ವಾಹನಗಳ ತಪಾಸಣೆ ಕಡ್ಡಾಯವಾಗಿ ಮಾಡಿ

ಬಳ್ಳಾರಿ

      ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರ ಸೂಚನೆ ಮೇರೆಗೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿ ನಾರಾಯಣಪ್ಪ ಹಾಗೂ ಎಂಸಿಸಿ ನೋಡಲ್ ಅಧಿಕಾರಿ ಚಿದಾನಂದಪ್ಪ ಅವರು ಬುಧವಾರ ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ 4 ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿ,ಅಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆಗಳು ಮತ್ತು ಸಿಬ್ಬಂದಿ ಉಪಸ್ಥಿತಿ ಕುರಿತು ಪರಿಶೀಲನೆ ನಡೆಸಿದರು. 

      ಸಿರಗುಪ್ಪಾ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್‍ಗಳನ್ನು ಮೊದಲು ಪರಿಶೀಲನೆ ನಡೆಸಿದ ಅವರು ನಂತರ ಮೋಕಾ ರಸ್ತೆ, ಕಣೇಕಲ್ ರಸ್ತೆ ಮತ್ತು ಅನಂತಪುರ ರಸ್ತೆ ಬಳಿ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್‍ಗಳನ್ನು ಪರಿಶೀಲಿಸಿದರು.

       ಅಲ್ಲಿ ಉಪಸ್ಥಿತರಿದ್ದ ಎಸ್‍ಎಸ್‍ಟಿ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಗೆ ನೀತಿ ಸಂಹಿತೆ ಪಾಲನೆ ಕುರಿತು ಕೆಲ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ವಿಧಾನಸಭಾ ಕ್ಷೇತ್ರ ಪ್ರವೇಶಿಸುವ ಎಲ್ಲ ವಾಹನಗಳನ್ನು ಕಡ್ಡಾಯವಾಗಿ ಚುನಾವಣಾ ಆಯೋಗದ ಗೈಡ್‍ಲೈನ್ಸ್ ಅನುಸಾರ ತಪಾಸಣೆ ಮಾಡಿ ಎಂದು ಅವರಿಗೆ ಸೂಚಿಸಿದರು.

     ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ : ಬಳ್ಳಾರಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಹಲಕುಂದಿ ಬಳಿ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್ ಸೇರಿದಂತೆ ವಿವಿಧ ಚೆಕ್‍ಪೋಸ್ಟ್‍ಗಳನ್ನು ಸಹಾಯಕ ಚುನಾವಣಾಧಿಕಾರಿಗಳಾಗಿರುವ ಸಹಾಯಕ ಆಯುಕ್ತ ರಮೇಶ ಕೊನಪ್ಪರೆಡ್ಡಿ ಅವರು ಹಾಗೂ ತಹಸೀಲ್ದಾರ್ ನಾಗರಾಜ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.ಅಗತ್ಯ ಸಲಹೆ-ಸೂಚನೆಗಳನ್ನು ಈ ಸಂದರ್ಭದಲ್ಲಿ ನೀಡಿದರು.
ನಂತರ ಅವರು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಮಾಡುವ ಸ್ಟ್ರಾಂಗ್‍ರೂಮ್‍ಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

      ಇದಾದ ನಂತರ ಸಹಾಯಕ ಆಯುಕ್ತರಾದ ರಮೇಶ ಕೊನಪ್ಪರೆಡ್ಡಿ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಪರಿಪಾಲಿಸಬೇಕಾದ ನಿಯಮಗಳು ಹಾಗೂ ನಾಮಪತ್ರ ಸಲ್ಲಿಸಬೇಕಾದ ಸಂದರ್ಭದಲ್ಲಿ ಲಗತ್ತಿಸಬೇಕಾದ ದಾಖಲೆಗಳ ಕುರಿತು ವಿವರಿಸಿದರು.

       ಹಗರಿಬೊಮ್ಮನಳ್ಳಿಯಲ್ಲಿ ಸಭೆ: ಉಪಚುನಾವಣಾ ನಿಮಿತ್ತ ಸಹಾಯಕ ಚುನಾವಣಾಧಿಕಾರಿ ರಾಜಪ್ಪ ಹಾಗೂ ತಹಸೀಲ್ದಾರ್ ವಿಜಯಕುಮಾರ ಅವರು ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸ್ಟಾಟಿಕ್ ಸರ್ವೆಲೈನ್ಸ್, ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವಲೈನ್ಸ್ ತಂಡ ಸೇರಿದಂತೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಎಲ್ಲ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದರು.

       ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಚುನಾವಣಾಧಿಕಾರಿ ರಾಜಪ್ಪ ಅವರು ಕರ್ತವ್ಯಕ್ಕೆ ನಿಯೋಜಿತರಾದ ಎಲ್ಲ ಸಿಬ್ಬಂದಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದರು. ನಂತರ ಅವರು ಸ್ಟ್ರಾಂಗ್‍ರೂಮ್‍ಗೆ ತೆರಳಿ ಅಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆಗಳು ಹಾಗೂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹರಳು ಚೆಕ್‍ಪೋಸ್ಟ್ ಸೇರಿದಂತೆ ವಿವಿಧೆಡೆ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್‍ಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

      ಜಿಲ್ಲಾಮಟ್ಟದ ಮುದ್ರಣಕಾರರ ಸಭೆ ಅ.11ರಂದು: ಉಪಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆ ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಅ.11ರಂದು ಸಂಜೆ 5ಕ್ಕೆ ಜಿಲ್ಲೆಯಲ್ಲಿರುವ ಎಲ್ಲ ಮುದ್ರಣಕಾರರ ಸಭೆ ಕರೆದಿದ್ದಾರೆ.

       ನೀತಿ ಸಂಹಿತೆ ಜಾರಿ ಸಂದರ್ಭದಲ್ಲಿ ಪಾಂಪ್ಲೆಟ್ಸ್, ಪೋಸ್ಟರ್ಸ್,ಕರಪತ್ರಗಳು ಮುದ್ರಣ ಸಂದರ್ಭದಲ್ಲಿ ಅನುಸರಿಸಬೇಕಾದ ನೀತಿ ನಿಯಮಗಳ ಕುರಿತು ಈ ಸಂದರ್ಭದಲ್ಲಿ ತಿಳಿಸಿಕೊಡಲಾಗುತ್ತದೆ. ಈ ನೀತಿ ಸಂಹಿತೆ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ತಮ್ಮ ಮೇಲೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಈ ಸಂದರ್ಭದಲ್ಲಿ ಮುದ್ರಣಕಾರರಿಗೆ ತಿಳಿಸಿಕೊಡಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap