ಬೆಂಗಳೂರು
ಹಣಕಾಸು ವ್ಯವಹಾರ ಮತ್ತು ಹಳೇ ದ್ವೇಷದ ಹಿನ್ನೆಲೆ ನಡೆದಿದ್ದ ಅರುಣ್ ಅಲಿಯಾಸ್ ಕ್ಯಾಟ್ ಅರುಣ್ ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಅರುಣ್ ಕೊಲೆಗೈದು ಪೊಲೀಸರ ಗುಂಡೇಟು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಮನೋಜ್ ಅಲಿಯಾಸ್ ಕೆಂಚ ಕೊಲೆಯ ಹಿಂದಿನ ಕಾರಣವನ್ನು ಬಾಯ್ಬಿಟ್ಟಿದ್ದಾನೆ. .ಅಳ್ಳಾಸಂದ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರುಣ್ ಕೊಲೆ ಫೈನಾನ್ಸ್ ವಿಚಾರಕ್ಕೆ ನಡೆದಿಲ್ಲ. ಹಳೆಯ ವೈಷಮ್ಯಕ್ಕೆ ನಡೆದಿತ್ತು ಎಂದು ತಿಳಿದು ಬಂದಿದೆ.
ಕಡಬಗೆರೆ ಸೀನನ ಶೂಟೌಟ್ ಪ್ರಕರಣದಲ್ಲಿ ಮನೋಜ್ ಅಲಿಯಾಸ್ ಕೆಂಚನನ್ನು ಯಲಹಂಕ ಪೊಲೀಸರು ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ.ಆತನ ಬಳಿ ಪಿಸ್ತೂಲ್ ಪತ್ತೆಯಾಗಿದ್ದರಿಂದ ಪೊಲೀಸರು ವಿಚಾರಣೆ ನಡೆಸಿದ್ದರು. ಕೆಂಚನ ಸ್ನೇಹಿತ, ಕೊಲೆಯಾದ ಅರುಣ್ನನ್ನು ಈ ಹಿಂದೆ ಕಡಬಗೆರೆ ಸೀನನ ಶೂಟೌಟ್ ಪ್ರಕರಣದಲ್ಲಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ಅರುಣ್ ಆ ಪ್ರಕರಣದಲ್ಲಿ ನಿರ್ದೋಷಿ ಎಂದು ಬಿಟ್ಟು ಕಳಿಸಲಾಗಿತ್ತು. ಆದರೆ ಕೆಂಚನನ್ನು ಪೊಲೀಸರು ತನಿಖೆ ನಡೆಸಿ ಜೈಲಿಗೆ ಕಳಿಸಿದ್ದರು
ಆಪ್ತ ಸ್ನೇಹಿತ ಅರುಣ್ ನನ್ನನ್ನ ಬಿಡಿಸಲು ಸಹಾಯ ಮಾಡಿಲ್ಲವೆಂದು ಕೆಂಚ ಕೋಪಗೊಂಡಿದ್ದ. ಇತ್ತೀಚೆಗೆ ಜೈಲಿನಿಂದ ಹೊರಬಂದಾಗ ಕೊಲೆಯಾದ ಅರುಣ್, ಕೆಂಚನ ಬಳಿ ಆತನ ತಾಯಿಯ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದ ಎನ್ನಲಾಗಿದೆ. ಇದರಿಂದ ಕುಪಿತಗೊಂಡಿದ್ದ ಕೆಂಚ ಅರುಣ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಅದರಂತೆ ಸ್ನೇಹಿತರನ್ನು ಬಳಸಿಕೊಂಡು ಅರುಣ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವುದಾಗಿ ಪೊಲೀಸರ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
