ಚಳ್ಳಕೆರೆ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಹಣಕಾಸಿನ ವ್ಯವಹಾರವನ್ನು ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಪಡೆದು ನಡೆಸಬೇಕು ಎಂಬ ನಿಯಮವಿದೆ. ಒಬ್ಬ ವ್ಯಕ್ತಿ ಪ್ರತಿದಿನ ಕೇವಲ 50 ಸಾವಿರದೊಳಗೆ ಮಾತ್ರ ನಗದು ಹಣವನ್ನು ಇಟ್ಟುಕೊಳ್ಳಬಹುದಾಗಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕಂಪನಿಯ ವ್ಯವಸ್ಥಾಪಕ 8.50,250 ಲಕ್ಷ ರೂಗಳನ್ನು ಸಾಗಾಟ ಮಾಡುವ ಸಂದರ್ಭದಲ್ಲಿ ತನಿಖಾ ಠಾಣೆಯಲ್ಲಿ ಸಿಕ್ಕಿ ಬಿದಿದ್ದು, ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಆಂಧ್ರ ಪ್ರದೇಶದ ಹೈದರಬಾದ್ನಲ್ಲಿರುವ ದಿಲೀಫ್ ಬಿಲ್ಡರ್ಸ್ ಕಂಪನಿ ವ್ಯವಸ್ಥಾಪಕ ಅಮರನಾಥ(44) ಮಂಗಳವಾರ ಮಧ್ಯಾಹ್ನ ಚಿತ್ರದುರ್ಗದ ಪಂಜಾಬ್ ನ್ಯಾಷಿನಲ್ ಬ್ಯಾಂಕ್ನಿಂದ ಚೆಕ್ ಮೂಲಕ ಸದರಿ ಹಣವನ್ನು ನಗದಾಗಿ ಡ್ರಾ ಮಾಡಿಕೊಂಡು ತಳಕು ಬಳಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಪಟ್ಟಂತೆ ಈ ಹಣವನ್ನು ಪಾವತಿಸಬೇಕಿದ್ದು, ಬುಲೋರೋ ವಾಹನ (ಕೆ.ಎ.16-ಎಂ-6146) ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಚಿತ್ರದುರ್ಗ ರಸ್ತೆಯ ಬೆಸ್ಕಾಂ ಕಚೇರಿ ಬಳಿ ಇರುವ ತಪಾಸಣಾ ಕೇಂದ್ರದಲ್ಲಿ ವಾಹನ ತಪಾಸಣೆ ನಡೆಸಿದಾಗ ಹಣ ಇರುವುದು ಖಾತ್ರಿಯಾದ ನಂತರ ತನಿಖಾಧಿಕಾರಿ ಕರಿಬಸಪ್ಪ ಕೂಡಲೇ ವಾಹನ ತಪಾಸಣೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ಧಾರೆ.
ಸುದ್ದಿ ತಿಳಿದ ಕೂಡಲೇ ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಪಿಎಸ್ಐ ಕೆ.ಸತೀಶ್ನಾಯ್ಕ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದಾಗ ನಗದಾಗಿ ಹಣ ತೆಗೆದುಕೊಂಡು ಹೋಗಲು ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಮತ್ತು ಹಣವನ್ನು ಸಾಗಾಟ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಎಲ್ಲಾ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ವ್ಯವಸ್ಥಾಪಕ ಅಮರನಾಥನನ್ನು ಪ್ರಶ್ನಿಸಿದಾಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದ ಹಣ ಇದಾಗಿದ್ದು, ಚೆಕ್ ಮೂಲಕವೇ ಹಣವನ್ನು ಪಡೆಯಲಾಗಿದೆ. ಈ ಬಗ್ಗೆ ಎಲ್ಲಾ ದಾಖಲಾತಿಗಳು ಇವೆ ಎಂದು ತಿಳಿಸಿದ್ದಾನೆ. ಆದರೂ ಸಹ ಪೊಲೀಸರು ಚುನಾವಣಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಸೂಕ್ತ ದಾಖಲಾತಿ ನೀಡಿದ ನಂತರವಷ್ಟೇ ಹಣ ಬಿಡುಗಡೆ ಮಾಡಲು ಸಾಧ್ಯವೆಂದಿದ್ಧಾರೆ. ಈ ಸಂದರ್ಭದಲ್ಲಿ ಮುಖ್ಯ ಪೇದೆ ತಿಪ್ಪೇಸ್ವಾಮಿ, ಪೇದೆ ಎನ್.ಮಾರಣ್ಣ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
