ಬೆಂಗಳೂರು:
ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಅವರು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಅವರು ಸಜ್ಜನ ಸುಸಂಸ್ಕೃತ ರಾಜಕಾರಣಿ. ರಾಷ್ಟ್ರ ರಾಜಕಾರಣಕ್ಕೆ ಇದು ದೊಡ್ಡ ನಷ್ಟ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
ಅನಂತ್ ಕುಮಾರ್ ಪಾರ್ಥೀವ ಶರೀರಕ್ಕೆ ನಮನ ಸಲ್ಲಿಸಿ ಮಾತನಾಡಿದ ಅವರು, ಚಿಕ್ಕಂದಿನಲ್ಲೇ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡು ರಾಷ್ಟ್ರಮಟ್ಟಕ್ಕೆ ಹೋಗಿದ್ದರು. ಎಬಿವಿಪಿಯಿಂದ ಆರಂಭವಾದ ಸಾರ್ವಜನಿಕ ಜೀವನ ಅವರನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋಗಿತ್ತು. ಉತ್ತಮ ಆಡಳಿತಗಾರ ಕರ್ನಾಟಕದ ಬೆಳವಣಿಗೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಸ್ಮರಿಸಿದರು.
ಕೇಂದ್ರದಲ್ಲಿ ಮಂತ್ರಿಯಾದಾಗೆಲ್ಲಾ ರಾಜ್ಯದ ಸಮಸ್ಯೆಗೆ ಸಮರ್ಥವಾಗಿ ಸ್ಪಂದಿಸುತ್ತಿದ್ದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೊಂಡಿಯಂತಿದ್ದರು. ಬಹಳ ಚಿಕ್ಕ ವಯಸ್ಸಿಗೆ ಅವರು ನಮ್ಮನ್ನಗಲಿದ್ದಾರೆ. ನಮ್ಮ ಅವರ ಸ್ನೇಹ ಚೆನ್ನಾಗಿತ್ತು. ಪಕ್ಷ ರಾಜಕಾರಣ ಬೇರೆ ಮನುಷ್ಯ ಸಂಬಂಧಗಳೇ ಬೇರೆ, ರಾಜ್ಯ ರಾಷ್ಟ್ರಕ್ಕೆ ಅವರ ಅಗಲಿಕೆಯಿಂದ ತುಂಬಾ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿಯನ್ನ ನೀಡಲಿ ಎಂದು ಬೇಡಿಕೊಳ್ತೇನೆ ಎಂದರು.
ಇನ್ನು ಕೇಂದ್ರ ಸಚಿವರಾದ ಅನಂತಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಮಾಜಿ ಸಿದ್ದರಾಮಯ್ಯ ಅವರ ಇಂದಿನ ಬೆಳಗಾವಿ ಪ್ರವಾಸ ರದ್ದಾಗಿದೆ. ಅವರು ಅನಂತಕುಮಾರ್ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
