ಶಿರಾ
ನಗರದ ಐತಿಹಾಸಿಕ ಪ್ರಸಿದ್ಧ ಕಸ್ತೂರಿ ರಂಗಪ್ಪ ನಾಯಕನ ಕೋಟೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಈ ನಡುವೆ ಕೋಟೆಯ ಸೌಂದರ್ಯವನ್ನು ಕೆಲ ಕಿಡಿಗೇಡಿಗಳು ಹಾಳು ಗೆಡವುತ್ತಿದ್ದಾರೆ. ಈ ಕೂಡಲೆ ಕೋಟೆಯ ಸಂರಕ್ಷಣಾ ಕಾರ್ಯದಲ್ಲಿ ಸಂಬಂಧಪಟ್ಟವರು ಗಮನ ಹರಿಸಬೇಕೆಂದು ಶ್ರೀ ರಾಜಾ ಕಸ್ತೂರಿ ರಂಗಪ್ಪ ನಾಯಕನ ಕೋಟೆ ಸಂರಕ್ಷಣಾ ಸಮಿತಿಯ ಗೌ.ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಾ.ಲಿಂಗಯ್ಯ ಒತ್ತಾಯಿಸಿದ್ದಾರೆ.
ನಗರದ ಕಸ್ತೂರಿ ರಂಗಪ್ಪ ನಾಯಕನ ಕೋಟೆಯ ಪ್ರಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಾ ಕಸ್ತೂರಿ ರಂಗಪ್ಪ ನಾಯಕನು ಶಿರಾ ಪ್ರಾಂತ್ಯವನ್ನು ರತ್ನಗಿರಿ ಸಂಸ್ಥಾನ ಹಾಗೂ ಮೈಸೂರು ಸಂಸ್ಥಾನವಿದ್ದಾಗ ಅಗ್ರಸ್ಥಾನಕ್ಕೇರಿಸಿದನು. ರಾಜರ ಆಳ್ವಿಕೆಯ ನಂತರ ಇತ್ತೀಚಿನ ದಿನಗಳಲ್ಲಿ ನಿಧಿಗಳ್ಳರ ಹಾವಳಿಯಿಂದ ಕೋಟೆಯು ಹಾಳಾಗಿತ್ತು. ಇದೀಗ ಕೋಟೆಯ ಅಭಿವೃದ್ಧಿ ಕಾರ್ಯವನ್ನು ಪ್ರಾಚ್ಯ ವಸ್ತು ಮತ್ತು ಸಂರಕ್ಷಣಾ ಇಲಾಖೆಯು ಕೈಗೊಂಡಿದೆ ಎಂದರು.
ಕೋಟೆಯನ್ನು ಅಭಿವೃದ್ಧಿಪಡಿಸಲು ಐದು ಕೋಟಿ ರೂ.ಗಳಿಗೂ ಹೆಚ್ಚು ಹಣ ಮಂಜೂರಾಗಿದ್ದು, ಕಾಮಗಾರಿಯೂ ನಡೆಯುತ್ತಿದೆ. ಕೋಟೆಯ ಸುತ್ತಲಿನ ಗೋಡೆಯ ಕಾಮಗಾರಿ ನಡೆದಿದ್ದು, ಆರಕ್ಷಕ ಸಿಬ್ಬಂದಿಯ ಭದ್ರತೆಯ ನಡುವೆಯೂ ಕೆಲ ಕಿಡಿಗೇಡಿಗಳು ಗೋಡೆಗಳ ಮೇಲೆ ಪ್ರೇಯಸಿಯರ ಹೆಸರನ್ನು ಕೆತ್ತಿ, ಐತಿಹಾಸಿಕ ಕೋಟೆಯ ಘನತೆ-ಗೌರವಕ್ಕೆ ಕಳಂಕ ತರುತ್ತಿದ್ದಾರೆ. ಈ ಕೂಡಲೆ ಇಂತಹ ಕಿಡಿಗೇಡಿಗಳನ್ನು ಕೋಟೆಯ ಅಭಿವೃದ್ಧಿ ಪೂರ್ಣಗೊಳ್ಳುವವರೆಗೂ ಪ್ರಾಂಗಣಕ್ಕೆ ಬಾರದಂತೆ ಕ್ರಮ ಕೈ ಗೊಳ್ಳಬೇಕು ಎಂದರು.
ಮತ್ತೋರ್ವ ಗೌ.ಅಧ್ಯಕ್ಷ ಜೆ.ಎನ್.ರಾಜಸಿಂಹ ಮಾತನಾಡಿ, ಶಿರಾ ಭಾಗದ ಐತಿಹಾಸಿಕತೆಯನ್ನು ಉಳಿಸಿಕೊಳ್ಳಲು ಈ ಕೋಟೆ ಸಾಕ್ಷ್ಯವಾಗಿದ್ದು, ಅಭಿವೃದ್ಧಿಗೊಳ್ಳುತ್ತಿರುವ ಗೋಡೆಯ ಮೇಲೆ ಅಪಮಾನಕರವಾಗುವಂತಹ ಬರಹಗಳನ್ನು ಕಲ್ಲಿನಿಂದ ಕೆತ್ತಿ ಕೋಟೆಯ ಅಭಿವೃದ್ಧಿಗೆ ಕೆಲವರು ಮಾರಕವಾಗಿದ್ದು, ಅಂತಹವರ ಮೇಲೆ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದರು.
ಸಮಿತಿಯ ಗೌ.ಅಧ್ಯಕ್ಷ ಸಿ.ದಾಸಪ್ಪ, ಅಧ್ಯಕ್ಷ ಧರಣಿಕುಮಾರ್, ಉಪಾಧ್ಯಕ್ಷ ಸುರೇಶ್, ಜಯರಾಮ್, ಕೃಷ್ಣ, ಪ್ರ.ಕಾರ್ಯದರ್ಶಿ ರಂಗರಾಜು, ವಕೀಲ ಶಿರಾ ವೆಂಕಟೇಶ್, ತುಳಸಿರಾಮ್, ಮಹೇಶ್, ಮೋಹನ್ಬೊಮ್ಮಣ್ಣ, ಚಂದ್ರಶೇಖರ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.