ಹಗರಿಬೊಮ್ಮನಹಳ್ಳಿ:
ತಾಲೂಕಿನ ಕೇಶವರಾಯನಬಂಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಕರಿಯಮ್ಮದೇವಿ ದೇವಸ್ಥಾನವನ್ನು ಲೋಕಾರ್ಪಣೆ ಮಾಡಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನಿಧ್ಯ ವಹಿಸಿದ್ದ ಕೊಪ್ಪಳ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಇಂದಿನ ದಿನಮಾನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹೇರಳವಾಗುತ್ತಿರುವ ದಿನಗಳಲ್ಲಿ 125 ಮನೆಗಳನ್ನು ಹೊಂದಿರತಕ್ಕಂತಹ ಪುಟ್ಟ ಗ್ರಾಮದ ನಾಗರೀಕರು ತಾವೇ ವಂತಿಗೆ ಹಾಕಿಕೊಂಡು ವಿನೂತನವಾದ ದೇವಸ್ಥಾನ ನಿರ್ಮಾಣ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಅಂದಿನ ಕಾಲದಲ್ಲಿ ರಾಜ ಮಹಾರಾಜರು ಹಂಪೆಯನ್ನು ನಿರ್ಮಾಣ ಮಾಡಿದ್ದರು. ಅದೇ ಮಾದರಿಯಲ್ಲಿ ಈ ಗ್ರಾಮದ ಜನ ದೇವಸ್ಥಾನವನ್ನು ನಿರ್ಮಾಣ ಮಾಡಿ ಧಾರ್ಮಿಕ ಧ್ವಜವನ್ನು ಎತ್ತಿ ಹಿಡಿದಿದ್ದಾರೆ. ಇದರ ಜೊತೆಗೆ ತಮ್ಮ ಮಕ್ಕಳನ್ನು ವಿದ್ಯಾರಂತರನ್ನಾಗಿ ಮಾಡಿದಾಗ ಮಾತ್ರ ನಾವು ಹೃದಯ ಶ್ರೀಮಂತರಾಗಿ ಇರಲು ಸಾಧ್ಯ ಎಂದು ಹೇಳಿದರು.
ಧರ್ಮ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಭೀಮಾನಾಯ್ಕ ಮಾತನಾಡಿ ಈ ಗ್ರಾಮಕ್ಕೆ ಯಾವುದೇ ತೊಂದರೆಗಳು ಬಾರದಿರಲಿ. ಎಲ್ಲಾ ತೊಂದರೆಗಳನ್ನು ನಿವಾರಿಸಿ ಗ್ರಾಮದ ಜನರ ನೆಮ್ಮದಿಯನ್ನು ಕಾಪಾಡಲು ಆದಿಶಕ್ತಿ ಕರಿಯಮ್ಮದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದು ಗ್ರಾಮದ ನಾಗರೀಕರ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ. ಕರಿಯಮ್ಮ ದೇವಿಯ ದೇವಸ್ಥಾನಕ್ಕೆ ಶಾಸಕರ ಅನುದಾನದಲ್ಲಿ ರೂ.3 ಲಕ್ಷಗಳನ್ನು ಮುಂಜೂರು ಮಾಡಲಾಗಿದೆ. ಕೇವಲ ಒಂದೇ ಧರ್ಮಕ್ಕೆ ಸೀಮತವಾಗದ ಈ ದೇವಸ್ಥಾನವನ್ನು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.
ತಾಲೂಕು ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬುಡ್ಡಿ ಬಸವರಾಜ ಮಾತನಾಡಿದರು. ವೇದಿಕೆಯ ಮೇಲೆ ಗ್ರಾಮದ ಬಣಕಾರ ಮುದುಕಜ್ಜ, ಮೇಟಿ ಹನುಮಂತಪ್ಪ, ವಾಲ್ಮೀಕಿ ಸಮಾಜದ ಅಧ್ಯಕ್ಷ ದೇವೇಂದ್ರಪ್ಪ, ಹುಡೇದ ಗುರುಬಸವರಾಜ, ಡಿಶ್ ಮಂಜುನಾಥ ಇದ್ದರು. ಇದಕ್ಕು ಮುನ್ನ ಗ್ರಾಮದ ಮಹಿಳೆಯರು ಕಳಸ, ಕುಂಭ, ಸಮಾಳ, ನಂದಿಕೋಲಿನೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಗ್ರಾಮದ ಮುಖಂಡರಾದ ಪಿ.ಗಣೇಶ್, ಈಶಣ್ಣ, ಪಿ.ಚನ್ನಪ್ಪ, ಯು.ಶಿವಾನಂದಪ್ಪ, ಹೆಚ್.ಹನುಮಂತಪ್ಪ, ಭೋಜಪ್ಪ, ಗಂಟಿ ಕಡ್ಲೆಪ್ಪ, ಸಕ್ರಪ್ಪ, ವಿರುಪಾಕ್ಷಪ್ಪ, ಜಂಬಣ್ಣ, ಶಿವಾನಂದಪ್ಪ, ಮರಿಚನ್ನಪ್ಪ, ನೂರಾರು ಜನ ಭಾಗವಹಿಸಿದ್ದರು.