ರಾಣಿಬೆನ್ನೂರ:
ನಗರದಲ್ಲಿ ಹಿಂದೂ ವಿರಾಟ ಗಣಪತಿ ವಿಸರ್ಜನೆಯ ಸಮಯದಲ್ಲಿ ಕೆಲವು ಕಿಡಿಗೇಡಿಗಳು ನಡೆಸಿದ ಗಲಾಟೆಯಿಂದ ಶಾಂತಿ ಕದಡಿದಂತಾಗಿದೆ. ಸಮಾಜದ ಎಲ್ಲಾ ಮುಸ್ಲಿಂ ಬಾಂಧವರು ಸಭೆ ಸೇರಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುವುದಾಗಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ವಹಾಬ್ ಸೇಫಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಪೊಲೀಸರು ತಗೆದ ವಿಡಿಯೋ ಚಿತ್ರೀಕರಣದಲ್ಲಿಯ ವ್ಯಕ್ತಿಗಳನ್ನು ಗುರುತು ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗುವುದು ಎಂದರು.
ಭಾರತ ದೇಶವು ಹಿಂದೂ ಮುಸ್ಲೀಂ ಕ್ರೈಸ್ತ ಎಲ್ಲರಿಗೂ ಒಂದೇ ತಾಯ್ನಾಡಾಗಿದ್ದು ಇಲ್ಲಿ ಅನಾಧಿ ಕಾಲದಿಂದಲೂ ಶಾಂತಿಯುತವಾಗಿ ಬಾಳುತ್ತಾ ಬಂದಿದ್ದೇವೆ. ಇನ್ನೂ ಮುಂದೆಯೂ ಸಹ ಅದೇ ರೀತಿ ಬಾಳುವ ಸಂಕಲ್ಪ ನಮ್ಮದಾಗಿದ್ದು, ತಾಲೂಕಿನ ಹಿಂದೂ ಮುಸ್ಲೀಂ ಬಾಂಧವರು ಸಹೋದರತೆಯಿಂದ ಬಾಳುತ್ತಿದ್ದು, ಈಗಲೂ ಸಹ ಕೆಲವು ಹಳ್ಳಿಗಳಲ್ಲಿ ಹಿಂದೂ ಮುಸ್ಲೀಂರು ಅಣ್ಣ, ಮಾವ, ಕಕ್ಕ, ದೊಡ್ಡಪ್ಪ, ಅಕ್ಕ, ತಂಗಿ, ಅಮ್ಮ ಎಂದು ಸಂಬೋಧಿಸುವ ಸಂಪ್ರದಾಯ ಚಾಲ್ತಿಯಲ್ಲಿದೆ. ಈಗಿದ್ದು, ಕೆಲವು ಕಿಡಿಗೇಡಿಗಳು ಮಾಡಿದ ತಪ್ಪಿನಿಂದಾಗಿ ಎರಡೂ ಸಮಾಜದವರ ಮಧ್ಯ ಕಂದಕ ನಿರ್ಮಾಣ ಮಾಡಲು ಮುಂದಾಗಿರುವುದು ಖೇಧಕರ ಸಂಗತಿಯಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಮಹಬೂಬ್ಅಲಿ ಕರ್ಜಗಿ, ಫಯಾಜ್ ಅಹ್ಮದ್ ಅತ್ತಾರ, ಎಸ್.ಎಂ.ಜವಳಿ, ನೂರುಲ್ಲಾ ಖಾಜಿ, ಅಹ್ಮದ್ ಸೌದಾಗಾರ ಸೇರಿದಂತೆ ಮತ್ತಿತರ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
