ವಿಜಯೋತ್ಸವ ಆಚರಿಸಿದ ಕಾಂಗ್ರೆಸ್

ಚಳ್ಳಕೆರೆ

         ರಾಜ್ಯದಲ್ಲಿ ನಡೆದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಕೂಟದ ಸರ್ಕಾರ ನಿರೀಕ್ಷೆಯಂತೆ ಹೆಚ್ಚಿನ ಜಯವನ್ನು ಸಾಧನೆ ಮಾಡುವ ಮೂಲಕ ಭಾರತೀಯ ಜನತಾ ಪಕ್ಷದ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್.ಪ್ರಸನ್ನಕುಮಾರ್ ತಿಳಿಸಿದ್ದಾರೆ.

        ಇಲ್ಲಿನ ನೆಹರೂ ಸರ್ಕಲ್‍ನಲ್ಲಿ ಪಕ್ಷದ ವಿಜಯೋತ್ಸವವನ್ನು ಪಟಾಕಿ ಸಿಡಿಸಿ ಆಚರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿಷ್ಠಿತ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಪ್ರಭಾವಿ ನಾಯಕ ಬಿ.ಶ್ರೀರಾಮುಲು ಮತ್ತು ಜನಾರ್ಥನರೆಡ್ಡಿ ಯವರ ತವರಿನಲ್ಲೇ ಕಾಂಗ್ರೆಸ್ ಪಕ್ಷ ಐತಿಹಾಸಿಕ ವಿಜಯವನ್ನು ಸಾಧಿಸಿದೆ. ಚುನಾವಣಾ ಪ್ರಾರಂಭದಲ್ಲಿ ಪಕ್ಷದ ಅಭ್ಯರ್ಥಿ ಉಗ್ರಪ್ಪನವರನ್ನು ವಲಸೆ ನಾಯಕನೆಂದು ಟೀಕಿಸಿದ ಬಿಜೆಪಿ ಅಲ್ಲಿನ ಬಿಜೆಪಿ ಮುಖಂಡರಿಗೆ ಚುನಾವಣಾ ಫಲಿತಾಂಶದ ಮೂಲಕ ಜನತೆ ಉತ್ತರ ನೀಡಿದ್ಧಾರೆಂದರು. ರಾಜ್ಯದಲ್ಲಿ ಕಳೆದ ಆರು ತಿಂಗಳಕಾಲ ಆಡಳಿತ ನಡೆಸುತ್ತಿರುವ ಜೆಡಿಎಸ್, ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರದ ಆಡಳಿತವನ್ನು ರಾಜ್ಯದ ಜನತೆ ಈ ಫಲಿತಾಂಶದ ಮೂಲಕ ಸಮ್ಮತಿಸಿದ್ದು ಹೆಮ್ಮೆಯ ವಿಷಯವೆಂದರು.

       ಕಾಂಗ್ರೆಸ್ ಯುವ ಮುಖಂಡ ಫರೀದ್‍ಖಾನ್ ಮಾತನಾಡಿ, ಚುನಾವಣಾ ಪ್ರಾರಂಭದಲ್ಲೇ ಬಿಜೆಪಿ ಮೈತ್ರಿ ಸರ್ಕಾರದ ಆಡಳಿತದ ವಿರುದ್ದ ನಿರಂತರ ಅಪಪ್ರಚಾರದಲ್ಲಿ ತೊಡಗಿತ್ತು. ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಪಕ್ಷದ ಮುಖಂಡರು ಉತ್ತಮ ಯೋಜನೆಯನ್ನು ರೂಪಿಸಿದ್ದು, ಪಕ್ಷದ ವಿಜಯಕ್ಕೆ ಕಾರಣವಾಗಿದೆ. ವಿಶೇಷವಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಹಗಲು ರಾತ್ರಿ ಶ್ರಮಿಸಿದ್ದಾರೆ. ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕೂಡ್ಲಗಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಕೇವಲ 10 ದಿನಗಳಲ್ಲಿ ಇಡೀ ಕ್ಷೇತ್ರವನ್ನು ಸುತ್ತಾಡಿ ಉತ್ತಮ ಲೀಡ್ ದೊರಕಿಸಿಕೊಟ್ಟಿದ್ಧಾರೆ. ಮುಂಬರುವ ದಿನಗಳಲ್ಲೂ ಸಹ ಮೈತ್ರಿಕೂಟದ ಸರ್ಕಾರ ಉತ್ತಮ ಜಯಸಾಧಿಸುವಲ್ಲಿ ಯಾವುದೇ ಸಂಶಯವಿಲ್ಲವೆಂದರು.

        ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ವೈ.ಪ್ರಕಾಶ್, ಚಳ್ಳಕೆರಪ್ಪ, ಜಗದೀಶ್, ಕೃಷ್ಣ, ಟಿ.ಜೆ.ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link