ಗೌರಿಬಿದನೂರು
ಕಡಬೂರುವಿನಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಲ್ಲಿ ಸಿಡಿಲು ಗುಡಿಸಲಿಗೆ ಬಡಿದು ಬೆಂಕಿ ಹೊತ್ತಿಕೊಂಡು ಸೀಮೆ ಹಸು ಕರು ಸಜೀವದಹನವಾಗಿವೆ.
ಘಟನೆಯಲ್ಲಿ ಕೇವಲ ನೋಡ ನೋಡುತ್ತಿದ್ದಂತೆ 5 ನಿಮಿಷದಲ್ಲಿ ಗುಡಿಸಲು ಬೆಂಕಿಗಾಹುತಿಯಾಗಿ ಸೀಮೆ ಹಸು ಕರು ಸುಟ್ಟು ಕರಕಲಾದರೆ ಉಳಿದ ಮೂರು ಸೀಮೆಹಸುಗಳು ತೀವ್ರತರವಾದ ಸುಟ್ಟುಗಾಯಗಳಿಂದ ಸಾವು ಬದುಕಿನ ನಡುವೆ ನರಳಾಟ ನಡೆಸಿವೆ.
ಬಾಲಪ್ಪ-ನರಸಮ್ಮ ದಂಪತಿಗೆ ಸೇರಿದ ಸೀಮೆಹಸುಗಳಾಗಿವೆ. ಸಿಡಿಲಿನ ಅರ್ಭಟಕ್ಕೆ ಬೆಚ್ಚಿಬಿದ್ದು ಗುಡಿಸಲಿನಿಂದ ಓಡಿ ಬಂದಿರೋ ಬಾಲಪ್ಪ-ನರಸಮ್ಮ ದಂಪತಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಬದುಕಿಗೆ ಆಧಾರವಾಗಿದ್ದ ಸೀಮೆಹಸುಗಳು ಕಣ್ಣೇದುರೇ ಬೆಂಕಿಗಾಹುತಿಯಾದ ದೃಶ್ಯ ಕಂಡ ದಂಪತಿ ಕಣ್ಣೀರಧಾರೆಯೇ ಹರಿದಿದೆ.
ಜೀವನಧಾರ ಹಸುಗಳನ್ನ ಕಳೆದುಕೊಳ್ಳುವ ಆತಂಕದಲ್ಲಿರೋ ಬಡ ದಂಪತಿಗೆ ದಿಕ್ಕುತೋಚದಂತಾಗಿ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಮತ್ತೊಂದೆಡೆ ಸಿಡಲಿನ ಅರ್ಭಟಕ್ಕೆ ಇದೇ ಗ್ರಾಮದ ವೆಂಕಟನಾರಾಯಣಪ್ಪನವರ ವಠಾರದಲ್ಲಿದ್ದ ತೆಂಗಿನಮರಕ್ಕೂ ಸಹ ಬೆಂಕಿ ಹೊತ್ತಿಕೊಂಡು ಧಗ ಧಗ ಅಂತ ಹೊತ್ತಿಉರಿದಿದೆ. ಅಲ್ಲದೆ ಇದೇ ಗ್ರಾಮದಲ್ಲಿ ಸಿಡಿಲು ಬಡಿದು ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.