ಸುಂಕದ ಕಟ್ಟೆ ಮಂಜುನಾಥ ಸ್ವಾಮಿ ದೇವಾಲಯದ ಹುಂಡಿಯ ಹಣ ಎಣಿಕೆ …!

ಹೊನ್ನಾಳಿ:

       ತಾಲೂಕಿನ ಮುಜರಾಯಿ ಇಲಾಖೆ ವ್ಯಾಪ್ತಿಯ “ಎ” ಶ್ರೇಣಿಯ ದೇವಸ್ಥಾನವಾದ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ, ಶ್ರೀ ನರಸಿಂಹ ಸ್ವಾಮಿ ದೇವಸ್ಥಾನದ ಹುಂಡಿಯನ್ನು ಮಂಗಳವಾರ ತೆರೆದು ಹಣವನ್ನು ಎಣಿಕೆ ಮಾಡಲಾಯಿತು. 2018ರ ಜುಲೈ ತಿಂಗಳಿನಿಂದ 2019ರ ಜನವರಿ ತಿಂಗಳವರೆಗೆ ಅಂದರೆ ಕೇವಲ ಏಳು ತಿಂಗಳ ಅವಧಿಯಲ್ಲಿ 30,16,091 ರೂ.ಗಳಷ್ಟು ಹಣ ಸಂಗ್ರಹವಾಗಿದೆ. ಹಣವನ್ನು ಹೊನ್ನಾಳಿಯ ಕೆನರಾ ಬ್ಯಾಂಕಿನಲ್ಲಿ ಜಮಾ ಮಾಡಲಾಯಿತು ಎಂದು ತಹಸೀಲ್ದಾರ್ ತುಷಾರ್ ಬಿ.ಹೊಸೂರ್ ತಿಳಿಸಿದರು. 

       ದೇವಸ್ಥಾನಕ್ಕೆ ಭಕ್ತರು ಸಲ್ಲಿಸಿದ ಕಾಣಿಕೆಯ ಹಣದಲ್ಲಿಯೇ 80 ಲಕ್ಷ ರೂ.ಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇನ್ನುಳಿದ ಹೆಚ್ಚುವರಿ ಕಾಮಗಾರಿ ಪ್ರಗತಿಯಲ್ಲಿದೆ. 49.95 ಲಕ್ಷ ರೂ.ಗಳ ವೆಚ್ಚದಲ್ಲಿ ದೇವಸ್ಥಾನದ ಗೋಪುರ ನಿರ್ಮಾಣ ಕಾರ್ಯದ ಮೊದಲ ಹಂತ ಪೂರ್ಣಗೊಂಡಿದೆ. ಉಳಿದ ಕಾಮಗಾರಿಯೂ ನಡೆಯಲಿದೆ ಎಂದು ಹೇಳಿದರು. 28 ಲಕ್ಷ ರೂ.ಗಳ ವೆಚ್ಚದಲ್ಲಿ ದೇವಸ್ಥಾನದ ಮೇಲ್ಛಾವಣಿ ಮತ್ತು ಭಕ್ತರು ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ಆಗಮಿಸಲು ಅಗತ್ಯವಾದ ಸ್ಟೀಲ್ ಪೈಪ್‍ಗಳ ಅಳವಡಿಕೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ ಎಂದರು.

       ಸಿಸಿ ಟಿವಿ ಕ್ಯಾಮರಾ ಅಳವಡಿಕೆ: ದೇವಸ್ಥಾನದ ಒಳಗಡೆ ಹಾಗೂ ಆವರಣದಲ್ಲಿ 1 ಲಕ್ಷ ರೂ.ಗಳ ವೆಚ್ಚದಲ್ಲಿ 8 ಸಿಸಿ ಟಿವಿ ಕ್ಯಾಮರಾ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ವಿವರಿಸಿದರು.

       ಗೋವಿನಕೋವಿ-2ನೇ ಹೋಬಳಿಯ ರಾಜಸ್ವ ನಿರೀಕ್ಷಕ ಜಯರಾಮ್‍ನಾಯ್ಕ, ಮುಜರಾಯಿ ವಿಷಯ ನಿರ್ವಾಹಕ ಮಂಜಪ್ಪ, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಇಲಾಖೆಯ ವಿವಿಧ ಸಿಬ್ಬಂದಿ, ಹೊನ್ನಾಳಿಯ ಕೆನರಾ ಬ್ಯಾಂಕ್ ಸಿಬ್ಬಂದಿ, ಶ್ರೀ ಮಂಜುನಾಥ ಸ್ವಾಮಿ, ಶ್ರೀ ನರಸಿಂಹ ಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಎಚ್. ನರಸಪ್ಪ, ಸದಸ್ಯರಾದ ಎಚ್.ಎ. ಶಿವಾನಂದಪ್ಪ, ಮೋಹನ್, ಪ್ರಧಾನ ಅರ್ಚಕರಾದ ಎಸ್. ರಾಜುಸ್ವಾಮಿ, ಮುಖಂಡ ಸುಂಕದಕಟ್ಟೆ ಬಸಪ್ಪ, ದೇವಸ್ಥಾನದ ರಾತ್ರಿ ಕಾವಲುಗಾರ ಎಸ್.ಎನ್. ಶ್ರೀಕಾಂತ್, ಸುಂಕದಕಟ್ಟೆ ಗ್ರಾಮದ ಮುಖಂಡರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link