ಚಳ್ಳಕೆರೆ
ಕಳೆದ ಸುಮಾರು ಒಂದು ತಿಂಗಳಿನಿಂದ ಚಳ್ಳಕೆರೆ ನಗರವೂ ಸೇರಿದಂತೆ ವಿವಿಧ ಗ್ರಾಮೀಣ ಭಾಗದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ರೈತರೂ ಸೇರಿದಂತೆ ಜನಸಾಮಾನ್ಯರ ಬದುಕು ಸಹ ಅತಂತ್ರಗೊಳ್ಳುತ್ತಿದ್ದು, ಶುಕ್ರವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳು ಉರಳಿಬಿದ್ದು, ಸುಮಾರು 70 ಸಾವಿರ ನಷ್ಟವಾಗಿದ್ದರೆ. ನಗರದ ಬಳ್ಳಾರಿ ರಸ್ತೆಯ ಸಾಮಿಲ್ ಸಂಪೂರ್ಣವಾಗಿ ನೀರಿನಲ್ಲಿ ಮುಳಿಗಿದ್ದು ಸುಮಾರು 3 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿರುತ್ತದೆ.
ಕಳೆದ ಸುಮಾರು 50 ವರ್ಷಗಳಿಂದ ಬಳ್ಳಾರಿ ರಸ್ತೆಯಲ್ಲಿರುವ ಓಂ ಶಿವ ಸಾಮಿಲ್ಗೆ ರಾತ್ರಿ ವೇಳೆ ಬಿದ್ದ ಮಳೆ ನೀರು ನುಗ್ಗಿ ಸಾಮಿಲ್ನ ಆವರಣವೆಲ್ಲಾ ನೀರಿನಿಂದ ತುಂಬಿದ್ದು, ಮರದ ಭಾರೀಗಾತ್ರದ ಕೊರಡುಗಳು ಸಹ ನೀರಿನಿಂದ ಆವೃತ್ತವಾಗಿದ್ದು, ಸಾಮಿಲ್ನಲ್ಲಿದ್ದ ಮರ ತುಂಡು ಮಾಡುವ ಯಂತ್ರಗಳೂ ಸಹ ನೀರಿನಲ್ಲಿ ಮುಳಿಗಿವೆ. ಒಟ್ಟು 6ಕ್ಕೂ ಹೆಚ್ಚುಯಂತ್ರಗಳು ನೀರಿನಲ್ಲಿ ಮುಳಿಗಿದ್ದು ಪ್ರತಿನಿತ್ಯ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಿಪ್ಪೇಸ್ವಾಮಿ, ಮಹಲಿಂಗಪ್ಪ, ನಟರಾಜ, ಮಂಜುನಾಥ, ಭಾಷ, ಸಮೀವುಲ್ಲಾ, ಮಹಂತೇಶ್ ಮುಂತಾದವರು ಕೆಲಸವಿಲ್ಲದೆ ಪರದಾಡುತ್ತಿದ್ದು, ಕಳೆದ 20 ವರ್ಷಗಳ ಅವಧಿಯಲ್ಲಿ ಇದೇ ಮೊದಲಬಾರಿಗೆ ಭಾರಿ ಪ್ರಮಾಣದ ನೀರು ಇಲ್ಲಿ ಹರಿದು ಬಂದಿದೆ ಎಂದು ತಮ್ಮ ಅಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಸೂಜಿಮಲ್ಲೇಶ್ವರ ನಗರದ ಚಿಕ್ಕ ಚಹ ಅಂಗಡಿ ಮಾಲೀಕ ಎಂ.ಶಿವಕುಮಾರ್ ಮನೆಗೂ ಸಹ ನೀರು ನುಗ್ಗಿದ್ದು, ಮನೆಯಲ್ಲಿನ ಆಹಾರ ಪದಾರ್ಥಗಳು ನೀರಿನಲ್ಲಿ ಮುಳುಗಿವೆ. ಮನೆ ಒಳಗಡೆಯೇ ನೀರು ಶೇಖರಣೆಯಾಗುವುದನ್ನು ಕಂಡು ಗಾಬರಿಗೊಂಡ ಶಿವಕುಮಾರ್ ಪತ್ನಿ ಶೈಲಜಾ, ತಾಯಿ ಕೆಂಚಮ್ಮ, ಹೇಮಶ್ರೀ ಮತ್ತು ಯಶಸ್ವಿನಿ ಇಡೀ ರಾತ್ರಿ ಮನೆಯ ಒಳಗೆ ಶೇಖರಣೆಯಾದ ನೀರನ್ನು ಹೊರಹಾಕುವ ಮೂಲಕ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ. ತಾಲ್ಲೂಕಿನ ಗೊರ್ಲಕಟ್ಟೆ ಗ್ರಾಮದಲ್ಲಿ ಮಳೆಯಿಂದ ಸುಮಾರು ಮೂರು ಮನೆಗಳು ನೆಲಕ್ಕುರುಳಿದ್ದು, ಸುಮಾರು 70 ಸಾವಿರ ನಷ್ಟ ಸಂಭವಿಸಿರುತ್ತದೆ. ಗ್ರಾಮದ ತಿಪ್ಪಮ್ಮ, ಪಾರ್ವತಮ್ಮ, ಶಂಕರಪ್ಪ ಎಂಬುವವರ ಮನೆ ಭಾಗಶಃ ಕುಸಿದಿದ್ದು ಈ ನಷ್ಟ ಸಂಭವಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
