ಚಿತ್ರದುರ್ಗ:
ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ದ ಧ್ವನಿ ಎತ್ತುವವರ ತಲೆದಂಡವಾಗುತ್ತಿರುವುದರಿಂದ ಕೊಲೆಗಡುಕ ಸಮಾಜವನ್ನು ಕಾಣುವಂತಾಗಿದೆ. ಅದಕ್ಕಾಗಿ ಸಂವಾದದ ಮೂಲಕ ಸಮಾಜಕ್ಕೆ ಹೊಸ ಸಂದೇಶವನ್ನು ನೀಡುವ ಅಗತ್ಯವಿದೆ ಎಂದು ಎಲ್.ಹನುಮಂತಯ್ಯ ಹೇಳಿದರು.
ಬಂಡಾಯ ಸಾಹಿತ್ಯ ಸಂಘಟನೆ ಕರ್ನಾಟಕ ಬೆಂಗಳೂರು ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂವಾದ ಭಾರತೀಯ ಸಾಹಿತ್ಯ ಮತ್ತು ಬಂಡಾಯ ಪರಂಪರೆ ಪರಿಕಲ್ಪನಾ ಚಿಂತನೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂಸಾಚಾರಕ್ಕೆ ನಾಂದಿಯಾಡಲು ಬುದ್ದನು ಶ್ರಮಿಸಿದ್ದಾನೆ. ಸಂವಾದ ನಿಂತು ಹೋಗಿದೆ. ಯಾರನ್ನೇ ಆಗಲಿ ಹಿಂಸಿಸುವಂತ ಪ್ರಬುದ್ದತೆಯಿದೆಯೆಲ್ಲ ಅತ್ಯಂತ ಕರಾಳ ವ್ಯಕ್ತಿತ್ವವುಳ್ಳದ್ದು. ಕೊಲೆಹಂತಕರ ವಿರುದ್ದ ಧ್ವನಿ ಎತ್ತುವುದು ಲೇಖಕನಿಂದ ಸಾಧ್ಯವಿಲ್ಲ. ಗೋವನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು ಜನರನ್ನು ಕೊಲ್ಲಲಾಗುತ್ತಿದೆ. ಸಮಾಜವಾದಿ ಚಿಂತನೆ ಭಾರತವನ್ನು ಸುಖಿ ದೇಶವನ್ನಾಗಿ ಮಾಡುತ್ತದೆ ಎಂಬ ನಂಬಿಕೆ ರಾಮ್ಮನೋಹರ್ ಲೋಹಿಯಾರವರಲ್ಲಿತ್ತು. ವಿಶ್ವವಿದ್ಯಾನಿಲಯಗಳನ್ನು ಕೇಸರಿ, ಕೆಂಪು ಮಾಡಿ ಬಣ್ಣ ಹಾಕಬಾರದು. ಎಲ್ಲಾ ರಂಗಗಳಲ್ಲಿಯೂ ಸಂವಾದ ಇರಬೇಕು. ಸಂವಾದ, ಭಿನ್ನಾಭಿಪ್ರಾಯವಿಲ್ಲದ ಸಮಾಜ ನಿಜವಾಗಿಯೂ ಆರೋಗ್ಯಪೂರ್ಣವಾದುದಲ್ಲ ಎಂದರು.
ನೆರೆಯ ಪಾಕಿಸ್ತಾನದ ಸೈನಿಕರ ಚೆಂಡಾಡಲು ನಮ್ಮ ಸಾವಿರಾರು ಸೈನಿಕರು ಗಡಿಯಲ್ಲಿ ಪ್ರಾಣ ಒತ್ತೆಯಿಟ್ಟು ಕಾಯುತ್ತಿದ್ದಾರೆ ಎಂದು ಹೇಳುವ ಮೂಲಕ ರಾಜಕಾರಣಿಗಳು ದೇಶಪ್ರೇಮದ ನಾಟಕವಾಡುತ್ತಿದ್ದಾರೆ. ಏಕೆಂದರೆ ಅವರ ಮನೆಯವರಾಗಲಿ ನೆಂಟರಾಗಲಿ ಯಾರು ಸೈನ್ಯದಲ್ಲಿ ಸೇರಿಲ್ಲ. ಸುಳ್ಳು ಭರವಸೆಗಳು ವಿಜೃಂಭಿಸುತ್ತಿವೆ. ಭಾರತ್ಮಾತಾಕಿ ಜೈ ಎನ್ನುವವರು ಮಾತ್ರ ನಿಜವಾದ ದೇಶಪ್ರೇಮಿಗಳು ಎನ್ನುವ ಚರ್ಚೆ ಎಲ್ಲಡೆ ವ್ಯಾಪಕವಾಗಿದೆ.
ದೇಶದ ಸಂಪತ್ತನ್ನೆಲ್ಲಾ ದೋಚುವವರು ದುಡಿಯವ ವರ್ಗ, ಶೋಷಿತರು, ಕಾರ್ಮಿಕರಿಗೆ ದೇಶಭಕ್ತಿಯನ್ನು ಹೇಳಲು ಹೊರಟಿರುವುದು ದೊಡ್ಡ ದುರಂತ. ಹೊಸ ತಲೆಮಾರಿನ ಯುವಕರು ಇಂತಹ ವಿಷಯಗಳನ್ನು ಎತ್ತಿಕೊಂಡು ಚರ್ಚೆಯಲ್ಲಿ ತೊಡಗಬೇಕು. ಗಾಂಧಿಯನ್ನು ಕೊಂದಾಗ ಆರ್.ಎಸ್.ಎಸ್.ನವರು ತಲೆಮರೆಸಿಕೊಂಡಿದ್ದರು. ಈಗ ಧೈರ್ಯದಿಂದ ಓಡಾಡುತ್ತಿದ್ದಾರೆ. ಆ ಧೈರ್ಯ ಈಗ ಎಲ್ಲಿಂದ ಬಂತು ಎಂದು ಕೇಳುವಂತಾಗಬೇಕು ಎಂದು ಯುವಕರನ್ನು ಎಚ್ಚರಿಸಿದರು.
ಸಾಹಿತಿ ಬಿ.ಎಲ್.ವೇಣು ಮಾತನಾಡಿ ದುರ್ಗ ಒಂದು ಹುಲ್ಲುಗಾವಲಿದ್ದಂತೆ ಇಲ್ಲಿಗೆ ಬರುವವರೆಲ್ಲಾ ಸಂಪಾಗಿ ಮೇಯ್ದುಕೊಂಡು ಹೋಗುತ್ತಿದ್ದಾರೆ. ಈ ಊರಿನ ಜನ ಬಾಯಿ ಸತ್ತವರು ಏನನ್ನು ಕೇಳುವುದಿಲ್ಲ. ಆದ್ದರಿಂದಲೇ ಇಲ್ಲಿ ಒಂದು ರಸ್ತೆಯೂ ನೆಟ್ಟಗಿಲ್ಲ. ಬೀದಿ ದೀಪ, ಚರಂಡಿ ವ್ಯವಸ್ಥೆ, ಕುಡಿಯುವ ನೀರು ಪೂರೈಕೆ ಅಷ್ಟಕ್ಕಷ್ಟೆ ಎಂದು ಆಳುವವರ ಹಾಗೂ ಅಧಿಕಾರಿ ಶಾಹಿಗಳ ನಿರ್ಲಕ್ಷೆಯನ್ನು ಕಟುವಾಗಿ ಟೀಕಿಸಿದರು.
ಊರ ತುಂಬ ಮಠಗಳಾಗಿವೆ. ಇನ್ನು ಜಾತಿ ವಿನಾಶವಾಗುವುದಾದರೂ ಹೇಗೆ. ರೇಪ್ ಸ್ವಾಮಿ, ಸರ್ಕಾರಕ್ಕೆ ಗುಟುರು ಹಾಕುವ ಸ್ವಾಮಿಗಳು ಇದ್ದಾರೆ. ಇನ್ನು ಕೆಲವು ಸ್ವಾಮಿಗಳು ನಮ್ಮ ಜಾತಿಯ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಇಳಿಸೀರಿ ಹುಷಾರ್ ಎಂದು ದಮ್ಕಿ ಹಾಕುವ ಪುಡಾರಿ ಸ್ವಾಮಿಗಳು ನಮ್ಮಲ್ಲಿದ್ದಾರೆ.
ಇವರೆಲ್ಲಾ ಬಸವತತ್ವ ಪರಿಪಾಲಕರಾ ಎಂದು ಹೇಗೆ ಹೇಳುವುದು. ಖಾವಿ ಧರಿಸಿ ಜಾತಿ ಬಿಡಲ್ಲ. ಸರ್ವಸಂಗ ಪರಿತ್ಯಾಗಿಗಳೆಂದು ಹೇಳಿಕೊಂಡು ಐಷಾರಾಮಿ ಬದುಕು ನಡೆಸುತ್ತಿದ್ದಾರೆ.ಚಿತ್ರದುರ್ಗ ಮಠಗಳ ನಗರಿ, ದೇವರು, ಧರ್ಮ, ಜಾತಿ ಬಿಟ್ಟರೆ ಜನ ನೆಮ್ಮದಿಯಿಂದ ಇರಬಹುದು.
ದನಗಳ ಹೆಸರಿನಲ್ಲಿ ಜನಗಳನ್ನು ಸಾಯಿಸುತ್ತಿದ್ದಾರೆ. ಇನ್ನು ಕೆಲವರು ನಾವು ಗೆದ್ದು ಬಂದಿರುವುದೇ ಸಂವಿಧಾನ ಸುಡಲು ಎಂದು ಎದೆಯುಬ್ಬಿಸಿ ಹೇಳುತ್ತಿದ್ದಾರೆ. ಸಾಹಿತಿಗಳು, ಬುದ್ದಿಜೀವಿಗಳು ಸಂಕಷ್ಟದಲ್ಲಿದ್ದಾರೆ. ಅನ್ಯಾಯವನ್ನು ಪ್ರಶ್ನಿಸುವ ತಾಕತ್ತು ಇರುವುದು ಬಂಡಾಯ ಸಾಹಿತ್ಯಕ್ಕೆ ಮಾತ್ರ ಎಂದು ಘಂಟಾಘೋಷವಾಗಿ ಹೇಳಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ ಪಾಟೀಲ ಮಾತನಾಡುತ್ತ ಅಸಮಾನತೆ ಎಲ್ಲಿಯವರೆಗೂ ಬದುಕಿನಲ್ಲಿರುತ್ತದೋ ಅಲ್ಲಿಯತನಕ ಬಂಡಾಯ ನಿರಂತರವಾಗಿ ಇದ್ದೇ ಇರುತ್ತದೆ. ಕ್ರಿಯಾಶೀಲ ಸಂಘರ್ಷವನ್ನು ಆಧರಿಸಿರುವುದೇ ನಿಜವಾದ ಬಂಡಾಯ. ಬಂಡಾಯ ಯಾವಾಗ ತಾರ್ಕಿಕ ಅಂತ್ಯ ಕಾಣುತ್ತದೋ ಎನ್ನುವುದನ್ನು ಹೇಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಂಡಾಯಕ್ಕಿರುವ ಶಕ್ತಿಯನ್ನು ಪ್ರತಿಪಾದಿಸಿದರು.
ಬರಹಗಾರನಿಗೆ ಸಾಂಸ್ಕತಿಕ ಜವಾಬ್ದಾರಿಯೂ ಇದೆ. ಬರಹಗಾರ ಸೈನಿಕ, ಯೋಧನಲ್ಲ. ಬರೆಯುವುದು ಕೂಡ ತ್ರಾಸಿನ ಕೆಲಸ. ಚಿತ್ರದುರ್ಗದಲ್ಲಿ ಮೊಟ್ಟ ಮೊದಲ ಬಂಡಾಯ ಸಾಹಿತ್ಯ ಸಂವಾದ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಕರ್ನಾಟಕದಲ್ಲಿರುವ ಬಂಡಾಯ ದಲಿತ ಸಾಹಿತಿಗಳು ಪರದೇಸಿ, ಅನಾಥರು, ಏಕಾಂಗಿಯಲ್ಲ. ಭಾರತದ ನಾಡಿ ನಾಡಿಗಳಲ್ಲಿ ಬಂಡಾಯದ ಮಿಡಿತ ಇದೆ. ದೇಶ ಅಂದರೆ ಆದೇಶ ಅಲ್ಲ. ಸಂಕಟ, ಸಂಭ್ರಮ, ಪಕ್ಷಿ, ಪ್ರಾಣಿ, ಆಕಾಶ, ಭೂಮಿ, ವರ್ತಮಾನ, ಭೂತಕಾಲ, ಭವಿಷ್ಯತ್ಕಾಲ ಎಲ್ಲವೂ ಸೇರಿದರೆ ದೇಶವಾಗುವುದು. ಅದಕ್ಕಾಗಿ ದೇಶ ಆಳುವವರು ದೇಶ ಅಂದರೆ ಆದೇಶವಲ್ಲ ಎನ್ನುವುದನ್ನು ತಿಳಿದುಕೊಂಡರೆ ಒಳ್ಳೆಯದು ಎಂದರು.
ಭಾರತ್ಮಾತಾಕಿ ಜೈ ಎಂದು ದೇಶಪ್ರೇಮದ ಜೈಕಾರಗಳನ್ನು ಕೂಗುವವರು ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಭಾರತ್ಪಿತಾಕಿ ಜೈ, ದೇಶಕ್ಕೆ ಸರ್ವಶ್ರೇಷ್ಟವಾದ ಸಂವಿಧಾನವನ್ನು ನೀಡಿರುವ ಅಂಬೇಡ್ಕರ್ ಭಾರತ ಭಾಗ್ಯವಿದಾತಕೀ ಜೈಎಂದು ಹೇಳಲಿ ಆಗ ನಿಜವಾದ ದೇಶಪ್ರೇಮಿಗಳೆನ್ನಬಹುದು ಎಂದು ಸವಾಲು ಎಸೆದರು.ಕಾಳೆಗೌಡ ನಾಗವಾರ, ಆರ್.ಮಲ್ಲಿಕಾರ್ಜುನಯ್ಯ, ಗಂಗಾಧರ, ನುಲೇನೂರು ಶಂಕರಪ್ಪ ವೇದಿಕೆಯಲ್ಲಿದ್ದರು.ದಾದಾಪೀರ್ ನವಿಲೆಹಾಳ್ ಸ್ವಾಗತಿಸಿದರು. ಹುರಳಿ ಬಸವರಾಜ್ ವಂದಿಸಿದರು. ಎ.ಬಿ.ರಾಮಚಂದ್ರಪ್ಪ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
