ಹೊಸಪೇಟೆ:
ರಾಜ್ಯದಲ್ಲಿ ಈ ಹಿಂದೆ ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಹಾಕಿರುವ ಕೇಸ್ಗಳನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ನಗರದ ಮೂಲಕ ಕೊಪ್ಪಳಕ್ಕೆ ತೆರಳುವ ಮಾರ್ಗ ಮಧ್ಯೆದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದರು.
ರಾಜ್ಯಾದ್ಯಂತ ನಾನಾ ಕಡೆಗಳಲ್ಲಿ ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅಮಾಯಕರಾದವರನ್ನು ಪ್ರಕರಣದಿಂದ ಹೊರತರುವ ಬಗ್ಗೆ ರಾಜ್ಯ ಗೃಹಮಂತ್ರಿ ಬಸವರಾಜ ಬೊಮ್ಮಯಿ ಅವರೊಂದಿಗೆ ಸೇರಿ ಸಮಿತಿ ರಚಿಸಲು ಸಿಎಂ ಯಡಿಯೂರಪ್ಪ ಅವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಸಮಿತಿ ಅಥವಾ ಅದರ ಪೂರ್ವವೇ ಪ್ರಕರಣಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಬಗೆಹರಿಸಲಾಗುವುದು ಎಂದರು.
ರಾಜ್ಯದಲ್ಲಿ ಹಲವಾರು ಪ್ರಕರಣಗಳು ನ್ಯಾಯಾಲಯದಲ್ಲಿ ಬಗೆಹರಿಯದೆ ಬಾಕಿ ಉಳಿದಿದೆ. ಇವುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ವಿಜಯನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವು ಕೆರೆಗಳು ಸಂಪೂರ್ಣವಾಗಿ ಖಾಲಿ ಇರುವ ಬಗ್ಗೆ ಪಕ್ಷದ ಮುಖಂಡರು ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ ನದಿ ನೀರನ್ನು ಬಳಕೆಮಾಡಿಕೊಂಡು ಕೆರೆಗಳನ್ನು ಭರ್ತಿಮಾಡಲಾಗುವುದು.
ತುಂಗಭದ್ರಾ ಜಲಾಶಯ ಸಮೀಪದಲ್ಲಿರುವುದರಿಂದ ಕುಡಿವ ನೀರಿನ ಸಮಸ್ಯೆಗಳ ಬಗ್ಗೆ ಗಮನಕ್ಕೆ ಬಂದಿದೆ. ಕೂಡಲೇ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಕುಡಿವ ನೀರನ್ನು ಯಾವ ರೀತಿಯಲ್ಲಿ ಸದ್ಬಳಕೆಮಾಡಿಕೊಳ್ಳಬಹುದು ಎನ್ನುವ ಕುರಿತು ವರದಿ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಕಾಮಗಾರಿಗೆ ಪ್ರಸ್ತಾವನೆ ತರಿಸಿಕೊಂಡು ಅನುಮೋದನೆ ನೀಡಲಾಗುವುದು ಎಂದು ಹೇಳಿದರು.
ಗಂಗಾವತಿ ಶಾಸಕ ಮರಣ್ಣಮನವಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ಅನಂತ ಪದ್ಮನಾಭ, ಮುಖಂಡರಾದ ಚಂದ್ರಕಾಂತ್ ಕಾಮತ್, ರಾಘವೇಂದ್ರ, ಮಹೇಂದ್ರ ಜೈನ್, ಗೌತಮ ಜೈನ್, ಹಿಂದೂಪರ ಸಂಘಟನೆ ಮುಖಂಡ ಅನಿಲ್ ಜೋಶಿ ಹಾಗೂ ನಾನಾ ಅಧಿಕಾರಿಗಳಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
