ಹರಪನಹಳ್ಳಿ:
ಪಟ್ಟಣ ಪುರಸಭೆ ಪ್ರತಿಷ್ಠಿತ ವಾರ್ಡ್ಗಳಲ್ಲಿ ಒಂದಾದ 27ನೇ ವಾರ್ಡ್ನಲ್ಲಿ ಮುಸ್ಲಿಂ ಜನಾಂಗದವರೇ ಅಧಿಕವಾಗಿದ್ದರೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಪಕ್ಷಕ್ಕೆ ಇದ್ದ ಕೋಮುವಾದಿ ಪಟ್ಟವನ್ನು ಅಳಿಸಿ ಹಾಕಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.
ಪಟ್ಟಣದ ಗಾಜಿಕೇರಿಯಲ್ಲಿ ಶನಿವಾರ ಮತದಾರರಿಗೆ ಬಿಜೆಪಿ ಪಕ್ಷ ಹಮ್ಮಿಕೊಂಡಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. `ವಾರ್ಡ್ನ ಮತದಾರರ ಮೇಲೆ ವಿರೋಧ ಪಕ್ಷದವರ ಭಯ, ಒತ್ತಡದಲ್ಲೂ ಬಿಜೆಪಿಗೆ ಮತ ಹಾಕಿದ ಮತದಾರರಿಗೆ ಅಭಾರಿಯಾಗಿದ್ದೇನೆ. ಈ ರೀತಿ ಭಯಭೀತಿಯ ವಾತಾವರಣ ಸೃಷ್ಠಿಸುವುದು ಸರಿಯಲ್ಲ. ವಾರ್ಡ್ ಸಮಸ್ಯೆಗಳ ಪರಿಹಾರಕ್ಕೆ ನೂತನ ಸದಸ್ಯ ರೊಕ್ಕಪ್ಪ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದರು.
ವಾರ್ಡ್ ನಿವಾಸಿಗಳಾದ ಕೊಡಪಾನ ರಿಪೇರಿ, ಕಲಾಯಿ ಮಾಡುವ ಕಾಯಕ ಜೀವಿಗಳಿಗೆ ಲೇಬರ್ ಇಲಾಖೆಯಿಂದ ಗುರುತಿನ ಚೀಟಿ ನೀಡಲು ಅಧಿಕಾರಿಗಳಿಗೆ ತಿಳಿಸುತ್ತೇನೆ. ಅಲ್ಲದೇ ಕಾರ್ಮಿಕ ಇಲಾಖೆಯಿಂದ ದೊರೆಯವ ಸಕಲ ಸೌಲಭ್ಯಗಳನ್ನು ಹಾಗೂ ಸಹಕಾರವನ್ನು ಕಲ್ಪಸಲು ಭರವಸೆ ನೀಡುತ್ತೇನೆ. ಪ್ರತಿ ಕಾರ್ಮಿಕರಿಗೆ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಲು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದರು.
ವಾರ್ಡ್ ನಿವಾಸಿಗಳ ಬೇಡಿಕೆಗಳಾದ 15 ವರ್ಷಗಳಿಂದ ನನೆಗುದಿಯಲ್ಲಿರುವ ಅಪೂರ್ಣ ಶಾದಿಮಹಲ್, ಪುರಾತನ ಬಾವಿಯ ಹೂಳು ತೆಗೆಸುವುದು, ಸಾಮೂಹಿಕ ಶೌಚಾಲಯ, ವೈಯಕ್ತಿಕ ಶೌಚಾಲಯ ಹಾಗೂ ಆಶ್ರಯ ಮನೆಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ನೂತನ ಸದಸ್ಯ ರೊಕ್ಕಪ್ಪ, ಪುರಸಭೆ ಮಾಜಿ ಅಧ್ಯಕ್ಷ ಮಹಬೂಬುಸಾಬ್ ಮಾತನಾಡಿದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಮುಖಂಡರಾದ ಎಂ.ಪಿ.ನಾಯ್ಕ್, ಆರ್.ಲೋಕೇಶ್, ಸಣ್ಣ ಹಾಲಪ್ಪ, ಎಲ್.ಮಂಜ್ಯನಾಯ್ಕ್, ಬಾಗಳಿ ಕೊಟ್ರೇಶಪ್ಪ, ಪದ್ಮಮ್ಮ, ಶಭೀರಸಾಬ್, ಸಿ.ಅಬ್ದುಲ್ ಸತ್ತಾರಸಾಬ್, ಬಿ.ಜಾನಬಾಷ್, ಮನ್ಸೂರು ಇದ್ದರು.