ಚಳ್ಳಕೆರೆ
ಕಳೆದ 5 ವರ್ಷಗಳ ಎನ್ಡಿಎ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರಮೋದಿ ಜಾರಿಗೊಳಿಸಿದ ಎಲ್ಲಾ ಯೋಜನೆಗಳು ಬಡ ಜನತೆಯ ಪರವಾಗಿದ್ದು, ಕೋಟ್ಯಾಂತರ ಬಡವರು ಈ ಯೋಜನೆಗಳ ಸದುಪಯೋಗವನ್ನು ಪಡೆದಿದ್ದು, ರಾಷ್ಟ್ರವನ್ನು ಸಂರಕ್ಷಿಸುವ ಸಮರ್ಥ ನಾಯಕ ನರೇಂದ್ರಮೋದಿ ಎಂಬ ತೀರ್ಮಾನ ಕೈಗೊಂಡಿದ್ದು, ಮತದಾರ ಈ ಬಾರಿ ಕಂಡಿತವಾಗಿ ಭಾರತೀಯ ಜನತಾ ಪಕ್ಷವನ್ನು ಹೆಚ್ಚು ಮತಗಳ ಅಂತರದಿಂದ ಗೆಲಿಸಿಕೊಡುವರು ಎಂಬ ಆತ್ಮವಿಶ್ವಾಸ ನನಗೆ ಇದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ಅವರು, ಸೋಮವಾರ ತಾಲ್ಲೂಕಿನ ಜಾಜೂರು, ಚೌಳೂರು, ಪಗಡಲಬಂಡೆ, ದೊಡ್ಡಚೆಲ್ಲೂರು, ದೊಡ್ಡ ಬೀರನಹಳ್ಳಿ ಮತ್ತು ಪರಶುರಾಮಪುರ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ಕಳೆದ ಐದು ವರ್ಷಗಳ ಸಾಧನೆ ಮತದಾರರ ಮುಂದಿಟ್ಟು ಮತ ಕೇಳಲಾಗುತ್ತಿದೆ. ಪಕ್ಷದ ಎಲ್ಲಾ ಸಾಧನೆಗಳ ಬಗ್ಗೆ ಈಗಾಗಲೇ ಮತದಾರರಲ್ಲಿ ಸ್ವಷ್ಟ ಅರಿವಿದೆ. ವಿಶೇಷವಾಗಿ ರಾಷ್ಟ್ರ ಭದ್ರತೆ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರಮೋದಿ ಕೈಗೊಂಡ ದೃಢನಿರ್ಧಾರಗಳು ವಿಶ್ವಮಟ್ಟದಲ್ಲಿ ಪ್ರಧಾನಿ ಮಂತ್ರಿಯವರ ವರ್ಜಸ್ಸನ್ನು ಹೆಚ್ಚಿಸಿದೆ. ಹೀಗಾಗಿ ಜನತೆಯ ಮುಂದೆ ಕೇವಲ ಬಿಜೆಪಿ ಆಯ್ಕೆ ಮಾತ್ರ ಅವರ ಕಣ್ಣ ಮುಂದಿದ್ದು, ಈ ಕ್ಷೇತ್ರದಲ್ಲಿ ಮತದಾರರು ಬಿಜೆಪಿಗೆ ಮತ ನೀಡುವ ಮೂಲಕ ಪ್ರಧಾನ ಮಂತ್ರಿಯವರ ಶಕ್ತಿಯನ್ನು ಹೆಚ್ಚಿಸಲಿದ್ಧಾರೆಂದರು.
ಮಾಜಿ ಶಾಸಕ ಜಿ.ಬಸವರಾಜಮಂಡಿಮಠ್ ಸಹ ಬಿರುಸಿನ ಪ್ರಚಾರ ಕೈಗೊಂಡಿದ್ದು, ಬಿಜೆಪಿ ಈ ಲೋಕಸಭಾ ಕ್ಷೇತ್ರದಕ್ಕೆ ಮಾದಿಗ ಸಮುದಾಯ ರಾಜ್ಯಮಟ್ಟದ ಹಿರಿಯ ಹೋರಾಟಗಾರ ಹಾಗೂ ಅಗ್ರಗಣ್ಯ ಸಮರ್ಥನಾಯಕರಾದ ಎ.ನಾರಾಯಣಸ್ವಾಮಿಯವರನ್ನು ಅಭ್ಯರ್ಥಿಯನ್ನಾಗಿ ಸ್ಪರ್ಧಿಸಲು ಅವಕಾಶ ನೀಡಿದೆ. ಈಗಾಗಲೇ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಸುತ್ತಿನ ಪ್ರಚಾರವನ್ನು ಪೂರ್ಣಗೊಳಿಸಿದ್ದು, ಎಲ್ಲಾ ಮತದಾರರ ಬಾಯಲ್ಲೂ ಮೋದಿಯವರ ಸರ್ಕಾರದ ಸಾಧನೆಗಳ ಬಗ್ಗೆ ಮುಕ್ತ ಪ್ರಶಂಸೆ ಮತದಾರರಿಂದ ಮತ್ತು ಹಲವಾರು ಸಂಘ ಸಂಸ್ಥೆಗಳ ಪ್ರತಿನಿಧಿಗಳಿಂದ ವ್ಯಕ್ತವಾಗುತ್ತಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿ ಜಯಸಾಧಿಸುವ ನಿಟ್ಟಿನಲ್ಲಿ ಮುಂದಿದೆ ಎಂದರು.
ದಲಿತ ಮುಖಂಡ, ನಗರಸಭಾ ಮಾಜಿ ಸದಸ್ಯ ಎಂ.ಶಿವಮೂರ್ತಿ ಮಾತನಾಡಿ, ಕಳೆದ ಹಲವಾರು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಈ ಸಮುದಾಯ ಮುಖಂಡರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿರಲಿಲ್ಲ. ಭಾರತೀಯ ಜನತಾ ಪಕ್ಷ ಈ ಕ್ಷೇತ್ರದ ಮತದಾರರ ಅಂತರಾಳವನ್ನು ಅರಿತು ದಿಟ್ಟ ನೇರ ಮಾತಿನ ಪ್ರಮುಖ ಹೋರಾಟಗಾರ ಎ.ನಾರಾಯಣಸ್ವಾಮಿಯವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದ್ದು, ಈಗಾಗಲೇ ಎಲ್ಲಾ ಮತದಾರರಲ್ಲೂ ನಾರಾಯಣಸ್ವಾಮಿಯವರ ಬಗ್ಗೆ ವಿಶೇಷ ಆಸಕ್ತಿ ಹಾಗೂ ಒಲವು ಮೂಡಿದೆ.
ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಜನಪ್ರಿಯ ಕಾರ್ಯಕ್ರಮಗಳು ಭಾರತೀಯ ಜನತಾ ಪಕ್ಷವನ್ನು ಗೆಲುವಿನತ್ತ ಕೊಂಡೊಯಲಿದೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರಾದ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ನರಸಿಂಹಯ್ಯ, ತಿಮ್ಮಣ್ಣ, ಹನುಮಂತರಾಯ, ನಾಗರಾಜ, ಶಂಕರಲಿಂಗ, ಚಿರಂಜೀವಿ, ಜಯಕುಮಾರ್ ಮುಂತಾದವರು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು.