ಹಗರಿಬೊಮ್ಮನಹಳ್ಳಿ
ಸಂವಿಧಾನ ಉಳಿಸುವಲ್ಲಿ ವಕೀಲರ ಪಾತ್ರ ದೊಡ್ಡದಿದೆ ಎಂದು ಬಳ್ಳಾರಿ ಸಂಸದ ವಿ.ಎಸ್.ಉಗ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಪಟ್ಟಣದ ನ್ಯಾಯಾಲದ ಆವರಣದಲ್ಲಿ ತಾಲೂಕು ವಕೀಲರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸ್ವೀಕರಿಸಿ ಮಾತನಾಡಿದರು. ಸಂವಿಧಾನದ ಪ್ರಾಮುಖ್ಯತೆಯ ಬಗ್ಗೆ ತಿಳಿದುಕೊಂಡಿರುವ ವಕೀಲರು ಅದರ ಮಹತ್ವದ ಬಗ್ಗೆ ಸಾಮಾನ್ಯ ಜನರಿಗೆ ತಿಳಿಸಿಕೊಡಬೇಕು ಎಂದರು.
ವಕೀಲರ ಸಂಘದ ಭವನ ನಿರ್ಮಾಣಕ್ಕೆ ಸರ್ಕಾರದ 2ಕೋಟಿ ರೂ.ಗಳ ಅನುದಾನ ಬಂದಿದ್ದು, ಕಟ್ಟಡಕ್ಕೆ ನಿವೇಶನ ಪಡೆಯಲು ಪುರಸಭೆಯಿಂದ ಎಲ್ಲಾ ರೀತಿಯ ಪರವಾನಿಗೆಗೆ ದೊರೆತಿದ್ದು, ಇನ್ನು ಡಿ.ಸಿ. ಕಚೇರಿಯಿಂದ ಆದೇಶ ಬರಬೇಕಿದೆ ಎನ್ನುವ ವಕೀಲರ ಮನವಿಗೆ, ಆ ಕುರಿತು ಜಿಲ್ಲಾಧಿಕಾರಿಗಳಲ್ಲಿ ಚರ್ಚಿಸುವೆ ಎಂದರು. ಅಲ್ಲದೆ ವಕೀಲರ ಸಂಘಕ್ಕೆ ಸಂಸದರ ಅನುದಾನದಲ್ಲಿ 5ಲಕ್ಷ ರೂ.ಗಳನ್ನು ನೀಡಲಾಗುವುದು.
ಜಿಲ್ಲೆಯ ಎಲ್ಲಾ ವಕೀಲರ ಸಂಘಗಳ ಭವನ, ಕೋರ್ಟ್ ಆವರಣ ಅನೇಕ ಕಡೆ ಒಟ್ಟು 135ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಅನುದಾನ ನೀಡಲಾಗಿದೆ. ದೇಗುಲ ನಿರ್ಮಾಣ, ರಸ್ತೆ ಸೇರಿದಂತೆ ಅನೇಕ ಯೋಜನೆಗಳಿಗೆ 2.5ಕೋಟಿ ರೂ.ಗಳ ಅನುದಾನ ಬಿಡುಗಡೆಮಾಡಲಾಗಿದೆ ಎಂದರು.
ಸಂಸತ್ ಅಧಿವೇಶನದಲ್ಲಿ ಬಳ್ಳಾರಿ ಜಿಲ್ಲೆಯ ಸಮಸ್ಯೆಗಳ ಕುರಿತು ಧ್ವನಿ ಎತ್ತಿರುವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿವೇಶನಕ್ಕೆ ಬಾರದೆ ನಾಪತ್ತೆಯಾಗಿದು ಕಂಡುಬಂದಿತು ಎಂದರು. ಇದರಿಂದ ದೇಶದ ಜನತೆಯ ಬಗ್ಗೆ ಕಾಳಜಿ ಇಲ್ಲ ಎನ್ನುವುದು ಸ್ಪಷ್ಟವಾಗುತ್ತೆ. ರೈತರ ಬಗ್ಗೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ. ಮೇಲ್ವರ್ಗದ ಜನರಿಗೆ ಮೀಸಲಾತಿ ನೀಡಲಾಗಿದೆ ಎಂದು ಹೇಳುವ ಅವರು, ಕಾಂಗ್ರೆಸ್ನ ದೇವರಾಜ್ ಆಡಳಿತದಲ್ಲಿಯೇ ಜಾರಿಗೊಳ್ಳಿಸಲಾಗಿತ್ತು. ಜನತೆಯನ್ನು ತಪ್ಪುದಾರಿಗೆ ಎಳೆಯಲು ದೇಶದ ಅನೇಕ ವಿಚಾರಗಳ ಸದ್ಧುಮಾಡುವ ಬಿಜೆಪಿ ದೇಶದ ಅಭಿವೃದ್ಧಿ ನೆಪದಲ್ಲಿ ಓಟು ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಒಬಿಸಿ ಜಿಲ್ಲಾಧ್ಯಕ್ಷ ಸೊನ್ನದ ಮಹೇಶ, ವಕೀಲರ ಸಂಘದ ಅಧ್ಯಕ್ಷ ಜಾಣ ಶಿವಾನಂದ, ಮಾಜಿ ಅಧ್ಯಕ್ಷ ಬಿ.ವಿ.ಶಿವಯೋಗಿ, ಸತ್ಯನಾರಾಯಣ, ಸಿ.ಬಸವರಾಜ್, ಶಿವಕುಮಾರ್, ಆಂಜನೇಯ, ಅಕ್ಕಿ ಬಸವರಾಜ್, ಹಾಲೇಶ ಸೇರಿದಂತೆ ಅನೇಕರು ಇದ್ದರು.