ಬಳ್ಳಾರಿ
ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಸಿರಗುಪ್ಪದ ಎಚ್.ಹೊಸಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ಕಂಟೈನ್ಮೆಂಟ್ ಝೋನ್ ಸ್ಥಿತಿಗತಿಗಳ ಪರಿಶೀಲನೆ ನಡೆಸಿತು.
ಈ ಎಚ್.ಹೊಸಳ್ಳಿ ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮವನ್ನು ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಲಾಗಿದ್ದು, ಈ ಪ್ರದೇಶದಲ್ಲಿರುವ ಜನರಿಗೆ ಆಹಾರ ಹಾಗೂ ಮೂಲಸೌಕರ್ಯಗಳು ಸಮರ್ಪಕವಾಗಿ ವಿತರಣೆಯಾಗುತ್ತಿದೆಯೇ ಎಂಬುದನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಪರಿಶೀಲಿಸಿದರು.
ಮನೆಮನೆಗೆ ಸಮೀಕ್ಷೆ ನಡೆಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಆರೋಗ್ಯ ಇಲಾಖೆಯ ಕಾರ್ಯಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್ಜ್, ಗ್ಲೋಸ್ಗಳು ಹಾಗೂ ಊಟ ಹಾಗೂ ಇನ್ನೀತರ ಸೌಕರ್ಯಗಳು ಸರಿಯಾಗಿ ಒದಗಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ನಕುಲ್ ಅವರು ಇವರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮದಲ್ಲಿ ಪ್ರೈಮರಿ ಕಂಟ್ಯಾಕ್ಟ್ ಎಂದು ಗುರುತಿಸಲಾಗಿರುವ 20 ಮತ್ತು ಸೆಕೆಂಡರಿ ಕಂಟ್ಯಾಕ್ಟ್ ಎಂದು ಗುರುತಿಸಲಾಗಿರುವ 27 ಜನರಿಗೆ ಗ್ರಾಮದಲ್ಲಿಯೇ ಏ.2ರಿಂದ ಕ್ವಾರಂಟೈನ್ ವಿಧಿಸಲಾಗಿದ್ದು,ಏ.30ರವರೆಗೆ ಕ್ವಾರಂಟೈನ್ನಲ್ಲಿರಲಿದ್ದಾರೆ. ಇವರಿಗೆ ನೀರು,ಊಟದ ವ್ಯವಸ್ಥೆಯನ್ನು ನಿಯಮಾನುಸಾರ ಒದಗಿಸುವಂತೆ ಡಿಸಿ ನಕುಲ್ ಸೂಚಿಸಿದರು.ಇದೇ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಕೊರೊನಾ ಕುರಿತು ಯಾವುದೇ ರೀತಿಯ ಭಯಬೇಡ ಮತ್ತು ಮುನ್ನಚ್ಚೆರಿಕೆ ವಹಿಸುವಂತೆ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ್, ಎಸಿ ರಮೇಶ ಕೋನರೆಡ್ಡಿ, ಪ್ರೋಬೆಷನರಿ ಐಎಎಸ್ ಈಶ್ವರ್ ಕಾಂಡೂ, ಡಿಎಚ್ಒ ಜನಾರ್ಧನ್ ಸೇರಿದಂತೆ ಕಂದಾಯ,ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
