ಬಳ್ಳಾರಿ
ಕೇಂದ್ರ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಮಿತಾಬ್ ಗೌತಮ್ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡ ಭಾನುವಾರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬೆಳಗ್ಗೆ ಬಳ್ಳಾರಿಯ ಸರಕಾರಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಜಿಲ್ಲೆಯಲ್ಲಿ ಮಳೆ ಬರದ ಪರಿಣಾಮ ಮತ್ತು ಬರದ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. 2.30ಲಕ್ಷ ಹೆಕ್ಟೇರ್ ಪ್ರಮಾಣದ ಬೆಳೆ ಹಾನಿಯಾಗಿದೆ.153 ಕೋಟಿ ರೂ.ಬೆಳೆ ಹಾನಿಯಾಗಿದೆ. ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಬರ ಸಂಬಂಧಿತ ಕಾಮಗಾರಿಗಳನ್ಮು ಅಧ್ಯತೆ ಮೇಲೆ ಜಿಲ್ಲಾಡಳಿತ ಕೈಗೊಳ್ಳುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಲಾಗಿದೆ. ನಮ್ಮ ಜಿಲ್ಲೆಗೆ ತಮ್ಮ ತಂಡದ ವತಿಯಿಂದ 153 ಕೋಟಿ ರೂ. ಒದಗಿಸುವ ನಿಟ್ಟಿನ ಶಿಫಾರಸ್ಸು ಮಾಡುವಂತೆ ಅವರು ಕೋರಿದರು.
ಇದಾದ ನಂತರ ಅವರು ಮೊದಲಿಗೆ ಕೂಡ್ಲಿಗಿ ತಾಲೂಕಿನ ಮಹಾದೇವಪುರದ ಅಪ್ಪೇನಹಳ್ಳಿ ಗ್ರಾಪಂ ವ್ಯಾಪ್ತಿಯ ಮಹಾದೇವಪುರದ ಚಂದ್ರೇಗೌಡ ಎನ್ನುವವರ ಹೊಲಕ್ಕೆ ಅಮಿತಾಬ್ ಗೌತಮ್ ನೇತೃತ್ವದ ಮೂರು ಜನ ಅಧಿಕಾರಿಗಳ ತಂಡ ಭೇಟಿ ನೀಡಿ ಮಳೆ ಬರದೇ ಬಾಡಿನಿಂತ ಶೇಂಗಾ ಬೆಳೆ ಮತ್ತು ಸಂಪೂರ್ಣ ಒಣಗಿದ ಸಜ್ಜೆ ಬೆಳೆಯನ್ನು ಅವರು ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ರೈತರೊಂದಿಗೆ ಅಧಿಕಾರಿಗಳು ಚರ್ಚಿಸಿದರು. ರೈತರು ಸಹ ಮಳೆ ಬರದೇ ಕಂಗಾಲಾಗಿರುವುದನ್ನು ಹಾಗೂ ಪದೇ ಪದೇ ತಾವು ಅನುಭವಿಸುತ್ತಿರುವ ಬರದ ಸಮಸ್ಯೆ ಹಾಗೂ ಬೆಳೆ ಹಾನಿ, ಬಿತ್ತನೆಗೆ ಮಾಡಿದ ಖರ್ಚು ಕೂಡ ಬರದಿರುವುದು ಸೇರಿದಂತೆ ತಾವು ಅನುಭವಿಸುತ್ತಿರುವ ಸಮಸ್ಯೆಗಳ ಸರಮಾಲೆಯನ್ನೇ ಅಧಿಕಾರಿಗಳ ಮುಂದಿಟ್ಟರು.
ತಮ್ಮ ಬೆಳೆಗೆ ವಿಮೆ ಮಾಡದಿರುವುದು ಹಾಗೂ ಈ ಕುರಿತು ನಮಗೆ ಅರಿವಿಲ್ಲ ಎಂದು ಹೊಲದ ಒಡೆಯ ರೈತ ಚಂದ್ರೇಗೌಡ ಹಾಗೂ ಅಲ್ಲಿದ್ದ ರೈತರು ವಿವರಿಸಿದರು.
ಇದಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿಗಳ ತಂಡದ ಮುಖ್ಯಸ್ಥ ಕೇಂದ್ರ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಮಿತಾಬ್ ಗೌತಮ್ ಅವರು ರಾಜ್ಯ ಸರಕಾರ ರಾಜ್ಯದ ವಿವಿಧೆಡೆ ಬರ ತಾಂಡವಾಡುತ್ತಿದ್ದು, ಕೂಡಲೇ ಪರಿಹಾರ ಒದಗಿಸುವಂತೆ ಮತ್ತು ಪರಿಶೀಲನೆ ನಡೆಸುವಂತೆ ಕೋರಿದ ಹಿನ್ನೆಲೆ ಮೂರು ತಂಡಗಳನ್ನಾಗಿ ವಿಂಗಡಿಸಿ 13 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಬರಸ್ಥಿತಿ ಅಧ್ಯಯನ ಮಾಡಲಾಗಿದೆ.
ನ.19ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ಕೇಂದ್ರ ಸರಕಾರಕ್ಕೆ ಅಂತಿಮ ವರದಿ ಶೀಘ್ರ ಸಲ್ಲಿಸಲಾಗುವುದು. ತಮ್ಮ ಜಿಲ್ಲೆಯಲ್ಲಿಯೂ ಭೀಕರ ಬರವಿರುವುದು ಗಮನಕ್ಕೆ ಬಂದಿದ್ದು,ಸೂಕ್ತ ಮತ್ತು ತಮ್ಮ ಜಿಲ್ಲೆಗೆ ಅನುಕೂಲವಾಗುವ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದರು.
2017-18ಕ್ಕೆ ಕೇಂದ್ರ ಪ್ರಕೃತಿ ವಿಕೋಪ ನಿಧಿಯಿಂದ 245 ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಮೊದಲ ಕಂತಿನ ರೂಪದಲ್ಲಿ 115ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಫಸಲ್ ಭಿಮಾ ಯೋಜನೆ ಬೆಳೆ ವಿಮೆ ಪರಿಹಾರದ ಕುರಿತು ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿದ್ದು, ಈ ಕುರಿತು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮಾತನಾಡಿ, 2.30ಲಕ್ಷ ಪ್ರದೇಶದ ಬೆಳೆ ಹಾನಿಯಾಗಿದ್ದು, 153ಕೋಟಿ ರೂ. ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ದಿವಾಕರ್, ಉಪನಿರ್ದೇಶಕ ಶಿವನಗೌಡ ಪಾಟೀಲ್, ತಹಸೀಲ್ದಾರ್ ಕೃಷ್ಣಮೂರ್ತಿ, ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ.ದೇವನಾಳ ಸೇರಿದಂತೆ ಅನೇಕ ಅಧಿಕಾರಿಗಳು ಮತ್ತು ರೈತರು ಇದ್ದರು.
ನಂತರ ಅಮಿತಾಬ್ ಗೌತಮ್ ನೇತೃತ್ವದ ಅಧಿಕಾರಿಗಳ ತಂಡವು ನಂತರ ಕೂಡ್ಲಿಗಿಗೆ ತೆರಳಿ,ಅಲ್ಲಿಂದ ಭಟ್ಟನಹಳ್ಳಿಗೆ ತೆರಳಿ ಹಾನಿಗೀಡಾದ ಬೆಳೆಗಳ ವೀಕ್ಷಣೆ ಮತ್ತು ರೈತರೊಂದಿಗೆ ಚರ್ಚೆ ನಡೆಸಿತು. ನಂತರ ಅಲಬೂರಗೆ ತೆರಳಿ ಅಲ್ಲಿಯೂ ಹಾನಿಗೀಡಾದ ಬೆಳೆಗಳ ಪರಿಶೀಲಿಸಿ ನಂತರ ದಾವಣಗೆರೆ ಜಿಲ್ಲೆಯ ಹರಪನಳ್ಳಿಗೆ ತಾಲೂಕಿನ ಹಳ್ಳಿಗಳಿಗೆ ತೆರಳಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/11/bellary7.jpg)