ಹೊಸಪೇಟೆ :
ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಉಚಿತ ಹೃದಯ ಹಾಗು ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ಸ್ಥಳೀಯ ವಿಜಯನಗರ ಯುವಕರ ಬಳಗ, ಸಂಗೊಳ್ಳಿ ರಾಯಣ್ಣ ಸಾಮಾಜಿಕ ಶೈಕ್ಷಣಿಕ ಸೇವಾ ಟ್ರಸ್ಟ್, ಎಸ್.ಎಸ್.ನಾರಾಯಣ ಹೃದಯಾಲಯ ದಾವಣಗೆರೆ, ಹಾಗು ಎಲ್.ವಿ.ಪ್ರಸಾದ್ ಕಣ್ಣಿನ ಆಸ್ಪತ್ರೆ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಉಚಿತ ಹೃದಯ ಹಾಗು ಕಣ್ಣಿನ ತಪಾಸಣಾ ಶಿಬಿರವನ್ನು ಶಾಸಕ ಆನಂದಸಿಂಗ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಾನು ಶಾಸಕನಾಗುವ ಮುನ್ನವೇ ಗ್ರಾಮಾಂತರ ಹಾಗು ನಗರ ಪ್ರದೇಶಗಳಲ್ಲಿ ಬಡ ಜನರಿಗೆ ಹೃದಯ, ಕಣ್ಣು ಸೇರಿದಂತೆ ಇತರೆ ದುಬಾರಿ ವೆಚ್ಚದ ಕಾಯಿಲೆಗಳ ಶಸ್ತ್ರಚಿಕಿತ್ಸೆಗೆ ನೆರವು ನೀಡುವ ಕೆಲಸ ಮಾಡುತ್ತಾ ಇದ್ದೆ. ಆದರೆ ಈಗ ಹಳ್ಳಿಗಳಲ್ಲಿ ವಿಜಯನಗರ ಯುವಕರ ಬಳಗವು ಇಂಥ ಕಾರ್ಯಕ್ರಮ ಆಯೋಜಿಸಿರುವುದು ನನಗೆ ಹಳೆಯದನ್ನು ನೆನಪಿಸಿದಂಥಹ ಖುಷಿ ಕೊಟ್ಟಿದೆ. ಹೀಗಾಗಿ ಇಂಥ ಯಾವುದೇ ಸಾಮಾಜಿಕ ಸೇವೆ ಮಾಡುವ ಸಂಘಟನೆಗಳಿಗೆ ಸದಾ ನನ್ನ ಬೆಂಬಲ ಇರುತ್ತದೆ ಎಂದರು.
ಎಸ್.ಎಸ್.ನಾರಾಯಣ ಹೃದಯಾಲಯದ ಡಾ.ಗುರುರಾಜ ಮಾತನಾಡಿ, ತಲೆ ಸುತ್ತುವುದು, ವಾಂತಿಯಾಗುವುದು, ಬೆವರು ಹಾಗು ಸೆಕೆಯಾಗುವುದು, ಎದೆ ಚುಚ್ಚುವುದು ಇವನ್ನೆಲ್ಲ ನಾವು ನಿರ್ಲಕ್ಷ್ಯ ಮಾಡಿ ಯಾವುದೋ ಒಂದು ಪೇನ್ ಕಿಲ್ಲರ್ ಮಾತ್ರೆ ತಗೊಂಡು ಸುಮ್ಮನಾಗಿ ಬಿಡುತ್ತೇವೆ. ಆದರೆ ಇವೆಲ್ಲ ಹೃದಯ ಸಂಬಂಧಿ ಖಾಯಿಲೆಯ ಲಕ್ಷಣಗಳಿರಬಹುದು. ಅದಕ್ಕಾಗಿ ನಾವು ಆಗಾಗ ತಪಾಸಣೆ ಮಾಡಿಸುತ್ತಿರಬೇಕು ಎಂದರು.
ಬಡ ಜನರು ಈ ರೀತಿಯ ಉಚಿತ ಹೃದಯ ತಪಾಸಣಾ ಶಿಬಿರಗಳು ನಡೆಯುವ ಸ್ಥಳಗಳಲ್ಲಿ ತಪಾಸಣೆ ಮಾಡಿಸಿಕೊಂಡರೆ ಹೃದಯ ಸಂಬಂಧಿ ಖಾಯಿಲೆಯ ಬಗ್ಗೆ ನಮಗೆ ಗೊತ್ತಾಗುತ್ತದೆ. ಮುಂಚಿತವಾಗಿ ರೋಗಕ್ಕೆ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ಇದನ್ನೇ ಆಸ್ಪತ್ರೆಗಳಲ್ಲಿ ಇಸಿಜಿ, ಇಕೊ 2ಡಿ ಪರೀಕ್ಷೆ ಮಾಡಿಸಿದರೆ ರೂ.2500ರಿಂದ ರೂ.3000 ಸಾವಿರ ಖರ್ಚು ಬರುತ್ತದೆ. ಹೀಗಾಗಿ ಸಾರ್ವಜನಿಕರು ಇಂಥ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಶಿಬಿರದಲ್ಲಿ 135 ಜನರಿಗೆ ಕಣ್ಣಿನ ತಪಾಸಣೆ ಹಾಗು 172 ಜನರಿಗೆ ಹೃದಯ ತಪಾಸಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಮಾಜಿ ಶಾಸಕ ರತನಸಿಂಗ್, ನಗರಸಭೆ ಅಧ್ಯಕ್ಷ ಗುಜ್ಜಲ ನಿಂಗಪ್ಪ, ಮಾಜಿ ಹುಡಾ ಅಧ್ಯಕ್ಷ ಆರ್.ಕೊಟ್ರೇಶ್, ಮುಖಂಡರಾದ ಧರ್ಮೇಂದ್ರಸಿಂಗ್, ಸಂದೀಪಸಿಂಗ್, ಬಿ.ಚಂದ್ರಶೇಖರ, ಡಿ.ಚಂದ್ರಶೇಖರ್, ಡಿ.ಚೆನ್ನಪ್ಪ, ಡಿ.ಕೆ.ಅಂಜಿನಪ್ಪ, ಗ್ರಾ.ಪಂ.ಅಧ್ಯಕ್ಷೆ ಶಾಲಿನಿ ಶಂಕರಗೌಡ, ತಾ.ಪಂ.ಸದಸ್ಯೆ ನಾಗವೇಣಿ ಬಸವರಾಜ, ಎಲ್.ಎಸ್.ಆನಂದ, ಕೆ.ರವಿಕುಮಾರ್, ವಿಜಯನಗರ ಯುವಕರ ಬಳಗದ ಅಧ್ಯಕ್ಷ ಸೋಮಶೇಖರ ನಾಯಕ, ಕಾರ್ಯದರ್ಶಿ ಪ್ರಶಾಂತಕುಮಾರ್, ಸಂಗೊಳ್ಳಿ ರಾಯಣ್ಣ ಶೈಕ್ಷಣಿಕ ಸೇವಾ ಟ್ರಸ್ಟ್ನ ಅಧ್ಯಕ್ಷ ಡಿ.ಪಂಪಾಪತಿ, ಡಿ.ರವಿಶಂಕರ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
