ಮಾಸಿಕ ಅನುಕಂಪ ಭತ್ಯೆ ಏರಿಕೆಗೆ ಸರ್ಕಾರ ನಿರ್ಧಾರ : ಆರ್.ವಿ.ದೇಶಪಾಂಡೆ

ಬೆಂಗಳೂರು

     ರಾಜ್ಯದ ಕೆಳದರ್ಜೆ ನೌಕರರಾದ ತೋಟಿ, ತಳವಾರ, ನೀರಗಂಟಿ, ವಾಲೀಕಾರ ಸನದಿ ಮತ್ತಿತರರಿಗೆ ಹಾಲಿ ಕೊಡುತ್ತಿರುವ ಮಾಸಿಕ 800 ರೂ.ಗಳ ಅನುಕಂಪ ಭತ್ಯೆಯನ್ನು 1,600 ರೂ.ಗಳಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.

        ಇಂದಿಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಈ ವಿಷಯ ತಿಳಿಸಿದ್ದು, ರಾಜ್ಯದ ಒಟ್ಟು ನಾಲ್ಕು ಕಂದಾಯ ವಿಭಾಗಗಳಲ್ಲಿ ಒಟ್ಟು 2,869 ಕೆಳದರ್ಜೆ ನೌಕರರಿದ್ದಾರೆ.

          ಈ ಪೈಕಿ ಬೆಂಗಳೂರು ಕಂದಾಯ ವಿಭಾಗದಲ್ಲಿ 1925,ಮೈಸೂರು ವಿಭಾಗದಲ್ಲಿ 56,ಬೆಳಗಾವಿ ವಿಧಾಗದಲ್ಲಿ 281,ಹಾಗೂ ಕಲಬುರಗಿ ವಿಭಾಗದಲ್ಲಿ 607 ಮಂದಿ ಇದ್ದಾರೆ ಎಂದರು.

       ಇವರೆಲ್ಲ ಹಲ ಕಾಲದಿಂದ ತಮ್ಮ ಬೇಡಿಕೆಯನ್ನು ಸರ್ಕಾರದ ಮುಂದೆ ಮಂಡಿಸುತ್ತಲೇ ಬಂದಿದ್ದರು.ಇದೀಗ ಅವರ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು ಈ ಎಲ್ಲರಿಗೂ ಅನುಕಂಪ ಭತ್ಯೆ ಹೆಚ್ಚಳದ ಲಾಭ ದೊರೆಯಲಿದೆ ಎಂದು ವಿವರಿಸಿದ್ದಾರೆ.

       ಈ ಮಧ್ಯೆ ಕೇಂದ್ರ ಸರಕಾರವು ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗಗಳ ಬಡವರಿಗೆ ಶೇಕಡ 10ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲು ತೀರ್ಮಾನಿಸಿರುವುದನ್ನು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸ್ವಾಗತಿಸಿದ್ದಾರೆ.

       “ಉದ್ದೇಶಿತ ಮೀಸಲನ್ನು ಜಾರಿಗೆ ತರಲು ತಿದ್ದುಪಡಿ ಮಸೂದೆ ಮಂಡಿಸಿ, ಸಂಸತ್ತಿನ ಉಭಯ ಸದನಗಳ ಅನುಮೋದನೆ ಪಡೆದಿರುವುದು ಸ್ವಾಗತಾರ್ಹವಾದುದಾಗಿದೆ,” ಎಂದು ಹೇಳಿದ್ದಾರೆ.

        “ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಯಾವುದೇ ಬಗೆಯ ಮೀಸಲು ಸೌಲಭ್ಯಕ್ಕೆ ಒಳಪಡದಿರುವಂತಹ ವರ್ಗಗಳ ಬಡವರಿಗೆ ಅನುಕೂಲವಾಗಲಿದೆ.

        ವಾರ್ಷಿಕ ಆದಾಯ 8 ಲಕ್ಷ ರೂ. ಮೀರದೆ ಇರುವಂಥವರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಇದರಿಂದ ಮೀಸಲಾತಿ ಸಿಗಲಿದ್ದು, ಸಾಕಷ್ಟು ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಗಳಿಗೆ ಅನುಕೂಲವಾಗಲಿದೆ.

        ಈ ಶೇಕಡ 10ರಷ್ಟು ಮೀಸಲಿನಿಂದ ಒಟ್ಟು ಮೀಸಲಾತಿ ಪ್ರಮಾಣ ಶೇಕಡ 50ರಿಂದ 60ಕ್ಕೆ ಏರಲಿದೆ. ಎಂದು ದೇಶಪಾಂಡೆ ಅಭಿಪ್ರಾಯ ಪಟ್ಟಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link