ತುರುವೇಕೆರೆ
ತಾಲ್ಲೂಕಿನಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ತಾಲ್ಲೂಕಿನಲ್ಲಿ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ನಿರ್ಲಕ್ಷ್ಯ ಭಾವನೆ ಹೆಚ್ಚುತ್ತಿರುವುದೂ ಸಹ ಕೊರೋನಾ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ.
ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಾವಿನ ಪ್ರಕರಣಗಳೂ ಹೆಚ್ಚುತ್ತಿವೆ. ಪ್ರತಿ ದಿನ 10 ರಿಂದ 20 ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ತಾಲ್ಲೂಕಿನಲ್ಲಿ ಕಾಣಬರುತ್ತಿದ್ದರೂ ಸಹ, ತಾಲ್ಲೂಕಿನ ಜನತೆ ನಮಗೆ ಸಂಬಂಧಿಸಿಯೇ ಇಲ್ಲವೇನೋ ಎಂಬಂತೆ ನಿರ್ಲಕ್ಷ್ಯ ವಹಿಸುತ್ತಿರುವುದು ತಾಲ್ಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈಗಾಗಲೇ ತಾಲ್ಲೂಕಿನಲ್ಲಿ 500 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 6 ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ಕೊರೋನಾ ವಾರಿಯರ್ಸ್ಗಳು ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಸಹ, ಜನತೆ ಸರ್ಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರುತ್ತಿರುವುದು, ತಾಲ್ಲೂಕು ಆಡಳಿತಕ್ಕೆ ಆತಂಕ ತಂದಿದೆ. ಇತ್ತೀಚೆಗಂತೂ ತಮ್ಮ ಆತ್ಮೀಯರಿಗೋ ಇಲ್ಲವೆ ಪಕ್ಕದ ಮನೆಯವರಿಗೋ ಕೊರೋನಾ ಪಾಸಿಟಿವ್ ಬಂದಿದೆ ಎಂದರೂ ಜನತೆ ಭಯ ಪಡದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರೋನಾ ಬಂದಿದೆಯಾ ಬರಲಿ ಬಿಡು ಎಂದು ತಮಗೆ ಸಂಬಂಧಿಸಿಯೇ ಇಲ್ಲವೇನೋ ಎಂಬ ತಾತ್ಸಾರ ಭಾವನೆ ಮೂಡಿದಂತಿದೆ. ಒಂದು ವೇಳೆ ಕೊರೋನಾ ಲಕ್ಷಣಗಳು ಕಂಡು ಬಂದರೂ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವುದಿಲ್ಲ. 14 ದಿನ ಕ್ವಾರಂಟೈನ್ನಲ್ಲಿಡುವ ಜೊತೆಗೆ ತಮ್ಮ ಕುಟುಂಬದವರೆಲ್ಲರನ್ನು ಹೋಂ ಕ್ವಾರಂಟೈನ್ ಮಾಡುತ್ತಾರೆ. ಯಾಕೆ ಬೇಕು ಮನೆಯಲ್ಲೇ ಬಿಸಿನೀರು ಹಾಗೂ ಗಿಡಮೂಲಿಕೆ ಕಷಾಯ ಕುಡಿದು ಒಂದು ವಾರ ವಿಶ್ರಾಂತಿ ತೆಗೆದುಕೊಂಡರೆ ಹೊರಟು ಹೋಗುತ್ತದೆ ಎಂಬ ಉದಾಸೀನ ಮನೋಭಾವದವರೇ ಜಾಸ್ತಿಯಾಗಿರುವುದೂ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ಒಂದು ವೇಳೆ ಜ್ವರ, ನೆಗಡಿ, ಕೆಮ್ಮು ಬಂದರೂ ಸಹ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯದೆ ಕ್ವಾರಂಟೈನ್ ಮಾಡುತ್ತಾರೆಂಬ ಭಯದಿಂದ ಮನೆಯಲ್ಲೇ ಆಯುರ್ವೇದ ಔಷಧಿಗಳನ್ನುü ಸೇವಿಸುತ್ತಾರೆ. ಹೀಗೆ ಮಾಡಿದರೆ ತಮ್ಮ ಜೀವಕ್ಕೇ ಕುತ್ತು ಎಂಬುದನ್ನು ಜನತೆ ಮರೆತಂತಿದೆ. ಚೇತರಿಕೆ ಪ್ರಮಾಣ ಹೆಚ್ಚಳವಾಗುತ್ತಿರುವುದೂ ಸಹ ಉದಾಸೀನ ಭಾವನೆಗೆ ಒಂದು ಕಾರಣವೆನ್ನಬಹುದು.
ಕೊರೋನ ಭಯವಿಲ್ಲದೆ ಪಿತೃ ಪಕ್ಷ ಆಚರಣೆ: ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ ಹರಿದಿನಗಳು ಯಥಾಸ್ಥಿತಿ ಮುಂದುವರೆದಿವೆ. ಸೆಪ್ಟೆಂಬರ್ನಲ್ಲಿ ಎಲ್ಲೆಡೆ ಪಿತೃಪಕ್ಷ ಆಚರಣೆ ಮಾಡುತ್ತಿದ್ದು ಜನರಲ್ಲಿ ಕೊರೋನ ಭಯವೇ ಇಲ್ಲದಂತಾಗಿದೆ. ಹಬ್ಬದ ಆಚರಣೆಗೆ ವಸ್ತುಗಳನ್ನು ಕೊಳ್ಳಲು ಪಟ್ಟಣಕ್ಕೆ ಬರುವವರ ಸಂಖ್ಯೆ ಹೆಚ್ಚಿದ್ದು, ಸರ್ಕಾರಿ ಮಾರ್ಗಸೂಚಿಗಳು ಕಣ್ಮರೆಯಾದಂತಿವೆ. ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡಿಮೆಯಾದಂತಿದೆ.
ಮಾರುವವರು, ಕೊಳ್ಳುವವರು ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಪಾಡದೆ ಗುಂಪು ಗುಂಪಾಗಿ ಕೂಡುವುದು ಸಾಮಾನ್ಯವಾಗಿದೆ. ಕೆಲವರು ಮಾಸ್ಕ್ ಧರಿಸಿದ್ದರೂ ಅದು ಕುತ್ತಿಗೆ ಕೆಳಭಾಗದಲ್ಲಿ ಮಾತ್ರ ನೇತಾಡುತ್ತಿರುತ್ತದೆ. ಪಿತೃಪಕ್ಷವನ್ನು ಪ್ರತಿ ವರ್ಷದಂತೆ ಯಥಾಸ್ಥಿತಿ ಕೊರೋನಾ ಭಯವಿಲ್ಲದೆ ನೆಂಟರಿಷ್ಟರೊಡಗೂಡಿ ಜೋರಾಗಿಯೇ ಆಚರಿಸುತ್ತಿದ್ದು ಕೊರೋನಾ ಮರೆತಂತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪಿತೃಪಕ್ಷವನ್ನು ಒಂದೇ ದಿನ ಆಚರಣೆÉ ಮಾಡದೆ ವಿಜಯದಶಮಿ ವರೆಗೂ ಒಂದೊಂದು ಗ್ರಾಮದಲ್ಲಿ ಒಂದೊಂದು ದಿನ ಆಚರಣೆ ಮಾಡುತ್ತಾರೆ.
ಆಯಾ ಗ್ರಾಮದಲ್ಲಿ ಆಚರಿಸುವ ಪಿತೃಪಕ್ಷದಂದು ಸಾಮಾನ್ಯವಾಗಿ ಆಜುಬಾಜು ಗ್ರಾಮದವರು ಹಾಗೂ ನೆಂಟರಿಷ್ಟರು ಅಪಾರ ಪ್ರಮಾಣದಲ್ಲಿಯೇ ಸೇರುತ್ತಿರುವುದು ಕೊರೋನಾ ಹೆಚ್ಚಳಕ್ಕೆ ಕಾರಣವಾಗಿದೆ. ಕೊರೋನಾ ಬರುತ್ತದೆ ಹೋಗುತ್ತದೆ ಎಂಬ ತಾತ್ಸಾರ ಭಾವನೆ ಜನರಲ್ಲಿ ಬೇರು ಬಿಟ್ಟಂತಿದೆ.
ಕೊರೋನಕ್ಕೆ ಹಲವು ದೇಶಗಳ ಅನೇಕ ಸಂಸ್ಥೆಗಳು ಔಷಧಿ ಸಿದ್ದಪಡಿಸುತ್ತಿದ್ದು ಇನ್ನೂ ಪರೀಕ್ಷಾ ಹಂತದಲ್ಲಿವೆ. ನಮ್ಮ ದೇಶದಲ್ಲಿಯೂ ಪರೀಕ್ಷಾ ಹಂತದಲ್ಲಿದ್ದು ನವೆಂಬರ್ ವೇಳೆಗೆ ಔಷಧಿ ಸಿಗಬಹುದೆಂಬ ಮಾತುಗಳು ಸರ್ಕಾರಿ ವಲಯಗಳಲ್ಲಿ ಕೇಳಬರುತ್ತಿದ್ದು, ಕೊರೋನಾ ಔಷಧಿ ಜನಸಾಮಾನ್ಯರ ಕೈಗೆ ಸಿಗುವವರೆಗೆ ಜನತೆ ಎಚ್ಚೆತ್ತು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೋನಾ ತಡೆಗಟ್ಟಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
