ಬೆಂಗಳೂರು
ರಾಜ್ಯ ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆ ಹತ್ತಿರ ಬರುತ್ತಿರುವಾಗಲೆ ಬಿಜೆಪಿಯಲ್ಲಿ ಭಿನ್ನಮತ, ಅಸಮಾಧಾನ ಮತ್ತು ಆಕ್ರೋಶ ಸ್ಫೋಟಗೊಂಡಿದೆ.ಬಿಎಸ್ ವೈ ಮಾಜಿ ಬಲಗೈ ಭಂಟ ಸಂತೋಷ್ ಗೆ ರಾಜಕೀಯ ಕಾರ್ಯದರ್ಶಿ ಪಟ್ಟ ನೀಡಿರುವುದು ಜೊತೆ ಸೋತು ಸುಣ್ಣವಾಗಿದ್ದ ಯೋಗಿಶ್ವರ್ ಗೆ ಮಂತ್ರಿಪಟ್ಟ ನೀಡಲು ಹೊರಟಿರುವುದೇ ಹಿರಿಯ ಶಾಸಕರ ಅಸಮಾಧಾನ, ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ.
ನಿನ್ನೆ ರಾತ್ರಿ ನಗರದ ಹೃದಯಭಾಗದಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ 8ರಿಂದ10 ಶಾಸಕರು ಸುಮಾರು ಎರಡೂವರೆ ಗಂಟೆಗಳ ಸಭೆ ಮಾಡಿರುವುದು ಬಿಜೆಪಿ ಪಾಳೆಯದಲ್ಲಿ ಹೊಸ ಸಂಚಲನ ಮೂಡಿಲು ಕಾರಣವಾಗಿದೆ.
ಸಭೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅದ್ಯತೆ, ಕೆಲ ಶಾಸಕರಿಗೆ ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿಯಲು ತೀರ್ಮಾನ ಮಾಡಲಾಗಿದೆ. ಇನ್ನು ಸಿಎಂ ಪುತ್ರ ವಿಜೇಯಂದ್ರರ ಹಸ್ತಕ್ಷೇಪದ ಬಗ್ಗೆ ಚರ್ಚೆಯಾಗಿದೆ ಎಂದೂ ಹೇಳಲಾಗಿದೆ.
ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು, ಯಾವುದೇ ಕೆಲಸಕ್ಕೂ ವಿಜಯೇಂದ್ರ ಬಳಿ ಅಲೆದಾಡುವುದು ಮೊದಲು ನಿಲ್ಲಬೇಕು. ಇನ್ನೂ ಕಳೆದ ಕೆಲ ದಿನಗಳಿಂದ ದೂರವಾಗಿದ್ದ ಪಿಎ ಸಂತೋಷ್ ಗೆ ಏಕಾಏಕಿ ನೀಡಿರುವ ಸ್ಥಾನದ ಬಗ್ಗೆ ಶಾಸಕರು ಬಹಳ ಕೆಂಗಣ್ಣು ಬೀರಿದ್ದಾರೆ. ಜೊತೆಗೆ ಕತ್ತಿ ಸಹೋದರ ರಮೇಶ್ ಕತ್ತಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿದ್ದು ಹೀಗಾಗಿ ರಾಜ್ಯಸಭೆಗೆ ಅವರನ್ನು ಅಯ್ಕೆ ಮಾಡಲೇ ಬೇಕೆಂದು ಪಟ್ಟು ಹಿಡಿಯಲಾಗಿದೆ. ಇದೆ 7ರಂದು ಮೂವರಿಗೆ ಮಂತ್ರಿ ಪಟ್ಟಕಟ್ಟಲು ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಸಿದ್ಧರಾಗಿದ್ದರು ಎಂಬ ಮಾತು ಕೇಳಿ ಬರುತ್ತಿದೆ.
ಆ ತ್ರಿಮೂರ್ತಿಗಳಲ್ಲಿ ಮೊದಲಿಗರಾಗಿ ಅರವಿಂದ್ ಲಿಂಬಾವಳಿ, ಉಮೇಶ್ ಕತ್ತಿ, ಮತ್ತು ಅಪರೇಷನ್ ಕಮಲದ ರೂವಾರಿ ಸಿ. ಪಿ. ಯೋಗೆಶ್ವರ್ ಗೆ ಅದೃಷ್ಟದ ಬಾಗಿಲು ತೆರೆಯಲು ಸಿದ್ಧತೆ ಮಾಡಲಾಗುತ್ತಿದೆ. ಜೊತೆಗೆ ಸಿಪಿ ಯೋಗಿಶ್ವರ್ ಮಂತ್ರಿಸ್ಥಾನ ದಕ್ಕಿಸಿ ಕೊಡುವಲ್ಲಿ ಸಂತೋಷ್ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿರವುದೇ ಹಿರಿಯ ಶಾಸಕರು ಸಭೆ ಸೇರಿ ಕಾರ್ಯತಂತ್ರ ಹೆಣೆಯಲು ಕಾರಣ ಎನ್ನಲಾಗಿದೆ.
ಇದರ ಬೆನ್ನಲೇ ಉತ್ತರ ಕರ್ನಾಟಕದ ಕೆಲ ಶಾಸಕರು ರಾತ್ರಿ ನಗರದ ಹೃದಯಭಾಗದಲ್ಲಿ ಬಿಸಿಬಿಸಿ ರಾಜಕೀಯದ ಚರ್ಚೆ ಮಾಡಿದ್ದಾರೆ ಎನ್ನಲಾಗಿದ್ದು, ಈ ಎಲ್ಲ ಘಟನಾವಳಿಗೆ ಮುಖ್ಯಮಂತ್ರಿಯವರೇ ಕಾರಣ ಎಂದು ದೂರಲಾಗಿದೆ.
ಎನ್ ಆರ್ ಸಂತೋಷ್ ರಾಜಕೀಯ ಕಾರ್ಯದರ್ಶಿ ಯಾಗಿರುವಾಗ ನಾವು ಏಕೆ ಸಮ್ಮನಿರಬೇಕು ? ನಮಗೂ ಮಂತ್ರಿ ಸ್ಥಾನ ಬೇಕು ಎಂಬ ಪಟ್ಟು ಹಾಕಿ ಯಡಿಯೂರಪ್ಪರ ನಾಗಲೋಟಕ್ಕೆ ಕಡಿವಾಣ ಹಾಕಲು ಶಾಸಕರು ಈ ಸಭೆ ಮಾಡಿದ್ದಾರೆ ಎನ್ನಲಾಗಿದೆ.
ಜೊತೆ ಸೋತು ಸುಣ್ಣವಾಗಿದ್ದ ಯೋಗಿಶ್ವರ್ ಗೆ ಮಂತ್ರಿಪಟ್ಟ ನೀಡಲು ಹೊರಟಿರುವುದು ಸಹ ಬಿಜೆಪಿ ಶಾಸಕರಿಗೆ ಸಹಿಸಿಕೊಳ್ಳಲು ಆಗದಿರುವುದೇ ಶಾಸಕರ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ. ಈ ಹಿಂದೆ ಬೆಳಗಾವಿಯ ಬೆಂಕಿಯಿಂದಲ್ಲೇ ದೋಸ್ತಿಗಳನ್ನು ಸುಟ್ಟು ಅಧಿಕಾರ ಹಿಡಿದಿದ್ದ ಕಮಲ, ಇದೀಗ ಮತ್ತೆ ಅದೇ ಬೆಳಗಾವಿಯ ಬೆಂಕಿ ಬಿಜೆಪಿಯಲ್ಲಿ ಧಗಧಗ ಉರಿಯಲು ಹೊರಟಿದೆ. ಆದರೆ ಈ ಬಾರೀ ಬೆಂಕಿಯ ಕಿಡಿ ಹಚ್ಚಿರುವುದು ಜಾರಕಿಹೊಳಿ ಸಹೋದರಲ್ಲ, ಬದಲಾಗಿ ಕತ್ತಿ ಸಹೋದರರರು ಎಂಬುದು ಗೊತ್ತಿರುವ ಸಂಗತಿ.
ಇದೀಗ ಅಂಟಿಕೊಂಡಿರುವ ರಾಜಕೀಯ ಬೆಂಕಿಯನ್ನು ಸಿಎಂ ಹೇಗೆ ಪರಿಹರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಇನ್ನು ಮಾಧ್ಯಮಗಳನ್ನು ದೂರ ಇಡಲು ಬಸವನಗೌಡ ಪಾಟೀಲ್ ಯತ್ನಾಳ್ ಪ್ರಯತ್ನ ಮಾಡಿದ್ದಾರೆ. ಶಾಸಕರ ಭವನದಲ್ಲಿ ಇದ್ದರೂ ಹೊರಗೆ ಬರದೆ ಮತ್ತು ನಾನು ಯಾರ ಜೊತೆಗೂ ಮಾತನಾಡುವುದಿಲ್ಲ ಎಂದು ಅಪ್ತ ಸಹಾಯಕರ ಮೂಲಕ ಯತ್ನಾಳ್ ಸಂದೇಶ ಕಳಿಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಕೊರೋನ ಪರಿಸ್ಥಿತಿ ಭಯಾನಕವಾಗುತ್ತಿದೆ, ಮೇಲಾಗಿ ರಾಜ್ಯದ ಆರ್ಥಿಕ ಸಂಕಷ್ಟ ಹದಗೆಟ್ಟಿದೆ. ಇಂತಹ ಸ್ಥಿತಿಯಲ್ಲಿ ಭಿನ್ನಮತ ಎಷ್ಟು ಸರಿ ?. ಈ ಮೂಲಕ ಜನರಿಗೆ ಯಾವ ಸಂದೇಶ ರವಾನಿಸುತ್ತಿದ್ದೀರಾ ?ಎಂದು ಪಕ್ಷದ ಹಿರಿಯ ಮುಖಂಡರು ಭಿನ್ನಮತೀಯರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಏನೇ ಮನಸ್ತಾಪ ಇದ್ದರೂ ಸಿಎಂ ಹಾಗೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ, ಇದೆಲ್ಲವನ್ನೂ ಬಿಟ್ಟು ಬಹಿರಂಗವಾಗಿ ಮಾತನಾಡಿ ಪಕ್ಷ ಹಾಗೂ ಸರ್ಕಾರದ ಇಮೇಜ್ ಗೆ ಧಕ್ಕೆ ಉಂಟು ಮಾಡಬೇಡಿ ಎಂದು ಹೇಳಿದ ನಂತರ ಬಿನ್ನಶಾಸಕರು ಸದ್ಯಕ್ಕೆ ತಣ್ಣ ಗಾಗಿದ್ದಾರೆ ಎನ್ನಲಾಗಿದೆ.
ಈ ನಡುವೆ ಮುಖ್ಯಮಂತ್ರಿ ಸ್ಪಷ್ಟಣೆ ನೀಡಿ ಪಕ್ಷದ ಕೆಲವು ಶಾಸಕರೊಂದಿಗೆ ಚರ್ಚಿಸಲು ತುರ್ತು ಸಭೆ ಕರೆಯಲಾಗಿದೆ ಎನ್ನುವ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನು ಗಮನಿಸಿದ್ದೇನೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಅಂತಹ ಯಾವುದೇ ಸಭೆಯನ್ನು ನಾನು ಕರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
