ಹೊಸದುರ್ಗ:
ಕಟ್ಟಡ ಶಿಥಿಲಾವಸ್ಥೆ ತಲುಪಿರುವ ತಾಲ್ಲೂಕಿನ ಬಾಗೂರು ಗ್ರಾಮದಲ್ಲಿ ಗ್ರಾ.ಪಂ.ಗ್ರಂಥಾಲಯ ಯಾವುದೇ ಸಂದರ್ಭದಲ್ಲಿ ಕುಸಿಯುವ ಭೀತಿ ಎದುರಾಗಿದೆ.
ಜಿಲ್ಲಾ ಪಂಚಾಯಿತಿ ಕೇತ್ರ, ಗ್ರಾಮ ಪಂಚಾಯಿತಿ ಕೇಂದ್ರ ಜತೆಗೆ ಹಲವು ಗ್ರಾಮಗಳ ಸಂಪರ್ಕ ಕೊಂಡಿಯೂ ಆಗಿರುವ ಬಾಗೂರು ಗ್ರಾಮದಲ್ಲಿ ಗ್ರಾ.ಪಂ ಕಚೇರಿಗೆ ಹೊಂದಿಕೊಂಡಂತಿರುವ ಕಟ್ಟಡದಲ್ಲಿ ದಶಕಗಳಿಂದಲೂ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ. ಆದರೆ ನಿರ್ವಹಣೆ ಕೊರತೆ ಮತ್ತು ಕಳಪೆ ಕಾಮಾಗಾರಿಯಿಂದಾಗಿ ಈ ಕಟ್ಟಡ ಕುಸಿದು ಬೀಳುವ ಹಂತಕ್ಕೆ ತಲುಪಿದೆ.
ಆತಂಕದಲ್ಲಿ ಓದುಗರು: ಗ್ರಂಥಾಲಯದಲ್ಲಿ ಇಲಾಖೆಯಿಂದ ಪೂರೈಸಿರುವ ನಾಡಿನ ಹೆಸರಾಂತ ಸಾಹಿತಿಗಳ ಕಥೆ, ಕಾದಂಬರಿ, ಕವನ ಸಂಕಲನ ಒಳಗೊಂಡಂತೆ ಜ್ಞಾನದಾಹ ನೀಗಿಸಬಹುದಾದ ಅಮೂಲ್ಯ ಪುಸ್ತಕಗಳ ಸಂಗ್ರಹವಿದೆ. ಅಲ್ಲದೇ ದಿನ ಪತ್ರಿಕೆಗಳು ಮತ್ತು ವೃತ್ತ ಪತ್ರಿಕೆಗಳ ಸರಬರಾಜು ಇದೆ. ಈ ಹಿನ್ನೆಲೆಯಲ್ಲಿ ಓದುಗರ ಸಂಖ್ಯೆ ಜಾಸ್ತಿಯಾಗಬೇಕಾಗಿತ್ತು. ಆದರೆ ಕಟ್ಟಣ ಶಿಥಿಲಗೊಂಡಿರುವ ಕಾರಣ ಅಪಾಯದ ಸೂಚನೆ ಅರಿತು ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ.
ಗ್ರಾ.ಪಂ ನಿಂದ ಸ್ಪಂದನೆ ಇಲ್ಲ: ಗ್ರಾ.ಪಂ ಕಚೇರಿ ಪಕ್ಕದಲ್ಲೇ ಗ್ರಂಥಾಲಯ ಕಟ್ಟಡವಿದ್ದು, ಸುಮಾರು ಬದಲಿ ಕೊಠಡಿ ಕೊಡಿಸುವಂತೆ ಅಥವಾ ಸೀಳು ಬಿಟ್ಟಿರುವ ಗೋಡೆಯನ್ನು ಸರಿಪಡಿಸುವಂತೆ ಹಲವು ಭಾರಿ ಗ್ರಾಮಸ್ಥರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅನುದಾನ ಯಾವುದೇ ಬಂದಿರುವುದಿಲ್ಲ ನಾವೇನು ಮಾಡಲಾಗದು ಎಂದು ಗ್ರಾ.ಪಂ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ತಾ.ಪಂ ಸದಸ್ಯರು ಗ್ರಾಮದವರಾಗಿದ್ದರೂ ಮುತುವರ್ಜಿ ವಹಿಸುತ್ತಿಲ್ಲ. ಆದರೂ ಯಾರು ಗಮನ ನೀಡುತ್ತಿಲ್ಲ ಎಂದು ಓದುಗರು ದೂರಿದ್ದಾರೆ.
ಬಾಗೂರು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಖಾಸಗಿ ಪ್ರೌಢಶಾಲೆ ಇದ್ದು ಸರ್ಕಾರಿ ನೌಕರರು, ವಿದ್ಯಾವಂತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಓದುವ ಹವ್ಯಾಸ ಬೆಳೆಸಬೇಕೆಂಬ ಸದುದ್ದೇಶದಿಂದ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯಕ್ಕೆ ವ್ಯವಸ್ಥಿತ ರೀತಿಯಲ್ಲಿರುವ ಒಂದು ಕೊಠಡಿ ಒದಗಿಸಬೇಕಾಗಿದೆ. ಆದರೆ ಈ ಬಗ್ಗೆ ಸಂಬಂಧಪಟ್ಟವರು ಕಾಳಜಿ ವಹಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ ಆದ್ದರಿಂದ ಇನ್ನಾದರೂ ಸಂಬಂದಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
