರ್ತಕರು ಆರೋಪಿಸಿದರು.

   ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ, ಟ್ರೇಡ್ ಲೈಸೆನ್ಸ್ ಪಡೆಯದೆ ಅಂಗಡಿ ನಡೆಸುವರಿಗೆ ಮಾತನಾಡುವ ಹಕ್ಕಿಲ್ಲ. ಮೊದಲು ಸರ್ಕಾರದ ನಿಯಮದ ಪ್ರಕಾರ ಹಣ ಪಾವತಿಸಿ ಅನುಮತಿ ಪಡೆಯಬೇಕು. ನಂತರ ಬೇರೆ ವಿಚಾರ ಎಂದರು. ಆಗ ತಿಪ್ಪಾರೆಡ್ಡಿ ಏಕಾಏಕಿ ಅಷ್ಟೊಂದು ಹಣ ಕಟ್ಟಲು ಆಗುವುದಿಲ್ಲ. ಬದಲಿಗೆ ಕಡಿಮೆ ಮಾಡಿ ಲೈಸೆನ್ಸ್ ನೀಡುವಂತೆ ಹೇಳಿದರು. ಆಗ ವರ್ತಕರು, ಲೈಸೆನ್ಸ್ ಶುಲ್ಕ, ನವೀಕರಣ ಇತ್ಯಾದಿ ಪಾವತಿಗೆ ಪ್ರತ್ಯೇಕ ಕೌಂಟರ್ ನಿರ್ಮಿಸುವಂತೆ ಮನವಿ ಮಾಡಿದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link