ಕುಣಿಗಲ್ :
ಇತಿಹಾಸದ ಪುಟದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ರಾಮಾಯಣ ಎಂಬ ಜಗತ್ಪ್ರಸಿದ್ದ ಗ್ರಂಥವನ್ನು ರಚಿಸಿದ ವ್ಯಕ್ತಿ ಕೇವಲ ಭೇಟೆಯಾಡಿಕೊಂಡು ಜೀವನ ಸಾಗಿಸುತ್ತಿದ್ದ ವಾಲ್ಮೀಕಿ ಋಷಿಗಳು ಎಂಬುದು ಆಶ್ಚರ್ಯವಾದರೂ ಸತ್ಯ. ವಾಲ್ಮೀಕಿಯವರು ಸದಾ ಕ್ರಿಯಾತ್ಮಕ ಬುದ್ದಿಶಕ್ತಿಯನ್ನು ಹೊಂದಿದ್ದರು ಎಂಬುದನ್ನು ಈ ಗ್ರಂಥದಲ್ಲಿ ಮೂಡಿಬಂದಿರುವ ವಿಸ್ತತ ಪದಗಳ ಅರ್ಥ ಜೋಡಣೆಯೇ ಸಾಕ್ಷಿಯಾಗಿದೆ ಎಂದು ಪುರಸಭೆ ಅಧ್ಯಕ್ಷೆ ನಳಿನಾ ಬೈರಪ್ಪ ತಿಳಿಸಿದರು.
ಬುಧವಾರ ತಾಲ್ಲೂಕು ಕಚೇರಿ ಕಂದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬರಿ ಅವರ ಜನ್ಮ ದಿನಾಚರಣೆ ಆಚರಿಸಿದರೆ ಸಾಲದು ಅವರಲ್ಲಿರುವ ಒಳ್ಳೆಯ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಾಲ್ಮೀಕಿ ಮಹರ್ಷಿಯು ರಚಿಸಿದ ರಾಮಾಯಣವು ಅನೇಕ ಸಾಧಕರಿಗೆ ಮಾರ್ಗ ಸೂಚಿಯಾಗಿದೆ. ಈ ಕಾವ್ಯದಲ್ಲಿ ಶ್ರೀರಾಮನ ಸರ್ವ ಶ್ರೇಷ್ಠತೆಯನ್ನು ಮತ್ತು ಇತಿಹಾಸವನ್ನು ಸುಂದರವಾಗಿ ವರ್ಣಿಸಿದ್ದಾರೆ. ಅವರ ತಪಸ್ಸಿನ, ಭಕ್ತಿ ಮತ್ತು ಶ್ರದ್ಧೆಯ ಮೂಲಕ ಈ ಗ್ರಂಥ ಹೊರಬಂದಿದೆ ಎಂದರು.
ತಹಸೀಲ್ದಾರ್ ನಾಗರಾಜು ಮಾತನಾಡಿ, ವಾಲ್ಮೀಕಿ ರಚಿಸಿದ ರಾಮಾಯಣವು ಅನೇಕ ಜನರ ಜೀವನವನ್ನು ಬದಲಿಸಿದ ಸಾಧನ ಸಿದ್ದಿ ಕಾವ್ಯವಾಗಿದೆ ಹಾಗೂ ರಾಮಾಯಣದಲ್ಲಿ ಬರುವ ಒಂದೊಂದು ಸನ್ನಿವೇಶಗಳು ಓದುಗರ ವಿವೇಕ, ಬುದ್ದಿ, ಮನಸ್ಸು, ಕ್ರಿಯೆ, ಕರ್ಮಗಳನ್ನು ಸೂಕ್ತ ದಾರಿಯಲ್ಲಿ ನಡೆಸುವ ಕಾರ್ಯಮಾಡುತ್ತದೆ. ಇಂತಹ ಪವಿತ್ರ ಹಾಗೂ ಶ್ರೇಷ್ಠವಾದ ಮಹಾಕಾವ್ಯವನ್ನು ರಚನೆ ಮಾಡಿದ ಮಾಲ್ಮೀಕಿ ಮಹರ್ಷಿಯು ಶ್ರೇಷ್ಠವ್ಯಕ್ತಿಯಾಗಿ ಉನ್ನತ ಸ್ಥಾನಗಳಿಸಿದ್ದಾರೆ. ಈ ಮಹಾಕಾವ್ಯ ಇಂದಿಗೂ ಪಾಶ್ಚಾತ್ಯರ ದೃಷ್ಟಿಯಲ್ಲಿ ಆದರ್ಶ ಕಾವ್ಯವಾಗಿದೆ. ಪ್ರಪಂಚದಲ್ಲಿರುವ ಅನೇಕ ಭಾಷೆಗಳಲ್ಲಿ ರಾಮಾಯಣ ಗ್ರಂಥ ಹೊರಬಂದಿರುವುದು ಹಾಗೂ ಭರತ ಖಂಡದಲ್ಲಿ ಜನ್ಮತಾಳಿದರೂ ವಿಶ್ವಮಾನ್ಯತೆ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನಾ ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿಯವರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಜಾನಪದ ಕಲಾತಂಡದೊಂದಿಗೆ ಮೆರವಣಿಗೆ ನಡೆಸಲಾಯಿತು ಹಾಗೂ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭಾ ಉಪಾಧ್ಯಕ್ಷ್ಯ ಅರುಣ್ಕುಮಾರ್, ಸಿಪಿಐ ಅಶೋಕ್ಕುಮಾರ್, ಕುಣಿಗಲ್ ಶಿವಣ್ಣ, ಮಾಜಿ ಜಿ.ಪಂ. ಸದಸ್ಯ ಅರುಣ್ ಕುಮಾರ್, ದಲಿತ ಮುಖಂಡರಾದ ವರದರಾಜು, ಹೊನ್ನಯ್ಯ, ನಂಜಪ್ಪ, ರಾಮಚಂದ್ರಯ್ಯ, ನರಸಿಂಹಪ್ರಸಾದ್, ಬಿಸಿಎಂ ಅಧಿಕಾರಿ ಪಾರ್ವತಮ್ಮ ಸಮಾಜ ಕಲ್ಯಾಣಾಧಿಕಾರಿ ಜಯಣ್ಣ, ಉಮೇಶ್, ವಸಂತ್, ಹೇಮಾ, ಮಂಜು ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
