ಚಿತ್ರದುರ್ಗ :
ಮಕ್ಕಳನ್ನು ಅಪ್ರಾಪ್ತ ವಯಸ್ಸಿನಲ್ಲೇ ವಿವಾಹದ ಬಂಧನಕ್ಕೆ ದೂಡುವ ಪೋಷಕರಿಗೆ ಕಡ್ಡಾಯವಾಗಿ ಶಿಕ್ಷೆ ಆಗಬೇಕು. ಕೇವಲ ಅರಿವು ಮೂಡಿಸುವುದರಿಂದ ಸಮಾಜ ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಮೂಲಕ ಜಿಲ್ಲೆಯಲ್ಲಿ ಆಗುತ್ತಿರುವ ಬಾಲ್ಯವಿವಾಹ ತಡೆಯಲು ಮುಂದಾಗಿ ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮದುವೆಯಾಗಲು ಹೆಣ್ಣಿಗೆ 18 ಹಾಗೂ ಗಂಡಿಗೆ 21 ವರ್ಷ ವಯಸ್ಸು ಆಗಿರಲೇಬೇಕು. ಇದನ್ನು ಉಲ್ಲಂಘಿಸಿ ನಡೆಯುವ ಯಾವುದೇ ವಿವಾಹ ಕಾನೂನಿನ ಪ್ರಕಾರ ಸಿಂಧುವಲ್ಲ. ಬಾಲ್ಯವಿವಾಹ ತಡೆಯಲು ಮೊದಲು ಜನರಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆಯ ಬಗ್ಗೆ ಅರಿವು ಮೂಡಿಸಬೇಕು. ಪ್ರತಿಯೊಂದು ಹಳ್ಳಿಗೂ ತೆರಳಿ 18 ವರ್ಷದೊಳಗಿನ ಮಕ್ಕಳಿಗೆ ವಿವಾಹ ಮಾಡುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮನದಟ್ಟು ಮಾಡಿಕೊಡಬೇಕು ಎಂದರು
ಸಾರ್ವಜನಿಕ ಶಿಕ್ಷಣ ಇಲಾಖೆಯು ಇದಕ್ಕೆ ಕೈ ಜೋಡಿಸಬೇಕು. ಎಲ್ಲಾ ಪ್ರೌಢಶಾಲೆಗಳಲ್ಲಿ ಬಾಲ್ಯವಿವಾಹದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಬಾಲ್ಯವಿವಾಹಕ್ಕೆ ಒಳಗಾದವರಿಗೆ ಹಾಗೂ ಮಾಡಿಸಿದವರಿಗೆ ಇರುವ ಶಿಕ್ಷೆ ಬಗ್ಗೆ ಅರಿವು ಮೂಡಿಸುವುದರ ಮೂಲಕ ಮಕ್ಕಳು ಬಾಲ್ಯವಿವಾಹದ ವಿರುದ್ಧ ಧ್ವನಿ ಎತ್ತುವಂತೆ ಮಾಡಬೇಕು. ಬಾಲ್ಯವಿವಾಹ, ಶಾಲೆ ಬಿಟ್ಟ ಮಕ್ಕಳು, ಅಪೌಷ್ಠಿಕತೆ, ವಲಸೆ ಹೋಗಿರುವ ಕುಟುಂಬದ ಬಗ್ಗೆ ಪ್ರತಿ 6 ತಿಂಗಳಿಗೊಮ್ಮೆ ವರದಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ನೀಡಬೇಕು.
ಬಾಲ್ಯವಿವಾಹಕ್ಕೆ ಒಳಪಟ್ಟವರ ಕುಟುಂಬದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಿ, 10 ನೇ ತರಗತಿ ನಂತರ ಪ್ರಥಮ ಪಿ.ಯು ಸೇರಿದ ಮಕ್ಕಳು ಹಾಗೂ ಕಾಲೇಜಿಗೆ ಹೋಗದೇ ಇರುವ ಮಕ್ಕಳ ಮಾಹಿತಿ ಸಂಗ್ರಹಿಸಿ. 10 ನೇ ತರಗತಿ ನಂತರ ಮನೆಯಲ್ಲೇ ಉಳಿದ ಬಾಲಕಿಯರ ಆರ್ಥಿಕ ಅಭಿವೃದ್ಧಿಗಾಗಿ ಕೌಶಲ್ಯಯುಕ್ತ ತರಬೇತಿಗಳನ್ನು ನೀಡುವತ್ತ ಗಮನಹರಿಸಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಬಾಲ್ಯವಿವಾಹದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪಾತ್ರ ಬಹುಮುಖ್ಯವಾದುದು. ಎಲ್ಲಾ ಶಾಲೆಗಳಲ್ಲಿ ಪ್ರತಿದಿನ ಪ್ರಾರ್ಥನೆ ನಂತರ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳು ಬಾಲ್ಯವಿವಾಹ ತಡೆಗಟ್ಟುವಂತೆ ಪ್ರಚೋದಿಸಬೇಕು.
ಈ ಕಾರ್ಯ ಮಾಡದೇ ಇದ್ದರೇ, ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮೋಹನಕುಮಾರಿ ಮಾತನಾಡಿ, ಹೆಚ್.ಐ.ವಿ ಸೋಂಕಿತ ಅನಾಥ ಹಾಗೂ ಸಂಕಷ್ಟ ಪರಿಸ್ಥಿಯಲ್ಲಿರುವ ಮಕ್ಕಳ ಪೋಷಣೆ, ರಕ್ಷಣೆ ಮತ್ತು ಭದ್ರತೆ, ಪೌಷ್ಠಿಕ ಆಹಾರ, ಶಿಕ್ಷಣ ಹಾಗೂ ಮಕ್ಕಳ ದೈನಂದಿನ ವೆಚ್ಚಕ್ಕಾಗಿ ವಿಶೇಷ ಪಾಲನಾ ಯೋಜನೆಯಡಿ ಪ್ರತಿ ತಿಂಗಳು 1000 ರೂ. ನಂತೆ ಮೂರು ತಿಂಗಳಿಗೊಮ್ಮೆ ಅನುದಾನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಪ್ರಸ್ತುತ 460 ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಸಭೆಗೆ ತಿಳಿಸಿದರು.
ಪೋಕ್ಸೋ ಪ್ರಕರಣದಡಿ ದಾಖಲಾದ ಪ್ರಕರಣಗಳನ್ನು ತ್ವರಿತ ಇತ್ಯರ್ಥಗೊಳಿಸುವ ಸಂಬಂಧ ಹಾಗೂ ಮಕ್ಕಳ ಸ್ನೇಹಿ ನ್ಯಾಯಾಲಯ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಜಿಲ್ಲೆಯಲ್ಲಿ 26 ಪ್ರಕರಣಗಳು ದಾಖಲಾಗಿವೆ. 02 ಪ್ರಕರಣಗಳಿಗೆ ಶಿಕ್ಷೆ ವಿಧಿಸಿದ್ದು, 15 ಪ್ರಕರಣಗಳು ತನಿಖೆ ಹಂತದಲ್ಲಿವೆ. ಕಾನೂನಿನೊಡನೆ ಸಂಘರ್ಷಕ್ಕೆ ಒಳಪಟ್ಟ ಹಾಗೂ ರಕ್ಷಣೆ ಮತ್ತು ಪೋಷಣೆ ಅಗತ್ಯವಿರುವ ಜಿಲ್ಲೆಯ 07 ಮಕ್ಕಳಿಗೆ ಉಚಿತ ವಸತಿ, ಊಟ, ಬಟ್ಟೆ, ಶಿಕ್ಷಣ, ಕೌಶಲ್ಯಾಭಿವೃದ್ಧಿ ತರಬೇತಿ, ವೈದ್ಯಕೀಯ ನೆರವು, ಮನೋರಂಜನೆ, ಸಲಹಾ ಸೇವೆ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
6 ರಿಂದ 15 ವರ್ಷದ ಒಳಗಿನ ಮಕ್ಕಳ ಕಲ್ಯಾಣ ಸಮಿತಿ ಮಸೂದೆ ರಕ್ಷಣೆ ಮತ್ತು ಪೋಷಣೆ ಕೋರಿ ಬಂದ ಅನಾಥ, ನಿರ್ಗತಿಕ, ಏಕಪೋಷಕ ಮಕ್ಕಳು ಸೇರಿದಂತೆ ಒಟ್ಟು 59 ಜನ ಮಕ್ಕಳಿಗೆ ಉಚಿತ ಸೇವಾ ಸೌಲಭ್ಯ ನೀಡಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮಾಹಿತಿ ನೀಡಿದರು.
6 ವರ್ಷದೊಳಗಿನ ನಿರ್ಲಕ್ಷ್ಯಕ್ಕೊಳಗಾದ ಅನಾಥ ಮಕ್ಕಳಿಗೆ ಕುಟುಂಬದ ವಾತಾವರಣ ಕಲ್ಪಿಸಿ ಅವರಿಗೆ ಪ್ರೀತಿ ವಾತ್ಸಲ್ಯ, ಪೋಷಣೆ ಮತ್ತು ರಕ್ಷಣೆಯನ್ನು ಒದಗಿಸಲು ನಗರದ ಮುರುಘಾರಾಜೇಂದ್ರ ಬೃಹನ್ಮಠದಲ್ಲಿ ಮಡಿಲು ವಿಶೇಷ ದತ್ತು ಕೇಂದ್ರವನ್ನು ಸ್ಥಾಪಿಸಿದೆ. ಇಲ್ಲಿ ಒಟ್ಟು ದಾಖಲಾದ ಮಕ್ಕಳು 11. ದತ್ತು ಪ್ರಕ್ರಿಯೆಗೆ ಒಳಪಟ್ಟ ಮಕ್ಕಳು 7 ಉಳಿದ 4 ಮಕ್ಕಳು ರಕ್ಷಣೆಯಲ್ಲಿವೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಡಿಡಿಪಿಐ ರವಿಶಂಕರ ರೆಡ್ಡಿ, ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೆಂಕಟಲಕ್ಷ್ಮೀ, ಮಹಿಳಾ ಅಭಿವೃದ್ಧಿ ನಿಗಮ ನಿರೀಕ್ಷಕಿ ಸುವರ್ಣಮ್ಮ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
