ಪಾಲಿಕೆ ಕಚೇರಿಯಲ್ಲಿ ಹಬ್ಬದ ಸಡಗರ

ತುಮಕೂರು

         ಗುರುವಾರ ಆಯುಧಪೂಜೆ, ಶುಕ್ರವಾರ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಎರಡು ದಿನಗಳ ಸರ್ಕಾರಿ ರಜೆ ಇರುವ ಕಾರಣ ತುಮಕೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಬುಧವಾರವೇ ಹಬ್ಬದ ಸಂಭ್ರಮ ಕಂಡುಬಂದಿತು.

        ಅಧಿಕಾರಿ ಸಿಬ್ಬಂದಿಯಲ್ಲಿ ಎರಡು ದಿನಗಳ ಸಾರ್ವತ್ರಿಕ ರಜೆಯ ನಲಿವು ವ್ಯಕ್ತವಾದರೆ, ಇತ್ತ ಹಬ್ಬಗಳ ಹಿನ್ನೆಲೆಯಲ್ಲಿ ಪಾಲಿಕೆ ಕಚೇರಿಗೆ ಬರುವ ಸಾರ್ವಜನಿಕರ ಸಂಖ್ಯೆ ತೀರಾ ವಿರಳವಾಗಿತ್ತು. ಹೀಗಾಗಿ ಬುಧವಾರವೇ ಒಂದು ರೀತಿಯ ರಜೆಯ ವಾತಾವರಣ ಪಾಲಿಕೆ ಕಚೇರಿಯನ್ನು ಆವರಿಸಿತ್ತು.

        ಪಾಲಿಕೆ ಕಚೇರಿಯ ವಿವಿಧ ವಿಭಾಗಗಳಲ್ಲಿ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಬುಧವಾರ ತಮ್ಮ ವಿಭಾಗಗಳಲ್ಲಿ ಪೂಜೆ ನೆರವೇರಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಹಬ್ಬದ ಕಾರಣಕ್ಕಾಗಿ ವಿವಿಧ ವಿಭಾಗಗಳ ಕಚೇರಿಗಳಲ್ಲಿ ಹೂವಿನ ಅಲಂಕಾರ ಮಾಡಲಾಗಿತ್ತು. ಹಿರಿಯ ಅಧಿಕಾರಿಗಳ ಸಮ್ಮುಖ ಪೂಜೆ ನೆರವೇರಿಸಲಾಯಿತು. ಕೆಲ ವಿಭಾಗಗಳಲ್ಲಿ ಆಯುಕ್ತ ಎಲ್.ಮಂಜುನಾಥ ಸ್ವಾಮಿ ಅವರ ಆಗಮನಕ್ಕಾಗಿ ಕಾಯುತ್ತಿದ್ದರು.

         ಪಾಲಿಕೆಯಲ್ಲಿರುವ ವಿವಿಧ ವಾಹನಗಳನ್ನು ಇಂದೇ ಸ್ವಚ್ಛಗೊಳಿಸಲಾಗಿದ್ದು, ಎಲ್ಲವನ್ನೂ ಒಂದೆಡೆ ನಿಲ್ಲಿಸಲಾಗಿತ್ತು. ಸ್ವಚ್ಚತಾ ವಿಭಾಗದ ವಾಹನಗಳಿಗೆ ಗುರುವಾರ ಬೆಳಗ್ಗೆ ಪೂಜೆ ಸಲ್ಲಿಸಲಾಗುವುದು ಎಂದು ಅಲ್ಲಿನ ಸಿಬ್ಬಂದಿ ಹೇಳಿದರು. ಶನಿವಾರ ರಜೆ ಬೇಕೆಂದು ಕೆಲವು ಸಿಬ್ಬಂದಿ ವರ್ಗದವರು ಅರ್ಜಿ ಸಲ್ಲಿಸಿದ್ದರಾದರೂ, ಅವರಿಗೆ ರಜೆ ಮಂಜೂರಾಗಿಲ್ಲ ಎಂದು ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link