ಬಳ್ಳಾರಿ
“ಇದುವರೆಗೆ ಜನ ಸುಮ್ಮನೆ ಇದ್ದಾರೆಯೇ ಮನೆಕಟ್ಟಿಕೊಡಿ ಅಂತ ಕೇಳಿಲ್ವೇ” ಹೀಗೆಂದು ಪ್ರಶ್ನಿಸಿದವರು ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ ಅಧ್ಯಕ್ಷರಾದ ಶಾಸಕ ಅರಗ ಜ್ಞಾನೇಂದ್ರ.
ಸಮಿತಿಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಪುನರ್ವಸತಿಗೊಂಡ ಗ್ರಾಮಗಳಲ್ಲಿ ತುರ್ತು ಕಾಮಗಾರಿಗಳಿಗಾಗಿ ಉದ್ದೇಶಿತ ನಿಧಿ ಬಳಸಿಕೊಳ್ಳದೇ ಇದ್ದುದಕ್ಕೆ ಸಂಬಂಧಿಸಿದಂತೆ 10 ವರ್ಷಗಳ ಹಿಂದೆ ಪ್ರವಾಹದ ಸಂದರ್ಭದಲ್ಲಿ ನಡವಿ ಗ್ರಾಮದಲ್ಲಿ ದಾನಿಗಳ ನೆರವು ಹಾಗೂ ಸ್ಲಂಬೋರ್ಡ್ ನಿಂದ ನಿರ್ಮಿಸಲಾದ ಪುನರ್ವಸತಿಗೊಂಡ ಸ್ಥಳ ಪರಿವೀಕ್ಷಣೆ ನಡೆಸಿ ಅವರು ಮಾತನಾಡಿದರು.
ಇದಕ್ಕುತ್ತರಿಸಿದ ಡಿಸಿ ನಕುಲ್ ಅವರು ಪ್ರವಾಹ ಬಂದಾಗ ಬಹಳಷ್ಟು ಒತ್ತಡ ಬರುತ್ತದೆ. ಕೆಲ ಮನೆಗಳು ಕಟ್ಟಿಕೊಡದ ಕಾರಣ ಇನ್ನೂ ಕೆಲವರು ಮೂಲಮನೆಯಲ್ಲಿಯೇ ಇದ್ದಾರೆ ಎಂದರು.ನಡವಿ ಗ್ರಾಮದಲ್ಲಿ ಸಂಘಸಂಸ್ಥೆಗಳು ಮತ್ತು ದಾನಿಗಳು ನಿರ್ಮಿಸಲಾದ ಮನೆಗಳು ಸಂಪೂರ್ಣ ಕಂಪ್ಲಿಟ್ ಆಗಿದ್ದು, ಹಸ್ತಾಂತರವಾಗಿ ಜನರು ಕೂಡ ವಾಸಿಸುತ್ತಿದ್ದಾರೆ. ಕೊಳಗೇರಿ ಅಭಿವೃದ್ಧಿ ಮಂಡಳಿ ಈ ಗ್ರಾಮದಲ್ಲಿ ಮನೆಗಳನ್ನು ಹಸ್ತಾಂತರಿಸಿಲ್ಲ 388ಮನೆಗಳು ಇನ್ನೂ ತಳಮಟ್ಟದಲ್ಲಿಯೇ ಇವೆ ಎಂದು ಅವರು ವಿವರಿಸಿದರು.ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ತಡವಾಗಿರುವುದಕ್ಕೆ ಕಾರಣಗಳನ್ನು ವಿವರಿಸಿದರು.
ಸಮಿತಿ ಸದಸ್ಯರಾದ ಸಿದ್ದು ಸವದಿ,ಕರುಣಾಕರರೆಡ್ಡಿ ಹಾಗೂ ಅಧ್ಯಕ್ಷ ಅರಗ ಜ್ಞಾನೇಂದ್ರ ಅವರು ಕೊಳಗೇರಿ ಅಭಿವೃದ್ಧಿ ಮಂಡಳಿ ಬಳ್ಳಾರಿಯಲ್ಲಷ್ಟೀಟೇ ಅಲ್ಲ ರಾಜ್ಯದ ಎಲ್ಲಿಯೂ ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಮನೆಗಳ ತಳಮಟ್ಟದಲ್ಲಿರುವುದಕ್ಕೆ ಸಂಬಂಧಿಸಿದ ಸಮಗ್ರ ವರದಿ ಸಲ್ಲಿಸುವಂತೆ ಅವರು ಸೂಚಿಸಿದರು.
ದಾನಿಗಳ ನೆರವಿನಿಂದ ನಿರ್ಮಿಸಿ ಒದಗಿಸಲಾದ ಶಿವಮ್ಮ ರಾಮಪ್ಪ ಕೋರಿ ಎನ್ನುವವರ ಮನೆ ಪರಿಶೀಲಿಸಿದ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಪ್ರವಾಹ ಬಾಧಿತರ ಮೂಲಮನೆ ಮಣ್ಣಿನಿಂದ ಕೂಡಿದ್ದೀತು. ಅದಕ್ಕಿಂತಲೂ ಗುಣಮಟ್ಟದ ಮನೆ ನಿರ್ಮಿಸಲಾಗಿದೆ. ಆದರೇ ಚಿಕ್ಕದಾಗಿವೆ ಎಂದರು. 1.40ಲಕ್ಷ ರೂ.ವೆಚ್ಚದಲ್ಲಿ ಇವುಗಳನ್ನು ನಿರ್ಮಿಸಿಕೊಡಲಾಗಿದೆ ಎಂದು ಅಧಿಕಾರಿಗಳು ಅಧ್ಯಕ್ಷರ ಗಮನಕ್ಕೆ ತಂದರು.
ಪ್ರವಾಹ ಬಂದಾಗ ನಮ್ಮ ಮನೆಯ ಸುತ್ತಲೂ ನೀರು ಬಂದಿತ್ತು. ಈ ಹಿನ್ನೆಲೆಯಲ್ಲಿ 10ವರ್ಷಗಳ ಹಿಂದೆ ನಮಗೆ ಸ್ಥಳಾಂತರಿಸಿ ಈ ಮನೆ ನೀಡಲಾಗಿತ್ತು. ಅಲ್ಲಿಂದ ಇಲ್ಲಿಯೇ ಇದ್ದೇವೆ. 5ಮಕ್ಕಳೊಂದಿಗೆ ಇಲ್ಲಿಯೇ ವಾಸಿಸುತ್ತಿದ್ದೇವೆ.4ಎಕರೆ ಜಮೀನು ಇದೆ; ವ್ಯವಸಾಯ ಮಾಡಿಕೊಂಡು ಜೀವಿಸುತ್ತಿದ್ದೇವೆ. ಮನೆ ಚಿಕ್ಕದಿದೆ; ಮುಂದುಗಡೆ ತಗಡಿನ ಶೀಟ್ ಹಾಕಿಕೊಂಡು ಜೀವಿಸುತ್ತಿರುವುದಾಗಿ ಶಿವಮ್ಮ ಕೋರಿ ಅವರು ಹೇಳಿದರು.
ಸಮಿತಿ ಸದಸ್ಯರಾದ ಶಾಸಕರಾದ ಸಂಜೀವ ಮಂಟದೂರು,ಕರುಣಾಕರರೆಡ್ಡಿ, ಸಿದ್ದು ಸವದಿ, ಪ್ರಾಣೇಶ, ಅನಿಲ್ ಚಿಕ್ಕಮಾದು,ನಾಗಣಗೌಡ ಕಂದಕೂರು,ಎಚ್.ಹಾಲಪ್ಪ,ಸಿ.ಎಸ್.ಪುಟ್ಟರಾಜು,ಶ್ರೀಕಾಂತ್ ಪೆಟ್ನೇಕರ್, ಸ್ಥಳೀಯ ಶಾಸಕ ಸೋಮಲಿಂಗಪ್ಪ,ವಿಧಾನಸಭಾ ಸಚಿವಾಲಯದ ಉಪಕಾರ್ಯದರ್ಶಿ ಪರಶಿವಮೂರ್ತಿ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿ ಮಹಾದೇವ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಅಪರ ಜಿಲ್ಲಾಧಿಕಾರಿ ಮಂಜುನಾಥ,ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
