ಹರಪನಹಳ್ಳಿ:
ತಾಲ್ಲೂಕಿನ ತೊಗರಿಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲ್ಮರಸಿಕರೆ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಪಟ್ಟಣದ ಅಬಕಾರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
`ಗ್ರಾಮದಲ್ಲಿ ಕಾನೂನು ಉಲ್ಲಂಘಿಸಿ ಮದ್ಯದಂಗಡಿ ತೆರೆಯಲು ಮುಂದಾಗಲಾಗಿದೆ. ಉದ್ದೇಶಿಸಿರುವ ಮದ್ಯದಂಗಡಿ ಹತ್ತಿರ ಸರ್ಕಾರಿ ಶಾಲೆ ಹಾಗೂ ಸುಮಾರು 10-15 ಮೀಟರ್ ಅಂತರದಲ್ಲಿ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನವಿದೆ. ಅಲ್ಲದೇ ಈ ಸ್ಥಳ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಜಮೀನಾಗಿದೆ’ ಎಂದು ಗ್ರಾಮಸ್ಥರು ಆರೋಪಿಸಿದರು.
ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಗ್ರಾಮಸ್ಥರ ಸಂಪೂರ್ಣ ವಿರೋಧವಿದೆ. ಮದ್ಯದಂಗಡಿ ತೆರೆಯುವುದರಿಂದ ಗ್ರಾಮದ ಶಾಂತಿ ಧಕ್ಕೆ ಆಗುವ ಸಾಧ್ಯತೆಯಿದೆ. ಕುಡಿತಕ್ಕೆ ಯುವಕರು, ಜನರು ದಾಸರಾಗಿ ಬಡ ಕುಡುಂಬಗಳು ಬೀದಿಗೆ ಬೀಳುತ್ತವೆ. ಆದರಿಂದ ಅಲ್ಮರಸೀಕೆರೆ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಮನವಿ ಸ್ವೀಕರಿಸಿದ ತಾಲ್ಲೂಕು ಅಬಕಾರಿ ಅಧೀಕ್ಷಕ ದಶರಥ ನಾಯ್ಕ ಮಾತನಾಡಿ, `ಗ್ರಾಮದಲ್ಲಿ ಮದ್ಯದಂಗಡಿ ಬೇಡ ಅಂತ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ವಿ.ಕೆಂಚಪ್ಪ, ಕೆ.ಮಹಾಲಿಂಗಪ್ಪ, ಜಗದೀಶ, ಟಿ.ಮಂಜುನಾಥ, ವೈ.ಮಂಜು, ರವೀಂದ್ರಪ್ಪ, ಜಯಪ್ಪ, ಎಂ.ನಾಗರಾಜ, ಚಂದ್ರಪ್ಪ, ಬಸಪ್ಪ, ಕೊಟ್ರೇಶ್, ಲಕ್ಕಪ್ಪ. ಮಲ್ಲಪ್ಪ, ಗೋಣೆಪ್ಪ, ಹೊನ್ನಪ್ಪ, ಪ್ರವೀಣ ಸೇರಿದಂತೆ ಸ್ವ ಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
