ಬಳ್ಳಾರಿ
ಪೌಷ್ಟಿಕ ಆಹಾರವನ್ನು ಸರಿಯಾದ ಸಮಯದಲ್ಲಿ ತಾಯಿ ಮತ್ತು ಮಗು ಸೇವಿಸಬೇಕು ಇದರಿಂದ ಆರೋಗ್ಯ ವೃದ್ದಿಗೆ ಸಹಕಾರಿ ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಾ ನಾಯ್ಕ್ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಮರಿಸ್ವಾಮಿಮಠ, ನಗರ ಆರೋಗ್ಯ ಕೇಂದ್ರ ಇವರ ಆಶ್ರಯದಲ್ಲಿ ನಗರದ ಅಂದ್ರಾಳ್ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌಷ್ಠಿಕ ಆಹಾರದ ಕೊರತೆ, ದೀರ್ಘಕಾಲದ ಅನಾರೋಗ್ಯ ಮಗುವಿನ ಅಪೌಷ್ಠಿಕತೆಗೆ ಕಾರಣವಾಗುತ್ತದೆ. ಅಪೌಷ್ಠಿಕತೆಯು ಅತಿಸಾರ ಬೇಧಿ, ನ್ಯೂಮೋನಿಯಾದಂತಹ ಅಸ್ವಸ್ಥತೆಗೆ ಕಾರಣವಾಗುವುದಲ್ಲದೇ ಗರ್ಭಿಣಿಗೆ ನಿಯಮಿತ ಪ್ರಸವ ಪೂರ್ವ ಆರೈಕೆ ಅತ್ಯವಶ್ಯಕ, ಮಗುವಿನ ಜನನದ ನಂತರ 6 ತಿಂಗಳವರೆಗೆ ಕೇವಲ ತಾಯಿ ಎದೆಹಾಲನ್ನು ಮಾತ್ರ ನೀಡಬೇಕು ಎಂದರು.
ಆರೋಗ್ಯವಂತ ಮಗು 6 ತಿಂಗಳ ನಂತರ ತಾಯಿ ಹಾಲಿನ ಜೊತೆ ಪೂರಕ ಆಹಾರವನ್ನು ನೀಡಬೇಕು. ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ವಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿರುವ ಪೌಷ್ಠಿಕ ಆಹಾರ ಪುನಶ್ಚೇತನ ಕೇಂದ್ರಕ್ಕೆ ಕಳುಹಿಸಿದಲ್ಲಿ ಮಗುವಿನ ಆರೋಗ್ಯದ ಆಧಾರದ ಮೇಲೆ 14 ದಿನಗಳವರೆಗ ಮಗುವಿಗೆ ಚಿಕಿತ್ಸೆ ಮತ್ತು ಉಪಚಾರವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಈ ವೇಳೆ ತಾಯಿಗೆ ದೈನಂದಿನ ದುಡಿಮೆಯ ಸಹಾಯಧನವನ್ನು ಸಹ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತವ್ವ ಉಪ್ಪಾರ ಮಾತನಾಡಿ ಮಗುವಿಗೆ ಬಾಲ್ಯದಲ್ಲಿ ಕಾಣುವ ರೋಗಗಳ ನಿಯಂತ್ರಣಾಕ್ಕಾಗಿ 10 ಮಾರಕ ರೋಗಗಳ ವಿರುದ್ದ ಹಾಕುವ ಲಸಿಕೆಗಳನ್ನು ಕಾಲಕಾಲಕ್ಕೆ ಸಂಪೂರ್ಣ ಲಸಿಕೆ ಹಾಕಿಸಿ ಮಗುವಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಉಂಟುಮಾಡಲು ಪಾಲಕರು ಸಹಕರಿಸಬೇಕು ಎಂದು ತಿಳಿಸಿದರು.
ಇದೆ ವೇಳೆ ಪೌಷ್ಟಿಕ ಆಹಾರ ಪ್ರಾತ್ಯಕ್ಷತೆಯನ್ನು ಪ್ರದರ್ಶಿಸಿಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಯಯಿಂದಿರಿಗೆ, ಶಾಲಾ ಮಕ್ಕಳಿಗೆ ಭಿತ್ತಿ ಚಿತ್ರಗಳು ಹಾಗೂ ವಿಡಿಯೋ ಪ್ರದರ್ಶನದ ಮೂಲಕ ಆರೋಗ್ಯ ಜಾಗೃತಿ ಮೂಡಿಸಲಾಯಿತು ಮತ್ತು ಆರೋಗ್ಯದ ಸಮಸ್ಯೆಗಳಿಗೆ ಉತ್ತರಿಸಲಾಯಿತು.
ಈ ಸಂದರ್ಭದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಗೀತಾ, ಪುಷ್ಪಲತಾ, ಪ್ರೊಜೆಕ್ಟನಿಷ್ಟ್ ನರಸಿಂಹಮೂರ್ತಿ, ಸಿಬ್ಬಂದಿವಯರಾದ ಗೌಸ್ ಬಾಷಾ, ಚಿದಾನಂದ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
