ಬೆಂಗಳೂರು
ಮಾನಸಿಕ ಖಿನ್ನತೆ, ಆರ್ಥಿಕ ಸಮಸ್ಯೆ ಮತ್ತಿತರರ ನೆಪಗಳನ್ನು ಒಡ್ಡಿ ಆತ್ಮಹತ್ಯೆಗೆ ಶರಣಾಗುವರಿಗೆ ಆಪ್ತಸಮಾಲೋಚನೆ ನೀಡುವ ಸಲುವಾಗಿ ‘ಮಿತ್ರಂ’ ಎಂಬ ಸ್ವಯಂ ಸೇವಾ ಸಂಸ್ಥೆ ಆತ್ಮಹತ್ಯೆಯಲ್ಲ, ಆತ್ಮವಿಶ್ವಾಸದ ಬದುಕು ಎಂಬ ಘೋಷಣೆಯಡಿ ನಗರದಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಿದೆ.
ಎಚ್ಎಸ್ಆರ್ ಬಡಾವಣೆಯ ಸ್ವಯಂ ಸೇವಾ ಸಂಸ್ಥೆಯ ಆವರಣದಲ್ಲಿರುವ ಈ ಕೇಂದ್ರಕ್ಕೆ ಖಿನ್ನತೆ ಹೊಂದಿರುವವರು ಕರೆ ಮಾಡಿ ಸಮಸ್ಯೆಯನ್ನು ಹೇಳಿಕೊಳ್ಳಬಹುದು. ನುರಿತ ಆಪ್ತ ಸಮಾಲೋಚಕರು ವ್ಯಕ್ತಿಯ ಸಮಸ್ಯೆಯನ್ನು ಆಲಿಸಿ, ಆತ್ಮಹತ್ಯೆ ಯೋಚನೆಯಿಂದ ದೂರ ತರುವ ಪ್ರಯತ್ನ ಮಾಡಲಿದ್ದಾರೆ.
ಸಹಾಯವಾಣಿ ಕೇಂದ್ರ ಉದ್ಘಾಟಿಸಿದ ಸಮರ್ಥನಂ ಸಂಸ್ಥೆಯ ಅಧ್ಯಕ್ಷ ಮಹಾಂತೇಶ್ ಜಿ.ಕೆ, ಆತ್ಮಹತ್ಯೆ ಒಂದು ಸಾಮಾಜಿಕ ಪಿಡುಗು. 2016ರಲ್ಲಿ ದೇಶದಲ್ಲಿ 2.3ಲಕ್ಷ ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಶ್ವದಲ್ಲಿ ಆತ್ಮಹತ್ಯೆ ಪ್ರಮಾಣ ಶೇ. 11.6ರಷ್ಟಿದ್ದರೆ, ಭಾರತದಲ್ಲಿ ಶೇ. 10.3ರಷ್ಟಿದೆ. ಇದರಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ ಎಂದರು.
ಜಾಗತಿಕವಾಗಿ ಈ ಸಂಖ್ಯೆ ವಾರ್ಷಿಕ 8 ಲಕ್ಷ ದಾಟಿದ್ದು, ಪ್ರತಿ 40 ಸೆಕೆಂಡ್ ಗೆ ಒಬ್ಬರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇವರಲ್ಲಿ 35 ವರ್ಷ ವಯಸ್ಸಿನ ಒಳಗಿನವರು ಹೆಚ್ಚು. ಈ ಬಗ್ಗೆ ವಿಶ್ವಸಂಸ್ಥೆ ಅತೀವ ಕಳವಳ ವ್ಯಕ್ತಪಡಿಸಿದೆ. ಆದ್ದರಿಂದಲೇ ಸೆಪ್ಟಂಬರ್ 10ನ್ನು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಎಂದು ಘೋಷಿಸಿ ಆತ್ಮಹತ್ಯೆಗೆ ನಿರ್ಧರಿಸಿದವರ ನೆರವಿಗೆ ಧಾವಿಸಿ ಜಾಗೃತಿಯ ಮೂಲಕ ಅಮೂಲ್ಯವಾದ ಜೀವವನ್ನು ಉಳಿಸಲು ಅದು ಕರೆ ನೀಡಿದೆ ಎಂದರು.
ಮಿತ್ರಂ ಫೌಂಡೇಶನ್ ಮುಖ್ಯಸ್ಥ ರಾಜೇಶ್ ಪಿಳೈ ಮಾತನಾಡಿ, ಕಾರಣ ಆತ್ಮಹತ್ಯೆಯು ಮಾನಸಿಕ ಖಾಯಿಲೆಯಲ್ಲ. ಅದನ್ನು ತಡೆಯಲು ಮನಃಶಾಸ್ತ್ರಜ್ಞರೇ ಬೇಕಿಲ್ಲ. ಅಂತಹವರ ಮನಸ್ಸನ್ನು ಅರಿತು, ಕಷ್ಟ, ನೋವನ್ನು ಸಮಾಧಾನಚಿತ್ತದಿಂದ ಆಲಿಸುವರ ಅಗತ್ಯವಿದೆ. ಆ ಕೆಲಸವನ್ನು ಈ ಕೇಂದ್ರ ಮಾಡಲಿದೆ ಎಂದರು. ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್ಎಸ್ಆರ್ ಸೆಕ್ಟರ್- 4,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








